ಡೆಲ್ ಪಾಯಲ್ ಹತ್ಯೆ, ಕೊನೆಗೂ ತನಿಖೆ ಶುರು
ಕಳೆದ ಮಾರ್ಚ್ ತಿಂಗಳಿನಲ್ಲಿ ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ತನಿಖೆ ನಡೆಸುವಂತೆ ನಿರ್ದೇಶಿಸಿತ್ತು. ಸಿಬಿಐ ತಂಡ ಈಗ ಸುರೇಖಾ ಪತಿ ಅನಂತನಾರಾಯಣ ಮಿಶ್ರಾ ಹಾಗೂ ಆತನ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದು ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸಲು ಸಿದ್ದತೆ ನಡೆಸಿದೆ.
ಪಾಯಲ್ ತಂದೆ ದೀನದಯಾಳ್ ಸುರೇಖಾ ಮತ್ತು ಆರೋಪಿ ಜೇಮ್ಸ ಕುಮಾರ್ ರೇ ಸಲ್ಲಿಸಿದ ಎರಡು ಪ್ರತ್ಯೇಕ ಮೇಲ್ಮನವಿಗಳ ವಿಚಾರಣೆ ನಡೆಸಿದ ನ್ಯಾ. ಕೆ.ಎಸ್.ರಾಧಾಕೃಷ್ಣನ್ ಹಾಗೂ ನ್ಯಾ. ದೀಪಕ್ ಮಿಶ್ರ ಅವರಿದ್ದ ನ್ಯಾಯಪೀಠ ಸಿಬಿಐ ತನಿಖೆಗೆ ನಿರ್ದೇಶಿಸಿತ್ತು.
ಡೆಲ್ ಬಿಪಿಒ ಉದ್ಯೋಗಿ, ಜೆಪಿನಗರ ಏಳನೇ ಹಂತದ ನಿವಾಸಿ ಪಾಯಲ್ ಸುರೇಖಾ(29) ಅಮಾನುಷ ಕೊಲೆ ಕೇಸ್ ಕ್ಲೋಸ್ ಆಗಿತ್ತು. ಈ ಪ್ರಕರಣ ತನಿಖೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಷರಾ ಹಾಕಿ ಸಿಬಿಐ ತನ್ನ ಅಫಿಡವಿಟ್ ಅನ್ನು ಗುರುವಾರ (ಏ.19) ಹೈಕೋರ್ಟ್ ಗೆ ಸಲ್ಲಿಸಿತ್ತು.
ಸಿಬಿಐ ಸಲ್ಲಿಸಿದ ಅಫಿಡವಿಟ್ ಪರಿಶೀಲಿಸಿದ ನ್ಯಾ ಆನಂದ್ ಅವರು ಎಸಿಪಿ ಜಿತೇಂದ್ರನಾಥ್ ಅವರಿಗೆ ನಿರ್ದೇಶನ ನೀಡಿ ಡಿಸಿಪಿ ಮಟ್ಟದ ಅಧಿಕಾರಿಗಳಿಂದ ತನಿಖೆ ಮುಂದುವರೆಸುವಂತೆ ಸೂಚಿಸಿದ್ದರು.
ಅಸ್ಸಾಂ ಮೂಲದ ಪಾಯಲ್ (29) ಅವರನ್ನು ಡಿ.17,2010ರಂದು ಜೆಪಿ ನಗರದ ತಮ್ಮ ಅಪಾರ್ಟ್ಮೆಂಟ್ ನಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಸಿಸಿಬಿ ಪೊಲೀಸರು ಜೇಮ್ಸ ಕುಮಾರ್ ರೇ ಅವರನ್ನು ನಾಲ್ಕು ದಿನದ ನಂತರ ಬಂಧಿಸಿದ್ದರು. ಅನಂತರ ಸುಪ್ರೀಂ ಕೋರ್ಟಿನಿಂದ ಜಾಮೀನು ಪಡೆದ ರೇ ಸಿಬಿಐ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.
ಸಿಬಿಐ ನಿರ್ಣಯಕ್ಕೆ ಕಾರಣ? : ಕೆಳ ಹಂತದ ನ್ಯಾಯಾಲಯ ಸಿಬಿಐಗೆ ನಿರ್ದೇಶನ ನೀಡುವ ಅಧಿಕಾರ ಇಲ್ಲ ಎನ್ನುವ ಸಣ್ಣ ಕಾರಣ ಹಿಡಿದುಕೊಂಡು ತನಿಖೆ ವಿಳಂಬಗೊಳಿಸಿದ ಸಿಬಿಐ, ಈಗ ಕೇಸ್ ನಿಂದ ಕೈತೊಳೆದುಕೊಂಡಿತ್ತು.
ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ಮಾತ್ರ ತನಿಖೆ ಆದೇಶಿಸಿದರೆ ಪ್ರಕರಣ ಕೈಗೆತ್ತಿಕೊಳ್ಳಬೇಕು ಎಂಬ ಅಲಿಖಿತ ನಿಯಮವನ್ನು ಪಾಲಿಸುತ್ತಾ ಬಂದಿರುವ ಸಿಬಿಐ ಸೂಪಿರಿಯಾರಿಟಿ ಕಾಂಪ್ಲೆಕ್ಸ್ ಗೆ ಒಳಗಾದಂತೆ ನಡೆದುಕೊಳ್ಳುತ್ತಿರುವುದು ಪಾಯಲ್ ತಂದೆ ಆಕ್ರೋಶಕ್ಕೆ ಕಾರಣವಾಗಿತ್ತು.
ಪೊಲೀಸ್ ಫೈಲ್ ಕ್ಲೋಸ್ ಆಗಿದೆ: ಪಾಯಲ್ ಸುರೇಖಾ ಕೊಲೆ ಕೇಸಿಗೆ ಮುಕ್ತಾಯ ಹಾಡಿರುವ ಜೆಪಿ ನಗರ ಪೊಲೀಸರು, ಪಾಯಲ್ ಪತಿ ಅನಂತ್ ನಾರಾಯಣ ಮಿಶ್ರಾ ಹೇಳಿಕೆ ಪಡೆದು ಆತನ ಬಿಸಿನೆಸ್ ಪಾರ್ಟ್ನರ್ ಜೇಮ್ಸ್ ಕುಮಾರ್ ರಾಯ್ ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದರು.
ಆದರೆ, ಪಾಯಲ್ ತಂದೆ ಮಾತ್ರ 'ನನ್ನ ಮಗಳ ಅತ್ತೆ ಮನೆಯರ ಕೈವಾಡ ಇದೆ ಎಂದು ಶಂಕೆ ವ್ಯಕ್ತಪಡಿಸಿ ಸಿಬಿಐ ತನಿಖೆಗೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಸಿಬಿಐ ಸಂಸ್ಥೆಯ ಬದಲಿಗೆ ಪೊಲೀಸರ ಕೈಗೆ ಕೇಸ್ ಒಪ್ಪಿಸಿತ್ತು.
ಮಹಿಳೆ ಪತಿ ಕಟಕ್ ನ ಅನಂತ ನಾರಾಯಣ ಮಿಶ್ರ ಅವರನ್ನು ವಿಚಾರಣೆಗೆ ಒಳಪಡಿಸಿಲ್ಲ ಸುಪ್ರೀಂ ಕೋರ್ಟ್ ಗೆ ಪಾಯಲ್ ತಂದೆ ಮೇಲ್ಮನವಿ ಸಲ್ಲಿಸಿದ್ದರು. ಒರಿಸ್ಸಾದಲ್ಲಿ ಡಿವೈಎಸ್ ಪಿ ಆಗಿ ಕೆಲಸ ಮಾಡುತ್ತಿರುವ ಅನಂತ ನಾರಾಯಣ ಮಿಶ್ರಾ ಅವರ ತಂದೆತಾಯಿ ಬೆಂಗಳೂರು ಪೊಲೀಸರ ಮೇಲೆ ಪ್ರಭಾವ ಬೀರಿ ತನಿಖೆ ದಿಕ್ಕು ತಪ್ಪಿಸಿದ್ದಾರೆ ಎಂದು ತ್ರಿಪಾಠಿ ದೂರಿದ್ದರು.