ಫಿಕ್ಸಿಂಗ್ : ತಿಹಾರ್ ಜೈಲಿಗೆ ಹೊರಟ ಶ್ರೀಶಾಂತ್
ಶ್ರೀಶಾಂತ್ ಸೇರಿದಂತೆ ಇತರೆ ಆರೋಪಿಗಳನ್ನು ಮಂಗಳವಾರ (ಮೇ.28) ನ್ಯಾಯಾಂಗ ಬಂಧನಕ್ಕೆ ದೆಹಲಿ ಸಾಕೇರ್ ಕೋರ್ಟ್ ಆದೇಶಿಸಿದೆ. ರಾಜಸ್ತಾನ್ ರಾಯಲ್ಸ್ ತಂಡದ ಆಟಗಾರ ಶ್ರೀಶಾಂತ್, ಅಂಕಿತ್ ಚೌವ್ಹಾಣ್ ಹಾಗೂ ಅಜಿತ್ ಚಂಡಿಲಾರನ್ನು ತಿಹಾರ್ ಜೈಲಿಗೆ ಕಳುಹಿಸುವ ಸಾಧ್ಯತೆ ಇದೆ.
ಪೊಲೀಸ್ ಬಂಧನದ ಅವಧಿ ಮಂಗಳವಾರಕ್ಕೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶ್ರೀಶಾಂತ್ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಬಂಧನ ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು. ಆದರೆ ಪೊಲೀಸರ ಮನವಿಯನ್ನು ತಿರಸ್ಕರಿಸಿದ ಕೋರ್ಟ್, ಜೂನ್ 4ರವರೆಗೆ ಶ್ರೀಗೆ ನ್ಯಾಯಾಂಗ ಬಂಧನ ಅವಧಿಯನ್ನು ವಿಸ್ತರಿಸಿದೆ.
ಅಂಕಿತ್ ಮದುವೆ ?: ಈ ಮಧ್ಯೆ ಶ್ರೀಶಾಂತ್ ಸಲ್ಲಿಸಿರುವ ಜಾಮೀನು ಅರ್ಜಿ ಜೂನ್ 3ಕ್ಕೆ ವಿಚಾರಣೆಗೆ ಬರಲಿದ್ದು, ಅಲ್ಲಿಯವರೆಗೆ ಶ್ರೀಶಾಂತ್ ಗೆ ತಿಹಾರ್ ಜೈಲೇ ಗತಿ. ಅಂಕಿತ್ ಚೌವ್ಹಾಣ್ ಮದುವೆ ಬಹುಶಃ ಮುರಿದು ಬೀಳುವ ಸಾಧ್ಯತೆ ಹೆಚ್ಚಿದೆ. ಇನ್ನೆರಡು ದಿನಗಳಲ್ಲಿ ವಧುವಿಗೆ ತಾಳಿ ಕಟ್ಟಬೇಕಿದ್ದ ಅಂಕಿತ್ ಈಗ ತಿಹಾರ್ ಜೈಲಿನ ಕಡೆ ಹೊರಟ್ಟಿದ್ದಾರೆ.
ಅಸಾದ್ ರೌಫ್ ಎಲ್ಲಿ?: ಪಾಕಿಸ್ತಾನಿ ಅಂಪೈರ್ ಅಸಾದ್ ರೌಫ್ ಅವರು ಐಪಿಎಲ್ ಟೂರ್ನಿ ಮುಗಿಸಿಕೊಂಡು ತಮ್ನ ದೇಶಕ್ಕೆ ಮರಳಿದ್ದಾರೆ. ಆದರೆ, ಸಿಎನ್ ಎನ್ ಐಬಿನ್ ಪ್ರಕಾರ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಫ್ ವಿಚಾರಣೆ ನಡೆಸಲು ಮುಂಬೈ ಪೊಲೀಸರು ಸಿದ್ದರಾಗುತ್ತಿದ್ದಾರೆ.
ಈ ಹಿಂದೆ ಕೂಡಾ ಬೆಟ್ಟಿಂಗ್ ಅಕ್ರಮದಲ್ಲಿ ಅಸಾದ್ ಹೆಸರು ಕೇಳಿ ಬಂದಿತ್ತು. ಇದಕ್ಕೆ ಪಿಸಿಬಿ ಕೂಡಾ ತಣ್ಣಗೆ ಪ್ರತಿಕ್ರಿಯೆ ನೀಡಿತ್ತು. ಆದರೆ, ಐಸಿಸಿ ಅಂಪೈರ್ ಪಟ್ಟಿಯಿಂದ ರೌಫ್ ಅವರನ್ನು ಹೊರಗಿಟ್ಟ ನಂತರ ರೌಫ್ ಅವರ ವಿಚಾರಣೆ ನಡೆಯುವುದು ಬಹುತೇಕ ಖಚಿತ ಎನ್ನಲಾಗಿದೆ. ಈ ಮೂಲಕ ಸ್ಪಾಟ್ ಫಿಕ್ಸಿಂಗ್ ನ ಅಂತಾರಾಷ್ಟ್ರೀಯ ಜಾಲದ ಮಾಹಿತಿ ಹೊರ ಹಾಕಲು ಮುಂಬೈ ಪೊಲೀಸರು ಸಜ್ಜಾಗಿದ್ದಾರೆ.
ದೆಹಲಿ ಕ್ರಿಕೆಟರ್ ಮೇಲೆ ಕಣ್ಣು?: ಫಿಕ್ಸಿಂಗ್ ಕುರಿತಂತೆ ಟಿವಿ ಮಾಧ್ಯಮಗಳ ಜೊತೆಗೆ ಪತ್ರಿಕೆಗಳಲ್ಲಿ ಕಲ್ಪಿತ ಸುದ್ದಿಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಕಿಡಿಕಾರಿದ್ದು ಇದೆ. ಈಗ ಡೆಕ್ಕನ್ ಕ್ರೊನಿಕಲ್ ವರದಿಯಂತೆ ದೆಹಲಿ ಪೊಲೀಸರು ಯುವ ಆಟಗಾರ ಉನ್ಮುಕ್ತ್ ಚಂದ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿ ಬಂದಿದ್ದಾರಂತೆ. ಈ ವರ್ಷ ವಿಶ್ವಕಪ್ ಗೆದ್ದ 19 ವರ್ಷ ವಯೋಮಿತಿಯೊಳಗಿನ ತಂಡದ ನಾಯಕನಾದ ಉನ್ಮುಕ್ತ್ ಚಂದ್ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡಿದ್ದರು.
ವಿಂದೂ ಬಂಧನ ವಿಸ್ತರಣೆ: ಬಾಲಿವುಡ್ ನಟ ವಿಂದೂ ಸಿಂಗ್ ಹಾಗೂ ಬುಕ್ಕಿಗಳ ಬಂಧನ ಅವಧಿಯನ್ನು ಮೇ 31ರ ವರೆಗೆ ವಿಸ್ತರಿಸಲಾಗಿದೆ. ವಿಂದೂ ಹೆಸರಿಸಿರುವ ಚೆನ್ನೈ ಹೋಟೆಲ್ ಮಾಲೀಕ ವಿಕ್ರಮ್ ಅಗರವಾಲ್ ನಾಪತ್ತೆಯಾಗಿದ್ದು, ಚೆನ್ನೈ ಪೊಲೀಸರು ನೋಟಿಸ್ ಜಾರಿಮಾಡಿದ್ದಾರೆ. ಕೋಡ್ ನೇಮ್ ನಲ್ಲಿ 'ವಿಕ್ಟರ್' ಹೆಸರಿಸಲ್ಪಟ್ಟ ವಿಕ್ರಮ್ ಅವರು ವಿಂದೂ ದಾರಾ ಸಿಂಗ್ ಹಾಗೂ ಗುರುನಾಥ್ ಮೇಯಪ್ಪನ್ ಅವರ ಆಪ್ತ ಎನ್ನಲಾಗಿದೆ.