ಹನಿ-ಹನಿ ನೀರು ಉಳಿಸಲು ಜಲಮಂಡಳಿ ತಂತ್ರ
ಬೆಂಗಳೂರು ಜಲಮಂಡಳಿ ಮತ್ತು ಸಿಂಗಪುರ ಕೋ ಆಪರೇಷನ್ ಎಂಟರ್ ಪ್ರೈಸಸ್ ಜಂಟಿಯಾಗಿ ನೀರಿನ ಪುನರ್ಬಳಕೆ ಮತ್ತು ಸೋರಿಕೆ ತಡೆಗಟ್ಟುವ ಬಗ್ಗೆ ಸಂಶೋಧನೆ ನಡೆಸಲು ಒಪ್ಪಂದ ಮಾಡಿಕೊಂಡಿವೆ. ಸೋಮವಾರ ನಡೆದ ಎರಡು ಸಂಸ್ಥೆಗಳ ಕಾರ್ಯಾಗಾರದಲ್ಲಿ ನೀರಿನ ಪುನರ್ಬಳಕೆ ಬಗ್ಗೆ ಚರ್ಚೆ ನಡೆಸಲಾಗಿದೆ.
ಕಾರ್ಯಾಗಾರದಲ್ಲಿ ಹಾಜರಿದ್ದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಗೌರವ್ ಗುಪ್ತಾ, ನಗರದ ನಿರುಪಯುಕ್ತ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಮಾಡಲು, ಸೂಕ್ತ ತಂತ್ರಜ್ಞಾನ ನೀಡುವಂತೆ ಸಿಂಗಪುರ ತಜ್ಞರನ್ನು ಕೋರಿದ್ದಾರೆ. ಜೊತೆಗೆ ನೀರಿನ ಸೋರಿಕೆ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಗೌರವ್ ಗುಪ್ತಾ, ಬೆಂಗಳೂರು ನಗರದಲ್ಲಿ ನಿರುಪಯುಕ್ತ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಯೋಗ್ಯವಾಗಿಸಲು ಕಾರ್ಯಯೋಜನೆ ತಯಾರಿಸಲಾಗುತ್ತಿದೆ. ಇಂತಹ ತಂತ್ರಜ್ಞಾನ ಅಭಿವೃದ್ದಿ ಪಡಿಸಲು ತಜ್ಞರ ಸಲಹೆ ಕೇಳಲಾಗಿದೆ ಎಂದು ಹೇಳಿದರು.
ನೀರಿನ ಪುನರ್ಬಳಕೆ ಮತ್ತು ನೀರು ಸೋರಿಕೆ ತಡೆಗಟ್ಟಲು ಸಿಂಗಪುರ ಉತ್ತಮ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ. ಅವುಗಳನ್ನು ಬೆಂಗಳೂರಿನಲ್ಲೂ ಅಳವಡಿಸಲು ಜಲಮಂಡಳಿ ಚಿಂತನೆ ನಡೆಸಿದೆ. ಇದರಿಂದ ನಗರದ ನೀರಿನ ಸಮಸ್ಯೆ ಪರಿಹಾರವಾಗಲಿದೆ ಎಂದು ಗೌರವ್ ಗುಪ್ತಾ ವಿಶ್ವಾಸ ವ್ಯಕ್ತಪಡಿಸಿದರು.
ನಿರುಪಯುಕ್ತ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಯೋಗ್ಯವಾಗಿಸುವ ಯೋಜನೆ ಒಂದು ಹಂತದವರೆಗೆ ಸೂಕ್ತವಾದದ್ದು ಎಂಬ ಬಗ್ಗೆ ಸಾರ್ವಜನಿಕರ ಸಹಮತವಿದೆ. ಅಂತಹ ಯೋಜನೆ ಅನುಷ್ಠಾನಕ್ಕೆ ತರುವ ಮುಂಚೆ ಕೆಲವು ಸುರಕ್ಷತಾ ಕ್ರಮಗಳನ್ನ ಅನುಸರಿಸಬೇಕಾದ್ದು ಅಗತ್ಯ. ಆ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸಲು ತಜ್ಞರ ಅವಶ್ಯಕತೆ ಇದೆ ಎಂದರು.
ಹಿಂದಿನ ಒಪ್ಪಂದ : ನಿರುಪಯುಕ್ತ ನೀರನ್ನು ಸಂಸ್ಕರಿಸಿ ಪುನರ್ಬಳಕೆ ಯೋಗ್ಯವಾಗಿಸಿ ಪರ್ಯಾಯ ಜಲ ಮೂಲವಾಗಿಸಿಕೊಳ್ಳುವ ಉದ್ದೇಶದಿಂದ ಬೆಂಗಳೂರು ಜಲಮಂಡಳಿ ಮತ್ತು ಸಿಂಗಪುರ ಕೋ ಆಪರೇಷನ್ ಎಂಟರ್ ಪ್ರೈಸಸ್ 2012ರಲ್ಲಿ ಒಪ್ಪಂದ ಮಾಡಿಕೊಂಡಿವೆ. ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಜಂಟಿಯಾಗಿ ಮಾಡಿವೆ.
ಸದ್ಯ ಬೆಂಗಳೂರಿನಲ್ಲಿ ನೀರಿನ ಕೊರತೆ ಉಂಟಾಗಿದ್ದು ಇದರಿಂದ ಭವಿಷ್ಯದ ಸೂಚನೆ ಅರಿತಿರುವ ಜಲಮಂಡಳಿ, ನೀರಿನ ಪುನರ್ಬಳಕೆ ಬಗ್ಗೆ ಆಲೋಚನೆ ನಡೆಸುತ್ತಿದೆ. ಪರಿಣಾಮಕಾರಿಯಾಗಿ ನೀರಿನ ಸೋರಿಕೆ ತಡೆಗಟ್ಟುವ ಕುರಿತು ಆಲೋಚನೆ ನಡೆಸಿದೆ. ತ್ವರಿತವಾಗಿ ಈ ಯೋಜನೆ ಜಾರಿಗೆ ತರಲು ಮುಂದಾಗಿದೆ ಅದಕ್ಕಾಗಿ ಕ್ರಿಯಾ ಯೋಜನೆ ರಚಿಸಲು ತಜ್ಞರ ಸಹಾಯ ಕೋರಿದೆ. [ವಿದ್ಯುತ್ ಸದ್ಬಳಕೆ ಹೇಗೆ?]