ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಸ್ಥಾಪನೆ ಕನಸು ಭಗ್ನ
ಆದರೆ ಭಾರತೀಯ ಸಮಾಜ ವಿಜ್ಞಾನ ಸಂಶೋಧನಾ ಮಂಡಳಿ ಅಧ್ಯಕ್ಷ ಪ್ರೊ. ಸುಖ್ ದೇವ್ ಥೋರಟ್ ನೇತೃತ್ವದ ತಜ್ಞರ ಸಮಿತಿ ಅಂತಹ ವಿವಿ ಸ್ಥಾಪನೆ ಸಾಧ್ಯವಿಲ್ಲ ಎಂದು ರೆಡ್ ಸಿಗ್ನಲ್ ತೋರಿದೆ. ಸಂವಿಧಾನ ಮತ್ತು ಕಾನೂನಿನಲ್ಲಿ ಅವಕಾಶವಿಲ್ಲ ಇದಕ್ಕೆ ಸ್ಥಾನವಿಲ್ಲ. ಹಾಗಾಗಿ ಪ್ರಸ್ತಾವನೆಯನ್ನು ಅನುಮೋದಿಸಲಾಗದು ಎಂದು ಸಮಿತಿ ಸ್ಪಷ್ಟಪಡಿಸಿದೆ.
ಶ್ರೀರಂಗಪಟ್ಟಣದ ಟಿಪ್ಪುಸುಲ್ತಾನ್ ವಿವಿ ಒಳಗೊಂಡಂತೆ ದೇಶದಾದ್ಯಂತ ಐದು ಅಲ್ಪಸಂಖ್ಯಾತ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಮುಂದಾಗಿದ್ದ ಅಲ್ಪಸಂಖ್ಯಾತ ವ್ಯವಹಾರ ಸಚಿವಾಲಯ, ಈ ಬಗ್ಗೆ ಅಧ್ಯಯನ ನಡೆಸಿ ವರದಿ ಕೊಡಲು UGC ಮಾಜಿ ಅಧ್ಯಕ್ಷ ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ ಶಿಕ್ಷಣ- ಕಾನೂನು ತಜ್ಞರ ಸಮಿತಿ ನೇಮಿಸಿತ್ತು.
ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆ ಮಾಡಲು ಸಂವಿಧಾನದಲ್ಲಿ ಅವಕಾಶವಿಲ್ಲ. ಸಂವಿಧಾನದ ಚೌಕಟ್ಟಿನೊಳಗೆ ಸರಕಾರ ಕ್ರಮಕೈಗೊಳ್ಳಬೇಕಿದೆ' ಎಂದು ಥೋರಟ್ ಸಮಿತಿ ಸರಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಹೇಳಿದೆ.
ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿದ್ದ ಅಲ್ಪಸಂಖ್ಯಾತರ ವಿಶ್ವವಿದ್ಯಾಲಯಕ್ಕೆ ಕನ್ನಡದ ಬಗ್ಗೆ ವಿಶೇಷ ಒಲವನ್ನು ಹೊಂದಿದ್ದ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಅವರ ಹೆಸರನ್ನಿಡಬೇಕು ಎಂದು ಕೆಥೋಲಿಕ್ ಕ್ರೈಸ್ತ ಪರ ಸಂಘಟನೆಗಳ ಒತ್ತಾಯಿಸಿದ್ದರೆ ಅಲ್ಪಸಂಖ್ಯಾತರ ಪ್ರತ್ಯೇಕ ವಿವಿಗೆ ಟಿಪ್ಪು ಸುಲ್ತಾನ್ ಹೆಸರೇ ಇಡಬೇಕು ಎಂದು ಮಸ್ಲಿಂ ಸಂಘಟನೆಗಳು ಬಯಸಿದ್ದವು.
ಆದರೆ ಕೇಂದ್ರೀಯ ವಿವಿಗಳನ್ನು ತೆರೆದು ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರವೇಶದಲ್ಲಿ ಆದ್ಯತೆ ಕೊಡಲು ಅಡ್ಡಿಯಿಲ್ಲ ಎಂದು ಸಮಿತಿ ಸೂಚಿಸಿದೆ. ಕೇಂದ್ರೀಯ ವಿವಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರವೇಶ ನೀಡುವಾಗ ನಿಯಮಗಳನ್ನು ಸಡಿಲಿಸಬಹುದು. ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚುವರಿ ಅಂಕ ಕೊಡಬಹುದು. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಮಹಿಳೆಯರು ಹಾಗೂ ಹಿಂದುಳಿದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಈ ರೀತಿ ವಿಶೇಷ ಸೌಲಭ್ಯಗಳಿವೆ ಎಂದು ಸಮಿತಿ ಉದಾಹರಣೆ ನೀಡಿದೆ.