ಆಧಾರ್ ನೋಂದಣಿಗಾಗಿ ಹೊಸ ಕೇಂದ್ರಗಳು : ಸಿಎಂ
ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎ)ದ ಅಧ್ಯಕ್ಷ ನಂದನ್ ನಿಲೇಕಣಿ ಅವರೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದ ಬಳಿಕೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಈಗಾಗಲೇ 1,547 ಕೇಂದ್ರಗಳಿದ್ದು, ಬೆಂಗಳೂರಿನಲ್ಲಿ 486 ಆಧಾರ್ ಕೌಂಟರ್ ಗಳಿವೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಜನರಿಗೆ ಶೀಘ್ರವಾಗಿ ಆಧಾರ್ ಕಾರ್ಡ್ ನೀಡಲು ಸರ್ಕಾರ ತೀರ್ಮಾನಿಸಿದೆ. ಆದ್ದರಿಂದ ಹೆಚ್ಚುವರಿಯಾಗಿ ಆಧಾರ್ ಕಾರ್ಡ್ ವಿತರಣಾ ಕೇಂದ್ರಗಳನ್ನು ತೆರೆಯಲಾಗುವುದು. ಇದಕ್ಕೆ ಅಗತ್ಯವಿರುವ ಕಂಪ್ಯೂಟರ್, ಸಿಬ್ಬಂದಿ ಮುಂತಾದ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ಸೌಲಭ್ಯಗಳನ್ನು ಪಡೆಯಲು ಆಧಾರ್ ಕಡ್ಡಾಯವಾಗಿದೆ. ಆದರೆ, ಪರಿಶಿಷ್ಟ ಜಾತಿ ಮತ್ತು ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ದುರ್ಬಲ ವರ್ಗದವರು 'ಆಧಾರ್' ಕಾರ್ಡ್ ಪಡೆದಿಲ್ಲ ಆದ್ದರಿಂದ ಸೌಲಭ್ಯ ವಂಚಿತರಾಗುತ್ತಿದ್ದಾರೆ.
ರಾಜ್ಯದಲ್ಲಿ ಹೆಚ್ಚಿನ ಆಧಾರ್ ಕೇಂದ್ರಗಳನ್ನು ಪ್ರಾರಂಭಿಸಿ ಎಲ್ಲಾ ವರ್ಗದವರಿಗೂ ಶೀಘ್ರವೇ ಆಧಾರ್ ಕಾರ್ಡ್ ವಿತರಿಸಲು ಸರ್ಕಾರ ಬದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪಡಿತರ ಚೀಟಿಗೂ ಆಧಾರ್ : ಸಾರ್ವಜನಿಕರು ಪಡಿತರ ಚೀಟಿ ಪಡೆಯಲು ಪಹಣಿ ಪತ್ರ, ನಿವಾಸಿ ದೃಢೀಕರಣ ಪತ್ರ ಮತ್ತಿತರ ದಾಖಲಾತಿಗಳನ್ನು ಸಲ್ಲಿಸಬೇಕಾಗಿಲ್ಲ ಕೇಲವ ಆಧಾರ್ ಕಾರ್ಡ್ ನಕಲು ಪ್ರತಿ ಸಲ್ಲಿಸಿದರೆ ಸಾಕು. ಈ ವ್ಯವಸ್ಥೆ ಶೀಘ್ರವೇ ಜಾರಿಗೆ ಬರಲಿದೆ ಎಂದು ಅವರು ಹೇಳಿದರು.
ಪ್ರಸ್ತುತ ಪಡಿತರ ಚೀಟಿ ನೀಡಲು ನಿವಾಸಿ ದೃಢೀಕರಣ ಪತ್ರ ಮುಂತಾದ ದಾಖಲಾತಿಗಳನ್ನು ಗುರುತಿನ ಚೀಟಿಯಾಗಿ ಪರಿಗಣಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್ಗಳನ್ನೂ ಗುರುತಿನ ಚೀಟಿಯಾಗಿ ಪರಿಗಣಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು.
ಆಧಾರ್ ಪ್ರಗತಿ ಶೇ. 36 : ರಾಜ್ಯದಲ್ಲಿ ಮೂರು ಕೋಟಿ ಜನರ ಅಂದರೆ ಶೇ 50ರಷ್ಟು ಜನರು ಆಧಾರ್ ಕಾರ್ಡ್ ಪಡೆಯಲು ಹೆಸರು ನೋಂದಾಯಿಸಿದ್ದಾರೆ. ಎಂದು ಯುಐಡಿಎ ಅಧ್ಯಕ್ಷ ನಂದನ್ ನಿಲೇಕಣಿ ಹೇಳಿದರು.
ಇದುವರೆಗೂ 2.2 ಕೋಟಿ (ಶೇ. 36) ಜನರಿಗೆ ಮಾತ್ರ ಆಧಾರ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ. ನೋಂದಣಿ ಕೌಂಟರ್ ಗಳನ್ನು ಹೆಚ್ಚಿಸಿ, 2013ರ ವರ್ಷಾಂತ್ಯಕ್ಕೆ ರಾಜ್ಯದ ಎಲ್ಲಾ ಜನರಿಗೂ ಆಧಾರ್ ಕಾರ್ಡ್ ನೀಡಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತಕ್ಷಣ ಕಾರ್ಡ್ ಮಾಡಿಸಿ : ಮೈಸೂರು, ತುಮಕೂರು ಮತ್ತು ಧಾರವಾಡ ಜಿಲ್ಲೆಗಳಲ್ಲಿ ಎಲ್ ಪಿಜಿ ಸಬ್ಸಿಡಿ ಸೇರಿದಂತೆ ಸರ್ಕಾರದ ಬಹುತೇಕ ಯೋಜನೆಗಳನ್ನು ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ರಾಜ್ಯಾದ್ಯಂತ ಇದು ಶೀಘ್ರದಲ್ಲೇ ಕಡ್ಡಾಯವಾಗಲಿದೆ. ಆದ್ದರಿಂದ ತಕ್ಷಣ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವಂತೆ ನಿಲೇಕಣಿ ಕರೆ ನೀಡಿದರು. (ಆಧಾರ್ ಗಾಗಿ ಮೂರು ನೂತನ ಸೇವೆಗಳು)