ಸಾಧುವಿನ ರಾಸಲೀಲೆ ಸಿಡಿ ಮತ್ತು ಬ್ಲಾಕ್ ಮೇಲ್!
ಈ ಘಟನೆ ನಡೆದಿರುವುದು ಸ್ವಾಮಿನಾರಾಯಣ ವಿಶ್ವ ಮಂಗಲ ಗುರುಕುಲದಲ್ಲಿ. ಇಲ್ಲಿ ದೇವಸ್ಥಾನ ಮತ್ತು ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಗುರುಕುಲವಿದೆ. ಗುರುಕುಲದ ಕೆಲ ವಿದ್ಯಾರ್ಥಿಗಳು ಕೂಡ ಈ ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದುಬಂದಿದೆ.
ನಡೆದಿದ್ದೇನು? : ಗುರುಕುಲದ ಸಾಧು ಚಪಲ ಚೆನ್ನಿಗರಾಯ. ತನ್ನ ಕಾಮವಾಂಛೆಯನ್ನು ತೀರಿಸಿಕೊಳ್ಳಲು ವಿದ್ಯಾರ್ಥಿಗಳನ್ನೇ ಬಳಸಿಕೊಂಡಿದ್ದಾನೆ. ಬಂಧಿತ ಆರೋಪಿಗಳಲ್ಲಿ ಒಬ್ಬನಾಗಿರುವ ಭವೇಶ್ ಕುಮಾರ್ ಎಂಬುವವನ ಮುಖಾಂತರ ವೇಶ್ಯೆಯರನ್ನು ಸಾಧುವಿಗೆ ಒದಗಿಸುತ್ತಿದ್ದರು. ಪ್ರತಿ ಬಾರಿಯೂ ಕಾಮಿ ಸಾಧು 5 ಸಾವಿರ ರು.ನಿಂದ 10 ಸಾವಿರ ರು.ವರೆಗೆ ಹಣ ವ್ಯಯಿಸುತ್ತಿದ್ದ.
ಭವೇಶ್ ಕುಮಾರ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಚಂದಾಬಾಯಿ ಷಾ ಎಂಬಾಕೆಯ ಮುಖಾಂತರ ವೇಶ್ಯೆಯರನ್ನು ಒದಗಿಸುತ್ತಿದ್ದ. ಸಾಧುವಿನ ಅನೈತಿಕ ಚಟುವಟಿಕೆಯ ದುರ್ಲಾಭ ಪಡೆಯಬೇಕೆಂದು ನಿಶ್ಚಯಿಸಿದ ಭವೇಶ್ ವೇಶ್ಯೆಯರ ಮುಖಾಂತರವೇ ಸಾಧುವಿನ ರಾಸಲೀಲೆಯನ್ನು ಚಿತ್ರೀಕರಿಸಿಕೊಳ್ಳಲು ನಿರ್ಧರಿಸಿದ.
ರಹಸ್ಯ ಕ್ಯಾಮೆರಾ ಬಳಸಿ ವೇಶ್ಯಾಯರನ್ನು ಬಳಸಿಕೊಂಡು ಸಾಧುವಿನ ರಾಸಲೀಲೆಯನ್ನು ಭವೇಶ್ ಚಿತ್ರೀಕರಿಸಿಕೊಂಡುಬಿಟ್ಟಿದ್ದಾನೆ. ನಂತರ ಶುರುವಾಗಿದ್ದು ಬ್ಲಾಕ್ ಮೇಲ್ ಪರ್ವ. ಈ ಹಗರಣ ಗುರುಕುಲದ ಟ್ರಸ್ಟಿಗಳಿಗೆ ಫೋನ್ ಮಾಡಿದ ಭವೇಶ್ ಅನಾಮತ್ 50 ಲಕ್ಷ ರು. ಹಣ ಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾನೆ. ಮೊದಲು ಟ್ರಸ್ಟಿಗಳು ನಿರಾಕರಿಸಿದರೂ ಸಾಧುವಿನ ಅನೈತಿಕ ಚಟುವಟಿಕೆಗಳು ಬಯಲಾದ ನಂತರ ಭವೇಶ್ ಮಾತುಕತೆಗೆ ಮುಂದಾಗಿದ್ದಾರೆ.
ಮೊದಲು ಸಾಧುವನ್ನು ಗುರುಕುಲದಿಂದ ಅಮಾನತು ಮಾಡಿ ಕಲೋಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಬ್ಲಾಕ್ ಮೇಲ್ ಮಾಡುತ್ತಿದ್ದ ಭವೇಶ್ನನ್ನು ರೆಡ್ ಹ್ಯಾಂಡಾಗಿ ಹಿಡಿಯಬೇಕೆಂದು ವ್ಯೂಹ ರಚಿಸಲಾಗಿದೆ. ಇದರ ಭಾಗವಾಗಿ, ಭವೇಶ್ ಜೊತೆ ಟ್ರಸ್ಟಿಗಳು ಮಾತುಕತೆ ನಡೆಸಿ 25 ಲಕ್ಷ ರು. ನೀಡಲು ಒಪ್ಪಿಗೆ ನೀಡಲಾಗಿದೆ ಮತ್ತು ಧಮಾಸಾನ್ ಗ್ರಾಮಕ್ಕೆ ಬರಬೇಕೆಂದು ಭವೇಶ್ಗೆ ಹೇಳಲಾಗಿದೆ.
ಅಶ್ಲೀಲ ಸಿಡಿ ಮತ್ತು ಲ್ಯಾಪ್ ಟಾಪ್ ಸಮೇತ ಭವೇಶ್ ಮತ್ತು ಇತರ ಮೂವರು ಹೇಳಿದ್ದ ಸ್ಥಳಕ್ಕೆ ಹೋಗಿದ್ದಾರೆ. ಗುರುಕುಲದ ಟ್ರಸ್ಟಿಗಳಿಂದ 25 ಲಕ್ಷ ರು. ಇಸಿದು ಹೊರಡಬೇಕು ಎನ್ನುವಷ್ಟರಲ್ಲಿ, ಮರೆಯಲ್ಲಿ ಸಾಮಾನ್ಯ ದಿರಿಸಿನಲ್ಲಿದ್ದ ಪೊಲೀಸರು ದಾಳಿ ಮಾಡಿ ಭವೇಶ್ ಮತ್ತು ಇನ್ನಿಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಬ್ಬ ಪರಾರಿಯಾಗಿದ್ದಾನೆ. ಸಾಧುವನ್ನು ಅಪಹರಿಸಲು ಹೂಡಿ ಸಂಚು ಇದೆಂದು ತಿಳಿದ ಗ್ರಾಮಸ್ಥರು ಪೊಲೀಸರಿಗೆ ಅಡ್ಡಿಪಡಿಸಿದ್ದಾರೆ. ನಂತರ ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ರಾಸಲೀಲೆಯಲ್ಲಿ ಭಾಗಿಯಾಗಿದ್ದ ಮಹಿಳೆಯನ್ನು ಪೊಲೀಸರು ಹುಡುಕುತ್ತಿದ್ದಾರೆ.