ಉತ್ತರ ಕರ್ನಾಟಕಕ್ಕೆ ನೀರು ಬಿಟ್ಟ ಮಹಾರಾಷ್ಟ್ರ
ಮಹಾರಾಷ್ಟ್ರ ಸರ್ಕಾರ ನೀರು ಬಿಟ್ಟಿರುವ ವಿಷಯವನ್ನು ಸಚಿವ ಪ್ರಕಾಶ್ ಹುಕ್ಕೇರಿ ಸ್ಪಷ್ಟಪಡಿಸಿ, ಕಾಳಮ್ಮವಾಡಿ ಜಲಾಶಯದಿಂದ 1 ಟಿಎಂಸಿ ನೀರು ಹಾಗೂ ರಾಜಾಪುರ ಡ್ಯಾಂನಿಂದ 0.5 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಸಿದೆ. ಇದರಿಂದ ಉತ್ತರ ಕರ್ನಾಟಕದ ಬೆಳಗಾವಿ, ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ರಾಜ್ಯದ ಸಚಿವರ ನಿಯೋಗ ಕೃಷ್ಣಾ ನದಿಗೆ ನೀರು ಬಿಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರಕಾರವು ಸಚಿವರ ಮನವಿಗೆ ಒಪ್ಪಿಕೊಂಡು 1.5 ಟಿಎಂಸಿ ನೀರನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಹೆಚ್ಚಿನ ವಿವರ ನಿರೀಕ್ಷಿಸಿಸತತವಾಗಿ 3 ವರ್ಷಗಳ ಭೀಕರ ಬರಗಾಲ ಪರಿಸ್ಥಿತಿಯಿಂದ ತತ್ತರಿಸಿರುತ್ತಿರುವ ಉತ್ತರ ಕರ್ನಾಟಕ ಜನತೆಗೆ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಉತ್ತರ ಕರ್ನಾಟಕದ ಜೀವನದಿ ಕೃಷ್ಣಾ ನದಿ ನೀರು ಬತ್ತಿ ಬರಿದಾಗಿತ್ತು.
ಈ ಹಿನ್ನೆಲೆಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಹಾಗೂ ಸಚಿವ ಪ್ರಕಾಶ್ ಹುಕ್ಕೇರಿ ನೇತೃತ್ವದ ನಿಯೋಗ ಇತ್ತೀಚೆಗೆ ಮುಂಬೈಗೆ ತೆರಳಿ, ಕೃಷ್ಣಾ ನದಿಗೆ 2 ಟಿಎಂಸಿ ನೀರು ಹರಿಸುವಂತೆ ಮನವಿ ಮಾಡಿತ್ತು. ಇಷ್ಟೆ ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಮಹಾರಾಷ್ಟ್ರ ಮುಖ್ಯಮಂತ್ರಿ ಪ್ರಥ್ವಿರಾಜ್ ಚೌಹಾಣ್ ಅವರಿಗೆ ಕರೆ ಮಾಡಿ, ನೀರು ಬಿಡುವಂತೆ ವಿನಂತಿಸಿಕೊಂಡಿದ್ದರು. ರಾಜ್ಯ ಸರ್ಕಾರದ ಈ ಮನವಿಗೆ ಸಮ್ಮತಿ ನೀಡಿದ್ದ ಮಹಾರಾಷ್ಟ್ರದ ಸರ್ಕಾರ ಭಾನುವಾರ ತನ್ನ ಜಲಾಶಯಗಳಿಂದ ನೀರನ್ನು ಬಿಟ್ಟಿದೆ.
ರಾಜ್ಯದ ಬೇಡಿಕೆಯಂತೆ ಮಹಾರಾಷ್ಟ್ರ ಸರ್ಕಾರ ಕೃಷ್ಣಾ ನದಿಗೆ ಕಾಳಮ್ಮವಾಡಿ ಜಲಾಶಯದಿಂದ 1 ಟಿಎಂಸಿ ಹಾಗೂ ರಾಜಾಪುರ ಬ್ಯಾರೇಜ್ನಿಂದ 0.50 ಟಿಎಂಸಿ ನೀರನ್ನು ಭಾನುವಾರ ಮಧ್ಯಾಹ್ನ ಬಿಟ್ಟಿದೆ. ಒಟ್ಟು 1.50 ಟಿಎಂಸಿ ನೀರು ಕೃಷ್ಣೆಯನ್ನು ಸೇರಲಿದೆ. ಆದರೆ, ಈ ಹಿಂದಿನ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸುಮಾರು 4 ಟಿಎಂಸಿ ನೀರು ಬೇಡಿಕೆಗೆ ಬೆಲೆ ಇಲ್ಲದ್ದಂತಾಗಿದೆ.
ಅಂದು ಸಚಿವ ಬಸವರಾಜ ಬೊಮ್ಮಾಯಿ ಅವರು ವರ್ಣಾ ಮತ್ತು ಉಜನಿ ಅಣೆಕಟ್ಟಿನಿಂದ ಕೃಷ್ಣಾ ಹಾಗೂ ಭೀಮಾ ನದಿಗೆ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರವನ್ನು ಕೋರಿದ್ದರು.
ಆದರೆ, ಇದಕ್ಕೆ ಬದಲಾಗಿ ಇಂಡಿ ಮಾರ್ಗವಾಗಿ ನಾರಾಯಣ ಪುರ ಅಣೆಕಟ್ಟಿನಿಂದ ಅಕ್ಕಳಕೋಟೆ, ಸೋಲಾಪುರಕ್ಕೆ ನೀರು ಹರಿಸುವಂತೆ ಮಹಾರಾಷ್ಟ್ರ ಸರ್ಕಾರ ಉತ್ತರಿಸಿತ್ತು.
ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು 524.25 ಅಡಿಗೆ ಏರಿಸಿದ್ದು ಕರ್ನಾಟಕಕ್ಕೆ ಲಾಭವಾಗುವ ಬದಲು ನೀರು ಸಂಗ್ರಹ ಸಮಸ್ಯೆ ಮುಂದುವರೆದಿದೆ. 1969ರಿಂದ ಕೃಷ್ಣಾ ನದಿ ನೀರಿಗಾಗಿ ಕರ್ನಾಟಕ, ಅಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಕಿತ್ತಾಡುತ್ತಲೇ ಇದೆ. ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟುವ ಕೃಷ್ಣಾ ನದಿ ಮಹಾರಾಷ್ಟ್ರದಲ್ಲಿ 303 ಕಿ.ಮೀ, ಉತ್ತರ ಕರ್ನಾಟಕದಲ್ಲಿ 480 ಕಿ.ಮೀ ಹರಿದರೆ ಮಿಕ್ಕ 1300 ಕಿ.ಮೀ ಆಂಧ್ರಪ್ರದೇಶದಲ್ಲಿ ಹರಿದಾಡಿ ಬಂಗಾಳಕೊಲ್ಲಿ ಸೇರುತ್ತದೆ.