ಸಿದ್ದರಾಮಯ್ಯ ಸಂಪುಟಕ್ಕೆ ಪಾಟೀಲ್ ಸೇರ್ಪಡೆ
ಶನಿವಾರ ರಾಜಭವನದ ಬಾಕ್ವೆಂಟ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಹೆಚ್.ಆರ್.ಭಾರದ್ವಾಜ್ ಎಸ್.ಆರ್.ಪಾಟೀಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಎಸ್.ಆರ್.ಪಾಟೀಲ್ ತಮ್ಮ ತಾಯಿಯ ಹೆಸರಿನಲ್ಲಿ ಪ್ರಮಾಣವ ವಚನ ಸ್ವೀಕರಿಸಿದರು.
ಎಸ್.ಆರ್.ಪಾಟೀಲ್ ಅವರ ಸಂಪುಟ ಸೇರ್ಪಡೆಯಿಂದಾಗಿ ಸಿದ್ದರಾಮಯ್ಯ ಸಂಪುಟದ ಸಚಿವರ ಸಂಖ್ಯೆ 29ಕ್ಕೆ ಏರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ದಿನೇಶ್ ಗುಂಡೂರಾವ್, ಟಿ.ಬಿ.ಜಯಚಂದ್ರ ಮುಂತಾದವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಹಿರಿಯರಿಗೆ ಅವಕಾಶ ಕೊಡಿ : ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ಎಸ್.ಆರ್.ಪಾಟೀಲ್, ಸಚಿವ ಸ್ಥಾನ ನೀಡಿ ಜನಸೇವೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ನನಗೊಂದು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ.
ವಿಧಾನಪರಿಷತ್ ನಲ್ಲಿ ನನಗಿಂತ ಹಿರಿಯರಾದ ಅನೇಕ ಸದಸ್ಯರಿದ್ದಾರೆ. ಅವರಿಗೂ ಸಚಿವ ಸ್ಥಾನ ನೀಡಲಿ ಎಂದು ವರಿಷ್ಠರು ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು. ಎಸ್.ಆರ್.ಪಾಟೀಲ್ ಅವರಿಗೆ ಯಾವ ಖಾತೆಯ ಜವಾಬ್ದಾರಿ ನೀಡಲಾಗುತ್ತದೆ ಎಂದು ಇಂದು ಸಂಜೆ ತಿಳಿಯಲಿದೆ.
ತವರಿರನಲ್ಲಿ ಸಂಭ್ರಮ : ಎಸ್.ಆರ್.ಪಾಟೀಲ್ ಸಿದ್ದರಾಮಯ್ಯ ಅವರ ಸಂಪುಟ ಸೇರುತ್ತಿದ್ದಂತೆ ಪಾಟೀಲ್ ಅವರ ತವರು ಜಿಲ್ಲೆ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಚಿವ ಸ್ಥಾನ ದೊರಕಿರುವ ಸಂತಸ ಹಂಚಿಕೊಂಡರು.