ನಿಗಮ, ಮಂಡಳಿಗಳ ಅಧ್ಯಕ್ಷರ ಬದಲಾವಣೆ?
ಸರ್ಕಾರದ ಆದೇಶದಿಂದಾಗಿ ಕರ್ನಾಟಕ ಚಲನಚಿತ್ರ ಅಕಾಡಮಿ ಅಧ್ಯಕ್ಷೆ ತಾರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ತಾರಾ ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದಾರೆ ಎಂಬ ಕಾರಣವನ್ನೂ ಇಟ್ಟುಕೊಂಡು ರಾಜೀನಾಮೆ ನೀಡುವಂತೆ ಸೂಚಿಸಲಾಗಿದೆ.
ಆದರೆ, ಮಾಧ್ಯಮ ಅಕಾಡಮಿ ಅಧ್ಯಕ್ಷರಾದ ಪೊನ್ನಪ್ಪ ಅವರನ್ನು ಹುದ್ದೆಯಲ್ಲಿ ಮುಂದುವರೆಸಲು ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಕೆಲವು ಅಕಾಡಮಿಗಳ ಅಧ್ಯಕ್ಷರ ಹುದ್ದೆಗೆ ಕಂಟಕ ಎದುರಾಗಿದೆ.
ಸದಾ ಕರ್ನಾಟಕದ ಮುಖ್ಯಮಂತ್ರಿಯಾಗಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಸಹ ತಮ್ಮ ಸ್ಥಾನ ತೊರೆಯಬೇಕಾಗಿದೆ ಎನ್ನುವುದು ಸರ್ಕಾರದ ಮೂಲಗಳ ಮಾಹಿತಿ. ಇಂದು ಸಂಜೆ ಅಥವ ಸೋಮವಾರ ಸರ್ಕಾರದಿಂದ ತಾರಾ, ಮುಖ್ಯಮಂತ್ರಿ ಚಂದ್ರು ಅವರಿಗೆ ರಾಜೀನಾಮೆ ನೀಡುವಂತೆ ಅಧಿಕೃತ ಆದೇಶ ರವಾನೆಯಾಗಲಿದೆ.
ಸಚಿವ ಸ್ಥಾನ ಸಿಗದೆ ಅಸಮಾಧಾನ ಗೊಂಡಿರುವ ನಾಯಕರನ್ನು ತೃಪ್ತಿ ಪಡಿಸಲು ಅವರಿಗೆ ನಿಗಮ ಮಂಡಳಿಗಳ ಅಧ್ಯಕ್ಷ ಹುದ್ದೆ ನೀಡಲು ಸಿಎಂ ಸಿದ್ದರಾಮಯ್ಯ ಆಲೋಚನೆ ನಡೆಸಿದ್ದಾರೆ. ಆದ್ದರಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಯ್ಕೆಯಾದ ನಿಗಮ ಮಂಡಳಿಗಳ ಅಧ್ಯಕ್ಷರಿಗೆ ಗೇಟ್ ಪಾಸ್ ಕೊಡಲು ತಂತ್ರ ರಚಿಸಲಾಗಿದೆ.
ತಾರಾ ಅವರಿಂದ ತೆರವಾಗುವ ಕರ್ನಾಟಕ ಚಲನಚಿತ್ರ ಅಕಾಡಮಿ ಸ್ಥಾನಕ್ಕೆ ಯಾರನ್ನು ನೇಮಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸಿನಿಮಾ ರಂಗದ ಅಂಬರೀಶ್ ಮತ್ತು ಉಮಾಶ್ರೀ ಅವರಿಗೆ ಸಚಿವ ಸ್ಥಾನ ನೀಡಿ ಸಿದ್ದರಾಮಯ್ಯ ಬಣ್ಣದ ಲೋಕಕ್ಕೂ ಪ್ರಾಧನ್ಯತೆ ನೀಡಿದ್ದಾರೆ.
ಆದ್ದರಿಂದ ಚಲನಚಿತ್ರ ಅಕಾಡೆಮಿಗೆ ಯಾರು ಅಧ್ಯಕ್ಷರಾಗುತ್ತಾರೆ ಎಂಬ ಪ್ರಶ್ನೆ ಉದ್ಭವವಾಗಿದೆ. ಒಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಬೆಂಬಲಿಗರಿಗೆ ಸ್ಥಾನ ನೀಡಲು ನಿಗಮ ಮಂಡಳಿಗಳ ಅಧ್ಯಕ್ಷರ ಹುದ್ದೆಗಳನ್ನು ತೆರವುಗೊಳಿಸುತ್ತಿರುವುದಂತೂ ರಹಸ್ಯವಾಗಿ ಉಳಿದಿಲ್ಲ.