ಅಸ್ತಿತ್ವಕ್ಕೆ ಬಂತು ಕಾವೇರಿ ಉಸ್ತುವಾರಿ ಸಮಿತಿ
ಕೇಂದ್ರ ಸರ್ಕಾರ ಶುಕ್ರವಾರ ರಾತ್ರಿ ಹೊರಡಿಸಿರುವ ಅಧಿಸೂಚನೆಯಲ್ಲಿ, ಜಲ ಸಂಪನ್ಮೂಲ ಸಚಿವಾಲಯದ ಕಾರ್ಯದರ್ಶಿ ನೇತೃತ್ವದಲ್ಲಿ ಏಳು ಮಂದಿ ಸದಸ್ಯರಉಸ್ತುವಾರಿ ಸಮಿತಿ' ರಚಿಸಿರುವುದಾಗಿ ಪ್ರಕಟಿಸಿದೆ. ಸಮಿತಿ ರಚಿಸುವಂತೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮೂರು ಬಾರಿ ಪ್ರಧಾನಿಗೆ ಪತ್ರ ಬರೆದು ಒತ್ತಾಯಿಸಿದ್ದರು.
ತಾತ್ಕಾಲಿಕ ಉಸ್ತುವಾರಿ ಸಮಿತಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಕೇಂದ್ರ ಜಲ ಆಯೋಗದ ಅಧ್ಯಕ್ಷರು, ಸದಸ್ಯರು. ಜಲ ಆಯೋಗದ ಮುಖ್ಯ ಇಂಜಿಜಿನಿಯರ್ ಸದಸ್ಯರಾಗಿದ್ದಾರೆ.
ಮೊದಲ ಸಭೆ ಜೂನ್ 1ಕ್ಕೆ : ಕೇಂದ್ರ ಸರ್ಕಾರ ರಚಿಸಿರುವ ಉಸ್ತುವಾರಿ ಸಮಿತಿ ಜೂನ್ 1ರಂದು ಸಭೆ ಸೇರಲಿದೆ. ಅಂದು ಸಮಿತಿಯ ನಿಯಮ ಮತ್ತು ನಡವಳಿಯನ್ನು ರಚಿಸಲು ತೀರ್ಮಾನಿಸಲಾಗಿದೆ. ಮೊದಲ ಸಭೆಗೆ ಹಾಜರಾಗುವಂತೆ ಎಲ್ಲಾ ರಾಜ್ಯಗಳಿಗೆ ಕೇಂದ್ರ ಆಹ್ವಾನ ನೀಡಿದೆ.
ಮೊದಲ ಸಭೆಯಲ್ಲಿ ಕಾವೇರಿ ಜಲಾಶಯಗಳಲ್ಲಿ ಈಗಿರುವ ನೀರಿನ ಸಂಗ್ರಹ, ಕುಡಿಯುವ ಹಾಗೂ ಕೃಷಿ ಉದ್ದೇಶಕ್ಕೆ ಅಗತ್ಯವಿರುವ ನೀರಿನ ಪ್ರಮಾಣ ಮುಂತಾದ ಮೂಲ ಮಾಹಿತಿಗಳನ್ನು ವಿವಿಧ ರಾಜ್ಯಗಳು ಹಂಚಿಕೊಳ್ಳಲಿವೆ.
ಈ ಸಮಿತಿ ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಕಾವೇರಿ ನ್ಯಾಯ ಮಂಡಳಿ ಅಂತಿಮ ತೀರ್ಪಿನ ಅನ್ವಯ ನೀರು ನಿರ್ವಹಣಾ ಮಂಡಳಿ' ರಚಿಸುವವರೆಗೆ ಇದು ಕಾರ್ಯ ನಿರ್ವಹಿಸಲಿದೆ.
ನ್ಯಾಯಮಂಡಳಿ ತೀರ್ಪು, ತೀರ್ಪು ಜಾರಿ ಮುಂತಾದ ವಿಷಯಗಳಲ್ಲಿ ಭಿನ್ನಮತ ಉಂಟಾದರೆ, ಅಧ್ಯಕ್ಷರು ಅಥವಾ ಸಂಬಂಧಿಸಿದ ರಾಜ್ಯಗಳು ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಸುಪ್ರೀಂ ಕೋರ್ಟ್ ಆದೇಶದಂತೆ ಫೆ.19ರಂದು ಕೇಂದ್ರ ಸರ್ಕಾರ ಕಾವೇರಿ ನ್ಯಾಯಮಂಡಳಿಯ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಇದರಂತೆ ಪ್ರಧಾನಿ ಅಧ್ಯಕ್ಷತೆಯ ಕಾವೇರಿ ನದಿ ಪ್ರಾಧಿಕಾರ (ಸಿಆರ್ಎ) ಹಾಗೂ ಜಲ ಸಂಪನ್ಮೂಲ ಕಾರ್ಯದರ್ಶಿ ಅಧ್ಯಕ್ಷತೆಯ ಉಸ್ತುವಾರಿ ಸಮಿತಿ (ಸಿಎಂಸಿ) ರದ್ದುಗೊಳಿಸಿ, ನೀರು ನಿರ್ವಹಣಾ ಮಂಡಳಿ ರಚಿಸಬೇಕಾಗಿತ್ತು.
ಕಾವೇರಿ ನ್ಯಾಯಮಂಡಳಿಯ ಅಂತಿಮ ಅಧಿಸೂಚನೆ ಶಿಫಾರಸ್ಸುಗಳನ್ನು ತಕ್ಷಣ ಜಾರಿಗೊಳಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ, ತಮಿಳುನಾಡು ಸುಪ್ರೀಂ ಮೊರೆ ಹೋಗಿತ್ತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಮೇ 10ರಂದು ನೀಡಿ ತಾತ್ಕಾಲಿಕ ಸಮಿತಿ ರಚಿಸುವಂತೆ ಆದೇಶ ನೀಡಿತ್ತು.