ಲೋಕಾದಾಳಿ : ವೈದ್ಯನ ಆಸ್ತಿ ನೋಡಿ ಅಧಿಕಾರಿಗಳು ಸುಸ್ತು
ಶುಕ್ರವಾರ ಬೆಳಗ್ಗೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಎನ್.ರಾಮಚಂದ್ರ ಅವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಅಧಿಕಾರಿಗಳಿಗೆ ನಿಜಕ್ಕೂ ಶಾಕ್ ಆಗಿತ್ತು. ಕಾನೂನು ಬಾಹಿರವಾಗಿ ಈತ ಸರ್ಕಾರಿ ಆಸ್ಪತ್ರೆಯಲ್ಲಿಯೇ ಶಸ್ತ್ರ ಚಿಕಿತ್ಸಾ ಘಟಕ ಹೊಂದಿರುವ ಅಂಶ ಬೆಳಕಿಗೆ ಬಂದಿತು.
ಅಕ್ರಮವಾಗಿ ಆಪರೇಷನ್ ಥಿಯೇಟರ್ ನಡೆಸುತ್ತಿದ್ದ ರಾಮಚಂದ್ರ ಬಳಿ 4.74 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯಕ್ತ ಎಡಿಜಿಪಿ ಸತ್ಯನಾರಾಯಣ ರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಇವರ ಬ್ಯಾಂಕ್ ಖಾತೆ ಮತ್ತು ಲಾಕರ್ ಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ರಾಮಚಂದ್ರ ಅವರು ಆಪರೇಷನ್ ಥಿಯೇಟರ್ ಜೊತೆಗೆ ಅಲ್ಟ್ರಾಸೌಂಡ್ ಯಂತ್ರವನ್ನು ಹೊಂದಿದ್ದು, ದಾಳಿಯ ವೇಳೆ ಬಯಲಾಗಿದೆ. ಪತ್ನಿ ಮತ್ತು ನಾದಿನಿಯ ಹೆಸರಿನಲ್ಲಿ ರಾಮಚಂದ್ರ ಅವರು ಕೋಟ್ಯಾಂತರ ರೂ. ಅಕ್ರಮ ಆಸ್ತಿ ಸಂಪಾದಿಸಿರುವ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
14 ಎಕರೆ ಒಡೆಯ : ಸರ್ಕಾರಿ ಆಸ್ಪತ್ರೆಯ ವೈದ್ಯನಾಗಿರುವ ರಾಮಚಂದ್ರ ಕೊಪ್ಪ ತಾಲೂಕಿನ ಕೂಳೂರಿನಲ್ಲಿ ನಾದಿನಿಯ ಹೆಸರಿನಲ್ಲಿ 14.5 ಎಕರೆ ಭೂಮಿ ಹೊಂದಿದ್ದಾನೆ. ಬಾಳೆಹೊನ್ನೂರಿನಲ್ಲಿ ವಾಣಿಜ್ಯ ಕಟ್ಟಡಗಳನ್ನು ಬಾಡಿಗೆಗೆ ನೀಡಿದ್ದಾನೆ.
ಪುತ್ರನ ಹೆಸರಿನಲ್ಲಿ ಕೊಪ್ಪ, ಮೈಸೂರು ಮತ್ತು ಬೆಂಗಳೂರಿನ ಕುಂಬಳಗೋಡು, ಸೂರ್ಯಾನಗರದ 2 ನೇ ಹಂತದಲ್ಲಿ ನಿವೇಶನ ಖರಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ 15 ಎಕರೆ ಕಾಫಿ ಎಸ್ಟೇಟ್ ಮತ್ತು ಕೊಪ್ಪದಲ್ಲಿ ಮನೆಯ ಜೊತೆಗೆ ಖಾಸಗಿ ಕ್ಲಿನಿಕ್ ಹೊಂದಿರುವ ವಿಷಯ ಬೆಳಕಿಗೆ ಬಂದಿದೆ.
ಮಗನ ಹೆಸರಿನಲ್ಲಿ ಮೈಸೂರಿನಲ್ಲಿ 15 ಲಕ್ಷದ ನಿವೇಶನ, ಕುಂಬಗೋಡಿನಲ್ಲಿ 26 ಲಕ್ಷ ಮೌಲ್ಯದ ನಿವೇಶನ ಹೊಂದಿದ್ದಾನೆ. 5 ಲಕ್ಷ ಮೌಲ್ಯದ ದುಬಾರಿ ವಾಹನಗಳಿದ್ದು, ಇವರ ಒಟ್ಟಾರೆ, ಆಸ್ತಿಯ ಮೌಲ್ಯವನ್ನು ಅಧಿಕಾರಿಗಳು ಇನ್ನೂ ಲೆಕ್ಕಹಾಕುತ್ತಿದ್ದಾರೆ.
ರಾಮಚಂದ್ರ ಅವರು ಸೇವಾವಧಿಯಲ್ಲಿ ಗಳಿಸಿದ ಆದಾಯ ಕೇವಲ 75 ಲಕ್ಷ, ಇವರ ಬಳಿ ಅಕ್ರಮವಾಗಿರುವ ಶೇ 225.85 ಆಸ್ತಿ ಇದೆ ಎಂದು ಲೋಕಾಯುಕ್ತರು ಅಂದಾಜಿಸಿದ್ದಾರೆ. ಒಬ್ಬ ಸರ್ಕಾರಿ ವೈದ್ಯರ ಆಸ್ತಿ ಕಂಡು ಅಧಿಕಾರಿಗಳೇ ನಿಜಕ್ಕೂ ಬೆಚ್ಚಿಬಿದ್ದಿದ್ದಾರೆ.