59ಲಕ್ಷ ಕುದುರೆ ಬಾಲಕ್ಕೆ ಕಟ್ಟಿದ ವಂಚಕ ಬ್ಯಾಂಕ್ ಅಧಿಕಾರಿ
ನಗರದ ಹೊರವಲಯದಲ್ಲಿ ಅಯ್ಯಪ್ಪ ದೇವಸ್ಥಾನದ ಬಳಿಯಿರುವ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಶಾಕೆಯ ಸಹಾಯಕ ಪ್ರಬಂಧಕ ಕೆ ಎನ್ ರಂಗರಾಜನ್ ಈ ವಂಚನೆ ಪುರಾಣದ ಸೂತ್ರಧಾರ. ಆತನಿಗೆ ನೆರವಾದ ಆರೋಪದ ಮೇಲೆ ಓ ಬೀಚುಪಲ್ಲಿ (ಮೂಲ ಆಂಧ್ರದ ಕರ್ನೂಲ್ ) ಎಂಬ ಕ್ಯಾಷಿಯರನನ್ನೂ ಪೊಲೀಸರು ತಕ್ಷಣ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಖದೀಮ ಜೋಡಿ ಲಪಟಾಯಿಸಿರುವುದು 59 ಲಕ್ಷ ರೂ ಮತ್ತು ಸುಮಾರು ಒಂದೂವರೆ ಕೆಜಿ ತೂಕದ ಆಭರಣಗಳನ್ನು.
ಜೂಜಿನ ದಾಸ ಆದ ಬರಿಗೈ ದಾಸ: ಕುದುರೆ ಜೂಜಿನ ದಾಸನಾಗಿದ್ದ ಮ್ಯಾನೇಜರ್ ರಂಗರಾಜನ್ ಅಷ್ಟೂ ಹಣವನ್ನು ಜೂಜಿಗೆ ಸುರಿದಿದ್ದು, ಬರಿಗೈ ದಾಸನಾಗಿದ್ದಾನೆ ಎಂದು ತಿಳೀದುಬಂದಿದೆ. 53 ವರ್ಷದ ರಂಗರಾಜನ್ ಮೂಲತಃ ಚೆನ್ನೈನವನಾಗಿದ್ದು, ಯಲಹಂಕದಲ್ಲಿ ವಾಸವಾಗಿದ್ದ. ಆರು ತಿಂಗಳ ಹಿಂದೆ ಇಲ್ಲಿನೆ ಶಾಖೆಗೆ ವರ್ಗವಾಗಿ ಬರುವ ಮುನ್ನ ಆರೋಪಿ ರಂಗರಾಜನ್ 34 ವರ್ಷ ಬ್ಯಾಂಕಿಗೆ ದುಡಿದಿದ್ದಾನೆ.
ಮೂರು ದಿನಗಳ ಹಿಂದೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬ್ಯಾಂಕಿನ ಬೆಂಗಳೂರು ವಿಭಾಗೀಯ ಕಚೇರಿಯ ವ್ಯವಸ್ಥಾಪಕ ವಸಂತ್ ಕುಮಾರ್ ಅವರು ಚಿಕ್ಕಬಳ್ಳಾಪುರ ಪೊಲೀಸರನ್ನು ಎಚ್ಚರಿಸಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಚಿಕ್ಕಬಳ್ಳಾಪುರ ಡಿಎಸ್ಪಿ ಎಬಿ ದೇವಯ್ಯ ಆರೋಪಿಗಳಿಬ್ಬರನ್ನೂ ಬಂಧಿಸಿ, ಕೋರ್ಟಿಗೆ ಹಾಜರುಪಡಿಸಿದ್ದಾರೆ.
ಗ್ರಾಹಕರ ಲಾಕರುಗಳಿಂದ ಎಗರಿಸಿದ ಚಿನ್ನಾಭರಣವನ್ನು ಆರೋಪಿಗಳು ಮುತ್ತೂಟ್ ಫೈನಾನ್ಸ್ ಮತ್ತಿತರ ಖಾಸಗಿ ಫೈನಾನ್ಸ್ ಕಂಪನಿಗಳಲ್ಲಿ ಗಿರವಿ ಇಟ್ಟಿರುವುದಾಗಿ ತನಿಖೆ ವೇಳೆ ಬಾಯ್ಬಿಟ್ಟಿದ್ದಾರೆ.