ಕೃಷ್ಣಮಠ:ಸಿಎಂ ಹೇಳಿಕೆಗೆ ಪೇಜಾವರ ಶ್ರೀಗಳ ತಿರುಗೇಟು
ಉಡುಪಿ/ಮಂಗಳೂರು, ಮೇ 24: ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಉಡುಪಿ ಕೃಷ್ಣಮಠ ಮತ್ತು ಗೋಕರ್ಣ ದೇವಾಲಯವನ್ನು ಸರಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ಇಂಗಿತ ವ್ಯಕ್ತ ಪಡಿಸಿದ ಸಿದ್ದರಾಮಯ್ಯ ಅವರ ಹೇಳಿಕೆಗೆ ಉಡುಪಿ ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.
ಶ್ರೀಕೃಷ್ಣ ಮಠವನ್ನು ಸರಕಾರದ ವಶಕ್ಕೆ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶಗಳಿಲ್ಲ. ಈ ಹಿಂದೆ ಮದರಾಸು ಪ್ರಾಂತ್ಯದ ಸರಕಾರವಿದ್ದಾಗ ಶ್ರೀಕೃಷ್ಣಮಠವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು ಸರಕಾರ ಮುಂದಾಗಿತ್ತು.
ಉಚ್ಚ ನ್ಯಾಯಾಲಯದಲ್ಲಿ ಸರಕಾರ ಹಿನ್ನಡೆ ಅನುಭವಿಸಿತ್ತು. ಸದ್ಯದ ನ್ಯಾಯಲಯದ ತೀರ್ಪು ಶ್ರೀಕೃಷ್ಣಮಠದ ಪರವಾಗಿಯೇ ಇದೆ. ಈ ಕುರಿತು ಮುಖ್ಯಮಂತ್ರಿಗಳಿಗೂ ಸ್ಪಷ್ಟ ಪಡಿಸುತ್ತೇವೆ ಎಂದು ಶ್ರೀಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಸಿಎಂ ವಿರುದ್ದ ಗುಡುಗಿದ ಮಂಗಳೂರು ಸಂಸದ : ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಧಾರ್ಮಿಕ ಭಾವನೆ ಜತೆ ಚೆಲ್ಲಾಟವಾಡುವ ಅವಶ್ಯಕತೆಯಿಲ್ಲ. ಜನರ ಧಾರ್ಮಿಕ ಭಾವನೆಗೆ ಮತ್ತು ಮಠದ ಪರಂಪರಗೆ ಧಕ್ಕೆ ತರುವ ಕೆಲಸಕ್ಕೆ ಸರ್ಕಾರ ಕೈ ಹಾಕಬಾರದು.
ಜನರ ಧಾರ್ಮಿಕ ಭಾವನೆಗೆ ವಿರುದ್ದವಾಗಿ ಸರಕಾರ ಮುಂದಾದಲ್ಲಿ ಇವರ ವಿರುದ್ಧ ಜನ ಜಾಗೃತಿ ಕೆಲಸಕ್ಕೆ ಬಿಜೆಪಿ ಮುಂದಾಗಲಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ.
ಮಠಗಳಿಗೆ ಅದರದ್ದೇ ಆದ ಪರಂಪರೆಗಳು ಇರುತ್ತವೆ. ಇತಿಹಾಸಗಳಿಂದ ನಡೆದುಕೊಂಡು ಬರುತ್ತಿರುವ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳೂ ಇರುತ್ತವೆ. ಸರಕಾರ ಶ್ರೀಕೃಷ್ಣ ಮಠ ಅಥವಾ ಗೋಕರ್ಣ ದೇವಾಲಯಗಳನ್ನು ತನ್ನ ವಶಕ್ಕೆ ತೆಗೆದುಕೊಂಡರೆ ಇದಕ್ಕೆ ಧಕ್ಕೆಯಾಗಲಿವೆ ಎಂದು ನಳಿನ್ ಕುಮಾರ್ ಕಟೀಲ್ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದಾರೆ.