ಹೆಚ್ಚಾಗುತ್ತಿರುವ ಸುಶಿಕ್ಷಿತರು; ಕೃಷಿಕರದು ಇಳಿಮುಖ
ಇನ್ನು ದಶಕದಿಂದೀಚೆಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳು ಕಂಡುಬಂದಿರುವುದರಿಂದ ಪಟ್ಟಣ/ನಗರಗಳತ್ತ ಧಾವಿಸಿದ ಜನ ಸುಶಿಕಕ್ಷಿತರಾಗುತ್ತಿರುವುದರಿಂದ ಸಾಕ್ಷರತೆ ಪ್ರಮಾಣವೂ ಹೆಚ್ಚಾಗಿದೆ.
ಕರ್ನಾಟಕ ಜನಗಣತಿ ಕಾರ್ಯಪಡೆ ನಿರ್ದೇಶಕ ಅನಿಲ್ ಕುಮಾರ್ ಅವರು ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದ 2011ರ ಜನಗಣತಿ ಮಾಹಿತಿಯ ಪ್ರಕಾರ ರಾಜ್ಯದಲ್ಲಿ ಇರುವ ಒಟ್ಟು ಜನಸಂಖ್ಯೆ 6,10,95,297. ಪುರುಷರ ಸಂಖ್ಯೆ 3,೦9,66,657 ಮತ್ತು ಮಹಿಳೆಯರ ಸಂಖ್ಯೆ 3,01,28,640.
2001ರ ವೇಳೆಗೆ ರಾಜ್ಯದಲ್ಲಿ 68,83,856 ಮಂದಿ ಕೃಷಿಕರು ಇದ್ದರು. ಆದರೆ 2011ರ ವೇಳೆಗೆ ಕೃಷಿಕರ ಸಂಖ್ಯೆ 65,80,649ಕ್ಕೆ ಕುಸಿದಿದೆ. ಪುರುಷ ಕೃಷಿಕರ ಸಂಖ್ಯೆ 79,132 ಮಂದಿಯಷ್ಟು ಕುಸಿದಿದ್ದರೆ ಸ್ತ್ರೀಯರ ಸಂಖ್ಯೆ 2,24,075 ಮಂದಿಯಷ್ಟು ಕುಸಿದಿದೆ. ಇದರಿಂದ, ರಾಜ್ಯದಲ್ಲಿ ಪ್ರಸ್ತುತ ಪುರುಷ ಕೃಷಿಕರಿಗಿಂತ ಮಹಿಳಾ ಕೃಷಿಕರೇ ಹೆಚ್ಚಾಗಿದ್ದಾರೆ.
ರಾಜಧಾನಿಯೊಂದಿಗೆ ಬೆರೆತುಹೋಗಿರುವ ಬೆಂಗಳೂರು ಗ್ರಾಮಾಂತರ ಭಾಗದಲ್ಲಿದ್ದ ಕೃಷಿಕರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕರಗಿಹೋಗಿದ್ದಾರೆ. ಈ ಭಾಗದಲ್ಲಿ 2001ರ ಜನಗಣತಿಗೆ ಹೋಲಿಸಿದರೆ ಶೇ. 9.55ರಷ್ಟು ನಕಾರಾತ್ಮಕ ಬೆಳವಣಿಗೆ ಇಲ್ಲಿ ಕಂಡುಬಂದಿದೆ.
ಗಮನಾರ್ಹವೆಂದರೆ ಕೃಷಿ ಕಾರ್ಮಿಕರ ಸಂಖ್ಯೆ ರಾಜ್ಯದಲ್ಲಿ ಶೇ. 14.92ರಷ್ಟು ಹೆಚ್ಚಾಗಿದೆ. ಮಹಿಳೆಯರಿಗಿಂತ ಪುರುಷ ಕೃಷಿ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೆ ಮಹಿಳಾ ಕೃಷಿ ಕಾರ್ಮಿಕರು ಕಾಣೆಯಾಗುತ್ತಿದ್ದಾರೆ.