'ಶ್ರೀಶಾಂತನನ್ನು ಮತ್ತೆ ಆಟಕ್ಕೆ ಸೇರಿಸಿಕೊಳ್ಳಬೇಕು'
'ನಮ್ಮ ಶ್ರೀಶಾಂತ ಯಾವುದೇ ತಪ್ಪು ಮಾಡಿಲ್ಲ' ಎಂದು ಕೇರಳ ಕ್ರಿಕೆಟ್ ಅಸೋಸಿಯೇಶನ್ ಘೋಷಿಸಿದೆ. ತಮ್ಮದೇ ರಾಜ್ಯದ ಪ್ರತಿಭೆ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಆರೋಪಿ ಎಂದು ಜಗತ್ತಿಗೆ ಪರಿಚಯವಾದ ಮೇಲೆ ಆತನ ಬಗ್ಗೆ ಕೆಸಿಎ ಮೊದಲ ಬಾರಿಗೆ ಹೇಳಿಕೆಯೊಂದನ್ನು ನೀಡಿದ್ದು, ಅವರ ಬಗ್ಗೆ ಈಗ ಯಾವುದೇ ನಿರ್ಧಾರಕ್ಕೆ ಬಂದರೂ ಅದು ಅವಸರದ ಕ್ರಮವಾಗುತ್ತದೆ' ಎಂದಿದೆ.
'ಶ್ರೀಶಾಂತ್ ಯಾವುದೇ ತಪ್ಪು ಮಾಡಿಲ್ಲ. ಅವರು ಖಂಡಿತವಾಗಿಯೂ ದೋಷಮುಕ್ತರಾಗುತ್ತಾರೆ. ಅಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟಿಗೆ ಹೆಚ್ಚಿನ ಹುರುಪು ಮತ್ತು ಶಕ್ತಿಯೊಂದಿಗೆ ಮರಳುತ್ತಾರೆ' ಎಂದು ಕೆಸಿಎ ಕಾರ್ಯದರ್ಶಿ ಟಿಸಿ ಮ್ಯಾಥ್ಯೂ ಅಪಾರ ಭರವಸೆ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ 'ಅವರೇನಾದರೂ ತಪ್ಪು ಮಾಡಿದ್ದರೆ ಬುದ್ಧಿವಾದ ಹೇಳಿ ಮತ್ತೆ ಅವರನ್ನು ಆಟಕ್ಕೆ ಸೇರಿಸಿಕೊಳ್ಳಬೇಕು' ಎಂದೂ ಅವರು ಮನವಿ ಮಾಡಿದ್ದಾರೆ.
'ಶ್ರೀಶಾಂತನನ್ನು ಅಪರಾಧಿ ಎಂದು ಈಗಲೇ ಹೇಳುವಂತಿಲ್ಲ. ವಿಚಾರಣೆ ಇನ್ನೂ ಪ್ರಗತಿಯಲ್ಲಿದೆ. ಪ್ರಕರಣದ ತನಿಖೆ ಪೂರ್ತಿಗೊಳ್ಳಲಿ, ಅಲ್ಲಿಯ ತನಕ ಕಾಯೋಣ...' ಎಂದು ಮ್ಯಾಥ್ಯೂ ಸುದ್ದಿಗಾರರಿಗೆ ತಿಳಿಸಿದ್ದಾರೆ.