ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಯಚೂರಿನಲ್ಲಿ IITಯಂತೆ: ದೇಶಪಾಂಡೆ ತುರ್ತುಗಮನಕ್ಕೆ

By Srinath
|
Google Oneindia Kannada News

iit-in-raichur-what-about-in-cb-pur-rv-deshpande
ಬೆಂಗಳೂರು, ಮೇ 22: ರಾಯಚೂರಿನಲ್ಲಿ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್ ಟೆಕ್ನಾಲlಜಿ (IIT) ಸ್ಥಾಪಿಸುವುದಾಗಿ ಬೆಂಗಳೂರಿನಲ್ಲಿ ಕುಳಿತೇ ಉನ್ನತ ಶಿಕ್ಷಣ ಸಚಿವ ಆರ್‌ವಿ ದೇಶಪಾಂಡೆ ಅವರು ಘೋಷಿಸಿದ್ದಾರೆ. ಯಥಾ ರಾಜಾ ತಥಾ ಮಂತ್ರಿ ಎಂಬಂತೆ ಸಿಎಂ ಸಿದ್ದು ವೇಗದಲ್ಲೇ ಇವರೂ ಏನೇನೋ ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಅನಿಸುತ್ತದೆ.

ಸ್ವಾಮಿ ದೇಶಪಾಂಡೆಯವರೇ, ರಾಯಚೂರಿನಲ್ಲಿ ಸೂಪರ್ ಆಗಿರೋ (ಪಕ್ಕದ ಚಿತ್ರ ನೋಡಿ) ಐಐಟಿ ಸ್ಥಾಪಿಸುವುದಾಗಿಯೂ, ಈ ಕುರಿತು ಪ್ರಸ್ತಾವನೆಯೊಂದನ್ನು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಗೆ ಸಲ್ಲಿಸುವುದಾಗಿಯೂ ನೀವು ಹೇಳಿರುವುದು ಸರಿಯಷ್ಟೇ. ಆದರೆ ಈ ಹಿಂದೆ ರಾಜ್ಯದಲ್ಲಿ ಇದೇ ಐಐಟಿ ಸ್ಥಾಪಿಸುವ ವಿಷಯ ಏನಾಯ್ತು ಎಂಬುದು ಬಹುಶಃ ನಿಮ್ಮ ಗಮನಕ್ಕೆ ಬಂದಿಲ್ಲ ಅನಿಸುತ್ತದೆ.

ಏನಾಗಿತ್ತು ಅಂದರೆ ನಿಮ್ಮದೇ ಪಕ್ಷದ ವೀರಪ್ಪ ಮೊಯ್ಲಿ ಎಂಬ ಕೇಂದ್ರ ಮಂತ್ರಿ ಒಂದೆರಡು ದಿನದಲ್ಲೇ ರಾಜ್ಯದಲ್ಲಿ ಐಐಟಿ ಸ್ಥಾಪಿಸುವುದಾಗಿ ಹೇಳಿದ್ದರು. ಅದೂ ಎಲ್ಲಿ? ಲೋಕ ಕಂಡ ಅಚ್ಚರಿ ಇಂಜಿನಿಯರ್, ನಮ್ಮ ವಿಶ್ವೇಶ್ವರಯ್ಯ ಅವರ ಹೆಸರಿನಲ್ಲಿ. ಅದೂ ಅವರ ಜನ್ಮಸ್ಥಳವಾದ ಮುದ್ದೇನಹಳ್ಳಿಯಲ್ಲಿ. ಅದು ರಾಜಧಾನಿಯಿಂದ ಕಲ್ಲೆಸೆತದ ಅಂತದಲ್ಲಿದೆ.

ಆದರೆ ಮೊಯ್ಲಿ ಸಾಹೇಬರು ಹಾಗೆ ಏಕೆ ಹೇಳಿದ್ದರು ಅಂದರೆ ಅದು ಅವರ ಕ್ಷೇತ್ರವಾಗಿತ್ತು. ಪೂಜಾರಿ ಕಾಟ ತಾಳಲಾರದೆ ಚಿಕ್ಕಬಳ್ಳಾಪುರಕ್ಕೆ ಗುಳೆಬಂದು ಇಲ್ಲಿಂದಲೇ ಅವರು ಅಚಾನಕ್ಕಾಗಿ ಲೋಕಸಭೆಗೆ ಆರಿಸಿಬಂದಿದ್ದು. ಹಾಗಾಗಿ ಕ್ಷೇತ್ರದ ಮತದಾರನನ್ನು ಓಲೈಸುವ ಭರದಲ್ಲಿ ಮುದ್ದೇನಹಳ್ಳಿಗೆ ಐಐಟಿ ತರುತ್ತೇನೆ ಎಂದು ಪ್ರಕಟಿಸಿದ್ದರು ಸಾಹೇಬರು.

ಮುಂದೆ, ಅದನ್ನು ನೆರೆಯ ಆಂಧ್ರಕ್ಕೆ ತಾಂಬೂಲದ ಜತೆ ಮೊಯ್ಲಿ ಅವರೇ ಕೊಟ್ಟು ಬಂದರು. ಏಕೆಂದರೆ ಆಂಧ್ರದ ಉಸ್ತುವಾರಿ ಹೊತ್ತಿದ್ದವರು ಅವರೇ. ರಾಜಕೀಯದ ಮೇಲಾಟದಲ್ಲಿ ಅದು ಆಂಧ್ರದ ಪಾಲಾಯ್ತು ಎಂಬುದು ಇಲ್ಲಿ ಗಮನಾರ್ಹ. ಆಗ, ಆಡಳಿತಾರೂಢ ಬಿಜೆಪಿ ಮಂದಿ ಮೊಯ್ಲಿಗೆ ಕಾಣಿಸದಷ್ಟು/ಕೇಳಿಸದಷ್ಟು, ಒಳಗೊಳಗೇ ಮೊಯ್ಲಿಗೆ ಷೇಮ್ ಷೇಮ್ ಅಂದರೆ ಹೊರತು ರಾಜ್ಯದಲ್ಲಿ ಒಂದಾದರು ಐಐಟಿ ಇರಲಿ ಎಂದು ಹೋರಾಟ ಮಾಡುವ ಛಾತಿ ಪ್ರದರ್ಶಿಸಲೇ ಇಲ್ಲ.

ಹಾಗೆ ನೋಡಿದರೆ ಮುದ್ದೇನಹಳ್ಳಿಯಲ್ಲಿ ಐಐಟಿ ಸ್ಥಾಪಿಸುವ ವಿಚಾರ ಅತ್ಯಂತ ಅರ್ಹವಾಗಿತ್ತು. ಆದರೆ ರಾಜಕೀಯವಾಗಿ ಮೊಯ್ಲಿಗೆ ಮತ್ತು ನಿಮ್ಮದೇ ಕೇಂದ್ರ ಸರಕಾರಕ್ಕೆ ಅದನ್ನು ಆಂಧ್ರಕ್ಕೆ ಕೊಡುಗೆ ನೀಡುವುದು ಅನಿವಾರ್ಯವಾಗಿತ್ತು. ಹಾಗಿರುವಾಗ ಮತ್ತೆ ಏನು ಸ್ವಾಮಿ ನಿಮ್ಮ ಓಲೈಕೆ ರಾಜಕಾರಣ.

ಮರೆತ ಮಾತು: ಸದ್ಯಕ್ಕೆ ಕರ್ನಾಟಕದಲ್ಲಿ ಐಐಟಿ ಸ್ಥಾಪನೆ ದೂರದ ಮಾತು. ಏಕೆಂದರೆ ಐಐಟಿ ಕೋಟಾ ಮುಗಿದಿದೆ. ಅದು ಯಾವಾಗ ನೆರೆಯ ಆಂಧ್ರಕ್ಕೆ ದಕ್ಕಿತೋ ಆಗ ಪಕ್ಕದ ಕರ್ನಾಟಕಕ್ಕೆ ನೀವು ಹೇಳಿದಂತೆ ಈ ತಕ್ಷಣಕ್ಕೆ ಮತ್ತೊಂದು ಐಐಟಿ ಸ್ಥಾಪಿಸುವುದು ಅಸಾಧ್ಯದ ಮಾತು ಎಂಬುದು ಕನ್ನಡಿಗರಿಗೆ ಗೊತ್ತಿದೆ, ಬಿಡಿ.

ಅಲ್ಲ ಸ್ವಾಮಿ ಅದಕ್ಕಿಂತ ಮೊದಲು ಪದವಿ/ತಾಂತ್ರಿಕ ತಾಂತ್ರಿಕೇತರ ಕಾಲೇಜುಗಳಲ್ಲಿ ಸುಮಾರು 20 ಸಾವಿರ ಭೋದಕ ಮತ್ತು ಭೋದಕೇತರ ಹುದ್ದೆಗಳನ್ನು ಖಾಲಿ ಬಿದ್ದು ಯಾವುದೋ ಕಾಲವಾಗಿದೆ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಸಂಚಕಾರ ಬಂದಿದೆ. ಮೊದಲು ಈಗಿರುವ ಲೋಪಗಳನ್ನು ಸರಿಪಡಿಸುವ ಬಗ್ಗೆ ಆಲೋಚನೆ ಮಾಡಿ ಪುಣ್ಯಕಟ್ಟಿಕೊಳ್ಳಿ ಸಾಕು.

ಆಮೇಲೆ ಅದೇನೋ ಧಾರವಾಡಕ್ಕೂ ಒಂದು ಐಐಟಿ ತರ್ತೀನಿ ಅಂದಿದ್ದೀರಂತೆ. ಆಕಸ್ಮಾತ್ ನೀವೇನಾದರೂ ಇವೆರಡನ್ನೂ ಕರ್ನಾಟಕಕ್ಕೆ ದಕ್ಕಿಸಿಕೊಟ್ಟುಬಿಟ್ಟರೆ ನಾಡಿನ ಇಂಜಿನಿರಿಂಗ್ ವಿದ್ಯಾರ್ಥಿಗಳು ತಮ್ ತಮ್ಮ ಮನೆಗಳಲ್ಲಿ ವಿಶ್ವೇಶ್ವರಯ್ಯ ಅವರ ಫೋಟೋದಂತೆ ನಿಮ್ಮ ಫೋಟೋವನ್ನೂ ಇಟ್ಟುಕೊಂಡು ಪೂಜೆ ಮಾಡುತ್ತಾರೆ, ಬಿಡಿ.

English summary
Higher Education Minister R.V. Deshpande has said that he would strive to get world-class Indian Institute of Technology at Raichur with help from the Union government. Bur Sirji, What about an IIT in Chickballapur as announced by Union Minister Veerappa Moilyji.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X