ದರ ಹೆಚ್ಚಳ ಅನಿವಾರ್ಯ : ಸಾರಿಗೆ ಸಚಿವರು
ಕೆಂಗೇರಿಯ ಟಿಟಿಎಂಸಿ ಆವರಣದಲ್ಲಿ ಬುಧವಾರ, ಹತ್ತು ಹವಾನಿಯಂತ್ರಿತ ವಾಯುವಜ್ರ ಬಸ್ಸುಗಳ ಚಾಲನೆಗೆ ಹಸಿರು ನಿಶಾನೆ ತೋರಿ ಮಾತನಾಡಿದ ರಾಮಲಿಂಗಾರೆಡ್ಡಿ, ಬಸ್ ಗಳಿಗಾಗಿ ಸಾರ್ವಜನಿಕರು ಕಾಯುವಂತಹ ಪರಿಸ್ಥಿತಿ ಎದುರಾಗಬಾರದು. ಹೆಚ್ಚಿನ ಬಸ್ ಗಳನ್ನು ಖರೀದಿಸಿ ಸಂಚಾರಕ್ಕೆ ಅನುಕೂಲ ಒದಗಿಸಲಾಗುವುದು.
ನಗರದ ಸಾರಿಗೆ ಸಂಸ್ಥೆಯು ಈ ವರ್ಷ 800 ಬಸ್ ಗಳನ್ನು ಖರೀದಿಸಲಿದೆ. 2015ರ ವೇಳೆಗೆ ಸಂಸ್ಥೆ ಎಂಟು ಸಾವಿರ ಬಸ್ ಗಳನ್ನು ಖರೀದಿಸುವ ಗುರಿ ಹೊಂದಿದೆ. ಹೆಚ್ಚು ಬಸ್ ಗಳನ್ನು ಖರೀದಿಸಿ ಬಿಎಂಟಿಸಿ ಸಂಚಾರ ವ್ಯಾಪ್ತಿಯನ್ನು ಮತ್ತಷ್ಟು ಹೆಚ್ಚಿಸಲು ಇಲಾಖೆ ನಿರ್ಧರಿಸಿದೆ ಎಂದು ಹೇಳಿದರು.
ದರ ಹೆಚ್ಚಳದ ಸುಳಿವು : ಡೀಸೆಲ್ ದರ ಹೆಚ್ಚಾಗಿರುವುದರಿಂದ ಪ್ರಯಾಣ ದರ ಪರಿಷ್ಕರಣೆ ಮಾಡುವುದು ಅನಿವಾರ್ಯವಾಗಿದೆ. ಈಗಾಗಲೇ ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆ ರಚಿಸಲಾಗಿದೆ. ನೂತನ ಪ್ರಯಾಣ ದರದಿಂದ ಸಾರ್ವಜನಿಕರಿಗೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
8 ಡಿಪೋ, 2 ವರ್ಕ್ ಶಾಪ್ : ಸಂಸ್ಥೆ ನೂತನವಾಗಿ ಬಸ್ ಗಳನ್ನು ಖರೀದಿಸುವುದರಿಂದ ಅವುಗಳ ನಿರ್ವಹಣೆಗೆ ಅನುಕೂಲವಾಗುವಂತೆ ನಗರದಲ್ಲಿ 8 ಹೊಸ ಬಸ್ ಡಿಪೋ ಮತ್ತು 2 ವರ್ಕ್ ಶಾಪ್ ಗಳನ್ನು ಸ್ಥಾಪಿಸಲಾಗುವುದು.
ತಾವರೆಕೆರೆ, ದೇವನಹಳ್ಳಿ, ಸಾತನೂರು, ಬೈರತಿ, ಅಂಜಾನಾಪುರ ಮುಂತಾದ ಸ್ಥಳಗಳಲ್ಲಿ ನೂತನ ಡಿಪೋ ಸ್ಥಾಪಿಸಲಾಗುವುದು. ಚಲಘಟ್ಟ ಮತ್ತು ದಾಸನಪುರದಲ್ಲಿ 2 ವರ್ಕ್ ಶಾಪ್ ಪ್ರಾರಂಭವಾಗಲಿವೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಚಾಲಕರ ನೇಮಕ : ಬಿಎಂಟಿಸಿಯಲ್ಲಿ ಚಾಲಕರ ಕೊರತೆ ಕಾಡುತ್ತಿದೆ ಶೀಘ್ರದಲ್ಲೇ 900 ಹೊಸ ಚಾಲಕರನ್ನು ನೇಮಿಸಿಕೊಳ್ಳಲು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಹೊಸ ಬಸ್ ಗಳನ್ನು ಖರೀದಿಸುವುದರಿಂದ ಚಾಲಕರ ಅಗತ್ಯ ಉಂಟಾಗಲಿದೆ. 900 ಚಾಲಕರ ನೇಮಕಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಮಲಿಂಗಾರೆಡ್ಡಿ ಮೊದಲ ಬಾರಿಗೆ ಬಸ್ ಗಳಿಗೆ ಹಸಿರು ನಿಶಾನೆ ತೋರಿಸಿ ಇಲಾಖೆಯ ಕಾರ್ಯವನ್ನು ಅಧಿಕೃತವಾಗಿ ಪ್ರಾರಂಭಿಸಿದ್ದಾರೆ.
ಹಿಂದಿನ ಸರ್ಕಾರದಲ್ಲಿ ಸಾರಿಗೆ ಖಾತೆ ಹೊಣೆ ಹೊತ್ತಿದ್ದ ಆರ್.ಅಶೋಕ್ ಸಮರ್ಥವಾಗಿ ಖಾತೆ ನಿಭಾಯಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ಹೊಸ ಸಚಿವರು ಸಾರ್ವಜಿನಿಕರಿಗೆ ಉಪಯೋಗಯಾಗುವ ಯಾವ ಯೋಜನೆ ಜಾರಿಗೊಳಿಸುತ್ತಾರೆ ಎಂದು ಕಾದು ನೋಡಬೇಕು. (ಮೈ ಬಿಎಂಟಿಸಿ.ಕಾಂಗೆ ಭೇಟಿ ನೀಡಿದ್ರಾ?)