ಬಿಎಸ್ವೈ, ನಿರಾಣಿ ವಿರುದ್ಧ ಲೋಕಾಯುಕ್ತ ಕುಣಿಕೆ ಬಿಗಿ
ಅರ್ಜಿಯ ವಿಚಾರಣೆ ನಡೆಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಮೂರ್ತಿ ಆನಂದ ಬೈರಾರೆಡ್ಡಿ ಅವರ ಏಕಸದಸ್ಯ ಪೀಠ ಮಂಗಳವಾರ ತನ್ನ ಆದೇಶವನ್ನು ಪ್ರಕಟಿಸಿತು. ಖಾಸಗಿ ದೂರಿಗೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿಲಿ.
ಜನಪ್ರತಿನಿಧಿಗಳು ತೆಗೆದುಕೊಂಡ ನಿರ್ಧಾರ ಕಾನೂನಿನ ಚೌಕಟ್ಟಿನಲ್ಲಿದೆಯೇ ಎಂದು ನ್ಯಾಯಾಲಯದ ಮೂಲಕವೇ ತೀರ್ಮಾನವಾಗಲಿ. ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿನ ವಿಚಾರಣೆಯಲ್ಲಿ ಹೈಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪೀಠ ಸ್ಪಷ್ಟವಾಗಿ ತೀರ್ಪು ನೀಡಿತು.
ಯಡಿಯೂರಪ್ಪ ಮತ್ತು ಮುರುಗೇಶ್ ನಿರಾಣಿ ಸಿರಾಜಿನ್ ಭಾಷ ಹಾಗೂ ಆಲಂ ಪಾಷಾ ಅವರು ಲೋಕಾಯುಕ್ತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಖಾಸಗಿ ದೂರುಗಳನ್ನು ರದ್ದುಗಳಿಸುವಂತೆ ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೈ ಕೋರ್ಟ್ ತೀರ್ಪಿನಿಂದಾಗಿ ಉಭಯ ನಾಯಕರ ಮೇಲಿನ ವಿಚಾರಣೆ ಪುನಃ ಪ್ರಾರಂಭವಾಗಲಿದೆ.
ಪ್ರತ್ಯೇಕ ಅನುಮತಿ ಅಗತ್ಯವಿಲ್ಲ : ಯಡಿಯೂರಪ್ಪ ವಿರುದ್ಧದ ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ 15 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 5 ಪ್ರಕರಣಗಳನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಬೇಕು ಎಂದು ಬಿಎಸ್ವೈ ಪರ ವಕೀಲರು ವಾದ ಮಂಡಿಸಿದ್ದರು.
ವಾದವನನ್ನು ಪುರಸ್ಕರಿಸದ ನ್ಯಾಯಪೀಠ 15 ಪ್ರಕರಣಗಳನ್ನು 5 ಪ್ರತ್ಯೇಕ ದೂರುಗಳನ್ನಾಗಿ ವಿಂಗಡಿಸಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ಎಲ್ಲಾ ಪ್ರಕರಣಗಳ ವಿಚಾರಣೆಯು ಒಟ್ಟಿಗೆ ನಡೆಯಬೇಕು. ಈ ವಿಚಾರಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನ್ಯಾಯಾಲಯದ ಆದೇಶವೇ ಅಂತಿಮ ಎಂದು ನ್ಯಾಯಪೀಠ ಸೂಚಿಸಿತು.
ವಿಚಾರಣೆ ಎದುರಿಸಿ : ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸಾರ್ವಜನಿಕ ಹಿತಾಸಕ್ತಿಗಾಗಿ ಡಿನೋಟಿಫಿಕೇಷನ್ ಆದೇಶವನ್ನು ಹೊರಡಿಸಿದ್ದಾರೆ. ಇದನ್ನು ಅಕ್ರಮ ಎಂದು ಪರಿಗಣಿಸಬಾರದು ಎಂದು ವಕೀಲರು ವಾದ ಮಂಡಿಸಿದ್ದರು. ಇದನ್ನು ಪುರಸ್ಕರಿಸದ ಕೋರ್ಟ್, ಅಧೀನ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸಿ, ಸತ್ಯಾಂಶವನ್ನು ನ್ಯಾಯಾಲಯದ ಗಮನಕ್ಕೆ ತನ್ನಿ ಎಂದು ಹೇಳಿತು.
ಯಡಿಯೂರಪ್ಪ : ಶ್ರೀರಾಂಪುರ, ಆರ್ಎಂವಿ ಬಡಾವಣೆ ಹಾಗೂ ಕೆಂಪಾಪುರದಲ್ಲಿ ಕ್ರಮವಾಗಿ 11 ಎಕರೆ 25 ಗುಂಟೆ, ನಾಗರಬಾವಿಯಲ್ಲಿ 5 ಎಕರೆ 13 ಗುಂಟೆ ಜಾಗವನ್ನು ಯಡಿಯೂರಪ್ಪ ಡಿನೋಟಿಫಿಕೇಷನ್ ಮಾಡಿದ್ದಾರೆ ಎಂದು ಬಿಎಸ್ವೈ ವಿರುದ್ಧ ಪ್ರಕರಣಗಳು ದಾಖಲಾಗಿವೆ.
ಮುರುಗೇಶ್ ನಿರಾಣಿ : ಬೆಂಗಳೂರಿನ ದೇವನಹಳ್ಳಿಯಲ್ಲಿ ಕೆಐಎಡಿಬಿ ಮೂಲಕ ನಕಲಿ ದಾಖಲೆ ಸೃಷ್ಟಿಸಿ 26 ಎಕರೆ ಭೂಮಿಯನ್ನು ತಮ್ಮ ಕಂಪನಿಗೆ ನಿರಾಣಿ ಪಡೆದಿದ್ದಾರೆ. ಇದಕ್ಕೂ ಮೊದಲು 26 ಎಕರೆ ಭೂಮಿಯನ್ನು ಹಾರ್ಡ್ವೇರ್ ಪಾರ್ಕ್ಗಾಗಿ ಮೀಸಲಿಡಲಾಗಿತ್ತು ಎಂಬ ದೂರು ದಾಖಲಾಗಿದೆ.