ಕಳ್ಳಾಟದ ಶ್ರೀಶಾಂತನಿಗೆ ಶಿಕ್ಷೆಯಾಗೋಲ್ಲ, ಯಾಕಂದ್ರೆ
ಬೆಂಗಳೂರು, ಮೇ 22: ಕಳ್ಳಾಟದ ಆರೋಪಿ ಶ್ರೀಶಾಂತ 'ನನ್ನ ನಂಬಿ ಪ್ಲೀಸ್; ನಾನು ಯಾವುದೇ ಫಿಕ್ಸ್ ಮಾಡಿಲ್ಲ' ಎಂದಿರುವುದನ್ನು ನೀವು ನಂಬ್ತೀರೋ ಇಲ್ವೋ ಗೊತ್ತಿಲ್ಲ ಆದರೆ ಕೋರ್ಟ್ ಅಂತೂ ನಂಬುತ್ತದೆ. ಮತ್ತು ನಂಬಲೇಬೇಕಾಗುತ್ತದೆ. ಯಾಕೆ ಗೊತ್ತಾ?
ಇತ್ತ ದಿಲ್ಲಿ/ಮುಂಬೈ ಪೊಲೀಸರು ಒಂದೊಂದೇ ಎಳೆ ಹಿಡಿದು ಒಬ್ಬೊಬ್ಬರನ್ನೇ ಒಳಕ್ಕೆ ತೆಗೆದುಕೊಳ್ಳುತ್ತಾ ಕೇಸನ್ನು ಸ್ಟ್ರಾಂಗ್ ಆಗಿ ಮಾಡಲು ಹರಸಾಹಸ ಪಡುತ್ತಿರುವಾಗ ಅತ್ತ ಘಟಾನುಘಟಿ ಲಾಯರುಗಳ ಪಡೆಯೇ ಕಾನೂನು ಪುಸ್ತಕಗಳನ್ನು ಹರಡಿಕೊಂಡು ನ್ಯಾಯದ ಅಂಗಳದಲ್ಲಿ ಕುಳಿತಿದೆ. (ಅಂದಹಾಗೆ ಇಲ್ಲಿರುವ ಶ್ರೀಶಾಂತನ ಚಿತ್ರಗಳು ತಾಜಾ. ಆತನ ಕೈಗೆ ಕೋಳ ತೊಡಿಸಿ ಪೊಲೀಸರು ಕೋರ್ಟಿಗೆ ಕರೆದೊಯ್ಯುತ್ತಿದ್ದಾರೆ)
ಕೊನೆಗೆ ಅದು ಬಿಸಿಸಿಐ ಶ್ರೀನಿವಾಸನ್ ಕೊರಳಿಗೂ ಸುತ್ತಿಕೊಳ್ಳುವ ಹಾಗಿದೆ. ಅಷ್ಟೇ ಅಲ್ಲ. ಈಗ ಕಾಮೆಂಟೇಟರ್ ಆಗಿರುವ ಮಾಜಿ ಕ್ರಿಕೆಟ್ಟಿಗನೊಬ್ಬ, ಕೊನೆಗೆ ಅಂಪೈರುಗಳಿಂದಲೂ ಫಿಕ್ಸಿಂಗೋ ಫಿಕ್ಸಿಂಗು ಆಗಿದೆ ಎಂಬ ಪರಮ ಅಸಹ್ಯಕರ ಮಾಹಿತಿಗಳು ಬರತೊಡಗಿವೆ. ಇನ್ನು, ಆ ದೇವರೇ ಕಾಪಾಡಬೇಕು ಕ್ರಿಕೆಟ್ಟನ್ನು.
ಆದರೆ
ಸಚಿನ್
ಎಂಬ
ದೇವರು,
'ಕ್ರಿಕೆಟ್
ಅಂದರೆ
ಹೀಗೆ
ಆಡಬೇಕು'
ಎಂದು
ತೋರಿಸುವ
ಗೇಲ್
ಎಂಬ
ಚಂಡಮಾರುತದಂತಹ
ಅಪ್ಪಟ
ಆಟಗಾರರ
ಎದುರೇ
ಇಂತಹ
ಕಳ್ಳಾಟಗಳನ್ನು
ನಡೆಸಲು
ಈ
ಖದೀಮರಿಗೆ
ಮನಸಾದರು
ಹೇಗೆ
ಬಂತು
ಎಂಬ
60
ಲಕ್ಷ
ರೂ.
ಪ್ರಶ್ನೆ
ಕ್ರಿಕೆಟ್
ಪ್ರೇಮಿಗಳನ್ನು
ನಿಜಕ್ಕೂ
ಬಹುವಾಗಿ
ಕಾಡುತ್ತಿದೆ.
ಮೊದಲೇ ಇವು IPC 420 ಕೇಸುಗಳು:
ಶ್ರೀಶಾಂತ್ ಸೇರಿದಂತೆ ಕಳ್ಳಾಟದ ಆರೋಪಿಗಳ ವಿರುದ್ಧ ನ್ಯಾಯಾಲಯದಲ್ಲಿ ಸ್ಟ್ರಾಂಗ್ ಎವಿಡನ್ಸ್ ಗಳನ್ನು ಬಿಚ್ಚಿಡಲು prosecution ನಿಜಕ್ಕೂ ಹರಸಾಹಸ ಪಡಬೇಕಾಗುತ್ತದೆ. ಮೊದಲೇ ಇವು 420 ಕೇಸುಗಳು. ಚಿಕ್ಕ ಲೂಪ್ ಹೋಲ್ ಕಾಣಿಸಿಕೊಂಡರೂ ಮುಳುಗುತ್ತಿರುವವನಿಗೆ ಅದೇ ಹುಲ್ಲುಕಡ್ಡಿ ಆಸರೆಯಾಗಿ ಕೇಸು ಹಳ್ಳ ಹಿಡಿಯಬಲ್ಲದು. ಹಾಗಾಗಿಯೇ ಅಲ್ಲವೇ ಮೊದಲಾಘಾತದ ನಂತರ ಶ್ರೀಶಾಂತ ಈಗ ಬೇರೆ ರಾಗ ಹಾಡುತ್ತಿರುವುದು.
ರಾಜಸ್ಥಾನ್ ರಾಯಲ್ಸ್ ಮಾಲೀಕರೆಲ್ಲಿ?
ಕ್ರೀಡಾ ವಕೀಲರನ್ನು ಹಾಗೇ ಸುಮ್ಮನೆ ಮಾತಿಗೆಳೆದಾಗ ಅನೇಕ ವಿಚಾರಗಳು ಹೊರಬೀಳುತ್ತಿವೆ. ಅವರ ಪ್ರಕಾರ ಕಳ್ಳಾಟ ಸಾಬೀತುಪಡಿಸುವುದು ನಿಜಕ್ಕೂ ಕಷ್ಟ ಕಷ್ಟವಂತೆ. ಅಸಲಿಗೆ ಪ್ರಕರಣದಲ್ಲಿ ದೂರುದಾರರು ಯಾರು ಎಂಬುದೇ ಜಿಜ್ಞಾಸೆ ಮೂಡಿಸಿದೆ. FIR ದಾಖಲಿಸುವಂತೆ ಶ್ರೀಶಾಂತ ಪ್ರತಿನಿಧಿಸುತ್ತಿದ್ದ ರಾಜಸ್ಥಾನ್ ರಾಯಲ್ಸ್ ತಂಡದ ಮಾಲೀಕರನ್ನು ಕೋರಲಾಗಿದೆ. ಇಲ್ಲಿ ಮೊದಲ ದೂರುದಾರರು ನಿಜಕ್ಕೂ ರಾಜಸ್ಥಾನ್ ರಾಯಲ್ಸ್ ಆಗಬೇಕಾಗುತ್ತದೆ. ಆದರೆ ಇದುವರೆಗೂ ಅವರು ಹರಿ-ಶಿವ ಅಂದಿಲ್ಲ.
breach of contract
ತನ್ನ ತಂಡದ ಪರವಾಗಿ ಅಖಂಡ ನಿಷ್ಠೆಯಿಂದ ಆಡುತ್ತೇನೆ ಎಂದು ಆಟಗಾರ ಒಪ್ಪಂದ ಮಾಡಿಕೊಂಡಿರುತ್ತಾನೆ. ಇಲ್ಲಿ ನಂಬಿಕೆಯ ದ್ರೋಹ ಎದ್ದುಕಾಣುತ್ತದೆ. ಹಾಗಾಗಿ breach of contract ನೆಪವೊಡ್ಡಿ ರಾಜಸ್ಥಾನ್ ರಾಯಲ್ಸ್ ಮಾಲೀಕರು ದೂರು ದಾಖಲಿಸಬಹುದು. ಆದರೆ ಇದುವರೆಗೂ ಅವರು ಹರಿ-ಶಿವ ಅಂದಿಲ್ಲ. ಇಲ್ಲಿ ವಂಚನೆ ಪ್ರಕರಣವೂ ಕಾಣಿಸಿಕೊಳ್ಳುತ್ತದೆ. ಆದರೆ ವಂಚನೆಗೊಳಗಾದವರು ಯಾರು? ಇನ್ನು ಸಾರ್ವಜನಿಕ ಜೂಜಾಟ ಕಾಯಿದೆಯಡಿ ಕೇಸು ಹಾಕಲು ನೇರವಾಗಿ ಸಾರ್ವಜನಿಕರನ್ನು ಭಾಗಿಯಾಗಿಸಿಕೊಂಡು ಅವರು ಜೂಜಾಡಿಲ್ಲ.
ಶ್ರೀಶಾಂತನ ತಪ್ಪೊಪ್ಪಿಗೆ ಯಾರ ಮುಂದೆ?
ಇನ್ನು ಶ್ರೀಶಾಂತ ತಪ್ಪೊಪ್ಪಿಗೆ ಹೇಳಿಕೆ ನೀಡಿರುವುದಾಗಿ ಹೇಳಲಾಗಿದೆ. ಆದರೆ ನ್ಯಾಯಾಧೀಶಯರ ಸಮ್ಮುಖದಲ್ಲಿ ದಾಖಲಾಗುವ ತಪ್ಪೊಪ್ಪಿಗೆಗಳು ಮಾತ್ರವೇ ಸಾಕ್ಷ್ಯವಾಗಬಲ್ಲದು. ಇನ್ನು 2000 ರಲ್ಲಿ ನಡೆದಿದ್ದ match-fixingನಿಂದ ಪೊಲೀಸರಿಗೆ ಏನಾದರೂ ನೆರವಾಗುತ್ತದಾ ಅಂದರೆ ಆ ಕೇಸು ಹಳ್ಳ ಹಿಡಿದಿತ್ತು. ಕಳ್ಳಾಟಗಾರರು ಮತ್ತು ಫಿಕ್ಸರ್ ಗಳ ಮಧ್ಯೆ ಪುಂಖಾನುಪುಂಖವಾಗಿ ನಡೆದಿದ್ದ ಮಾತುಕತೆ ಟೇಪ್ ರೆಕಾರ್ಡರುಗಳನ್ನು ಪ್ರಧಾನ ಸಾಕ್ಷ್ಯವನ್ನಾಗಿ ನ್ಯಾಯಾಲಯ ಪರಿಗಣಿಸುವುದಿಲ್ಲ. ಸೋ, ಪೊಲೀಸರು ಮೈಯೆಲ್ಲ ಕಿವಿಯಾಗಿ 100 ಗಂಟೆಗೂ ಹೆಚ್ಚು ಕಾಲ ಮೊಬೈಲ್ ಸಂಭಾಷಣೆ ದಾಖಲಿಸಿದ್ದೇವೆ ಅಂದರೆ ಅದರಿಂದ ಏನೂ ಉಪಯೋಗವಾಗದು.
BBM ಮತ್ತು Whatsapp ಸಂದೇಶಗಳೇ ದಿಕ್ಕು
ಈಗ ಪೊಲೀಸರಿಗೆ ಆಶಾದಾಯಕವಾಗಿ ಉಳಿದಿರುವುದು BBM ಮತ್ತು Whatsapp ಸಂದೇಶಗಳು ಮಾತ್ರವೇ. ಇತ್ತೀಚೆಗೆ Evidence Act ಪ್ರಕಾರ ಇದಕ್ಕೆ ಮಾನ್ಯತೆ ನೀಡಲಾಗಿದೆ. ನೋಡೋಣ ಏನಾಗುತ್ತದೋ.
ಪೊಲೀಸರಿಗೆ ಸುಲಭದ ತುತ್ತಲ್ಲ
ಇನ್ನು ಮಹಾರಾಷ್ಟ್ರ ಪೊಲೀಸರು Maharashtra Control of Organised Crime Act ಅನ್ವಯಿಸಲು ಉತ್ಸುಕರಾಗಿದ್ದಾರೆ. ಆದರೆ ಅದು ಅವರ ತೃಪ್ತಿಗೆ ದಾಖಲಿಸಿಕೊಳ್ಳಬಹುದಷ್ಟೇ. ಏಕೆಂದರೆ ಕೋರ್ಟುಗಳು ಅಷ್ಟು ಸುಲಭವಾಗಿ ಅದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇನ್ನು, ಮುಂಬೈ ಭೂಗತ ಲೋಕದ ಜತೆ ಕಳ್ಳಾಟಗಾರರಿಗೆ ಲಿಂಕ್ ಇದೆ ಎಂದಾಗಲಿ, ಅದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದಾಗಲಿ, ಬೆಟ್ಟಿಂಗ್ ನಿಂದ ರಾಷ್ಟ್ರದ ಹಿತಾಸಕ್ತಿಗೆ ಧಕ್ಕೆಯೊದಗಿದೆ ಎಂದು ಸಾಬೀತುಪಡಿಸುವುದು ಪೊಲೀಸರಿಗೆ ಸುಲಭದ ತುತ್ತಲ್ಲ.
ಸ್ವಹಿತಾಸಕ್ತಿಯೇ ಎಲ್ಲ ರಾಷ್ಟ್ರದ ಹಿತಾಸಕ್ತಿ ಇಲ್ಲ
ಇಲ್ಲಿ ಕಳ್ಳಾಟಗಾರರಿಗೆ ಅತಿ ಮುಖ್ಯವಾಗಿರುವುದು ಸ್ವಹಿತಾಸಕ್ತಿ. ಅದೊಂದೇ ಅವರಿಂದ ಮಾಡಬಾರದ್ದನ್ನು ಮಾಡಿಸಿರುವುದು. ಹಾಗಿರುವಾಗ ಅವರ ನಡೆ ರಾಷ್ಟ್ರದ ಹಿತಾಸಕ್ತಿಗೆ ಮಾರಕ ಎಂದು ಕೋರ್ಟಿಗೆ ಮನದಟ್ಟುಪಡಿಸುವುದು ದುಸ್ಸಾಧ್ಯದ ಮಾತು. ಇನ್ನು ಮಾಧ್ಯಮ ನ್ಯಾಯಾಲಯಗಳಲ್ಲಿ ಮಾಧ್ಯಮ ಪಂಡಿತರು ಹರಿಸುವ ವಾಗ್ಝರಿಯನ್ನು ಕೋರ್ಟುಗಳು ಸುತರಾಂ ಕೇಳುವುದಿಲ್ಲ.
ಪ್ಲೇಸ್ ಆಫ್ ಕ್ರೈಂ ಅಸ್ತಿತ್ವದಲ್ಲೇ ಇಲ್ಲ
ಇಷ್ಟೆಲ್ಲ ಆದ ಮೇಲೆ ಇಲ್ಲಿ ಪ್ಲೇಸ್ ಆಫ್ ಕ್ರೈಂ ಅಸ್ತಿತ್ವದಲ್ಲೇ ಇಲ್ಲ. ಆಟಗಾರರು ಮತ್ತು ಬುಕ್ಕಿಗಳ ಮಧ್ಯೆ ಮಾತುಕತೆ ನಡೆದಿರುವುದು /ಹಣ ಕೈಬದಲಾಗಿರುವುದನ್ನು ಯಾರು ನೋಡಿದ್ದಾರೆ/ ಯಾವ ವಿಡಿಯೋ ಸಾಕ್ಷ್ಯ ಇದೆ. ಹಾಗಾಗಿ ಮದುವೆ ಹುಡುಗನಿಗೆ ಅದೇ ಇಲ್ಲ ಎಂಬಂತೆ ಈ ಕೇಸು ಹಳ್ಳ ಹಿಡಿಯುವುದರಲ್ಲಿ ಅನುಮಾನವೇ ಇಲ್ಲ. ಆದರೂ ಪೊಲೀಸರು ಹರಸಾಹಸ ಪಡುತ್ತಿರುವುದನ್ನು ನೋಡಿದರೆ ಅವರಿಗೊಂದು ಆಲ್ ದಿ ಬೆಸ್ಟ್ ಹೇಳೋಣ ಅನಿಸುತ್ತಿದೆ.