ಮದುವೆಗೆ ನಕಾರ,ಫೇಸ್ ಬುಕ್ ಗೆಳತಿಗೆ ಮಚ್ಚಿನೇಟು
ಹಲ್ಲೆಗೊಳಗಾದ ಟಿ. ದಾಸರಹಳ್ಳಿ ನಿವಾಸಿ ನಯನಾ ಅಭಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಮೇಲುಕೋಟೆ ಮೂಲದ ವಿನಯ್ ಪರಾರಿಯಾಗಿದ್ದು, ಗಿರಿನಗರ ಪೊಲೀಸರು ಆತನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾರೆ.
ಆರೋಪಿ ವಿನಯ್ ನಾಗೇಂದ್ರ ಬ್ಲಾಕ್ನ ರೂಮ್ ನಲ್ಲಿ ವಾಸಿಸುತ್ತಿದ್ದ, ಮಂಗಳವಾರ ನಯನಾಳನ್ನು ರೂಮಿಗೆ ಕರೆದು ಮದುವೆ ಮಾಡಿಕೊಳ್ಳೋಣ ಎಂದು ಒತ್ತಾಯಿಸಿದ್ದಾನೆ. ಆಕೆ ನಿರಾಕರಿಸಿದಾಗ ಕೋಪಗೊಂಡು ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ತಕ್ಷಣ ಸ್ಥಳದಿಂದ ಆತ ಪರಾರಿಯಾಗಿದ್ದು, ಸ್ಥಳೀಯರು ನಯನಾಳನ್ನು ಆಸ್ಪತ್ರಗೆ ದಾಖಲಿಸಿದ್ದಾರೆ. ನಯನಾಳ ತಲೆ, ಬಲಗೈ ಮತ್ತು ಎಡಗೈಗೆ ತೀವ್ರವಾದ ಪೆಟ್ಟಾಗಿದೆ. ಎಡಗೈನ ಮೂರು ಬೆರಳುಗಳು ಕತ್ತರಿಸಿ ಹೋಗಿದೆ ಎಂದು, ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು ತಿಳಿಸಿದ್ದಾರೆ.
ಫೇಸ್ಬುಕ್ ಪ್ರೇಮ : ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದ ವಿನಯ್ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ನಯನಾಳನ್ನು ಫೇಸ್ ಬುಕ್ ಮೂಲಕ ಪರಿಚಯ ಮಾಡಿಕೊಂಡಿದ್ದಾನೆ. ಇಬ್ಬರ ನಡುವೆ ಪ್ರೀತಿ ಪ್ರಾರಂಭವಾಗಿದೆ.
ಇಬ್ಬರ ಕುಟುಂಬದವರಿಗೂ ವಿಷಯ ತಿಳಿದಿತ್ತು. ಅವರು ಮದುವೆಗೆ ಒಪ್ಪಿಗೆ ನೀಡಿದ್ದರು. ಆದರೆ, ತಕ್ಷಣ ಮದುವೆ ಮಾಡಿಕೊಳ್ಳೋಣ ಎಂದು ವಿನಯ್ ನಯನಾಳನ್ನು ಒತ್ತಾಯಿಸುತ್ತಿದ್ದ. ಆದರೆ ಆಕೆ ಎರಡು ವರ್ಷದ ಬಳಿಕ ಮದುವೆ ಮಾಡಿಕೊಳ್ಳೋಣ ಎಂದು ಹೇಳಿದ್ದಳು.
ಮದುವೆ ವಿಷಯಕ್ಕಾಗಿ ಇಬ್ಬರ ನಡುವೆ ಕೆಲ ದಿನಗಳಿಂದ ಜಗಳ ನಡೆಯುತ್ತಿತ್ತು. ಮಂಗಳವಾರ ಮಧ್ಯಾಹ್ನ ನಯನಾಗೆ ಕರೆ ಮಾಡಿ ರೂಂಗೆ ಬರುವಂತೆ ಆಹ್ವಾನಿಸಿದ್ದ. ಆಕೆ ಆಗಮಿಸಿದ ನಂತರ ಅಡುಗೆ ಮಾಡಿ ಇಬ್ಬರು ಊಟ ಮಾಡಿದ್ದಾರೆ.
ಸಂಜೆಯ ವೇಳೆಗೆ ಪುನಃ ಮದುವೆ ವಿಷಯ ಪ್ರಸ್ತಾಪಿಸಿ ವಿನಯ್ ಆಕೆಯೊಂದಿಗೆ ಜಗಳ ಪ್ರಾರಂಭಿಸಿದ್ದಾನೆ. ಆಕೆ ನಿರಾಕರಿಸಿದಾಗ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ನಯನಾ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದನ್ನು ಕಂಡು, ಮೃತಪಟ್ಟಿರಬಹುದು ಎಂದು ಸ್ಥಳದಿಂದ ಪರಾರಿಯಾಗಿದ್ದಾನೆ.
ನಯನಾ ಸ್ಥಿತಿ ನೋಡಿದ ಸ್ಥಳೀಯರು ಗಿರಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು, ನಯನಾಳನ್ನು ನಿಮ್ಹಾನ್ಸ್ ಆಸ್ಪತೆಗೆ ದಾಖಲಿಸಿದರು. ಆಸ್ಪತ್ರಗೆ ಬಂದ ಯುವತಿಯ ಕುಟುಂಬದವರು ಆಕೆಯನ್ನು ಅಭಯ ಆಸ್ಪತ್ರೆಗೆ ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.