ಸಕಾಲ ಹಾಡಿ ಹೊಗಳಿದ ಕಾಂಗ್ರೆಸ್ ಸಚಿವ
ಬೆಂಗಳೂರಿನಲ್ಲಿ ಸುಮಾರು 30 ಸಾವಿರ ಎಕರೆ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ. ಈಗಾಗಲೇ 20 ಸಾವಿರ ಎಕರೆ ವಶಪಡಿಸಿಕೊಳ್ಳಲಾಗಿದೆ. ಉಳಿದ 10 ಸಾವಿರ ಎಕರೆಯನ್ನು ಸರ್ಕಾರ ವಶಪಡಿಸಿಕೊಳ್ಳಲಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸರ್ಕಾರದ ಭೂಮಿ ಒತ್ತುವರಿ ಆಗಿರುವುದು ಕಂಡು ಬಂದಿದೆ. ಈ ಭೂಮಿಯನ್ನು ವಾಪಸ್ ಪಡೆಯುವ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು ಎಂದು ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಭೂಗಳ್ಳರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಸಿದ್ಧರಾಮಯ್ಯ ಹೇಳಿದ್ದರು ಅದರಂತೆ, ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು, ನ್ಯಾಯಾಲಯ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುತ್ತದೆ ಹಾಗಾಗಿ ತಪ್ಪಿತಸ್ಥರು ಜೈಲಿಗೆ ಹೋಗಬೇಕಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಭೂವಿವಾದ ನ್ಯಾಯಾಲಯದಲ್ಲಿದೆ. ಹಾಗಾಗಿ ನ್ಯಾಯಾಲಯ ಏನು ತೀರ್ಪು ಕೊಡುವುದೋ ನೋಡಿ ಯಾವುದೇಪ್ರಭಾವಕ್ಕೆ, ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರು ಎಷ್ಟೇ ಪ್ರಭಾವಿಗಳಾಗಿದ್ದರೂ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದರು.
ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ರೆವಿನ್ಯೂ ನಿವೇಶನಗಳಲ್ಲಿ ಬಡವರು, ಮಧ್ಯಮವರ್ಗದವರು ಮನೆ ಕಟ್ಟಿಕೊಂಡಿದ್ದಾರೆ. ಇವರಲ್ಲಿ ಬಡವರೇ ಹೆಚ್ಚಾಗಿರುವುದರಿಂದ ಅವರಿಗೆ ತೊಂದರೆಯಾಗದಂತೆ ಸೂಕ್ತ ದರ ನಿಗದಿ ಮಾಡಿ ಸಕ್ರಮಗೊಳಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.
ತಾಲೂಕು ರಚನೆ ಕಷ್ಟ: ಬಿಜೆಪಿ ಸರ್ಕಾರ ಘೋಷಣೆ ಮಾಡಿದ್ದ 34 ಹೊಸ ತಾಲೂಕುಗಳ ರಚನೆ ಬಗ್ಗೆ ನಮ್ಮ ಸರ್ಕಾರ ಮರು ಪರಿಶೀಲನೆ ಮಾಡಲಿದೆ. ಇನ್ನೂ ಕೆಲವು ತಾಲೂಕುಗಳನ್ನು ಮಾಡಬೇಕೆಂಬ ಚಿಂತನೆ ಇದೆ.
ಎಲ್ಲವನ್ನೂ ಪರಿಶೀಲಿಸಿ ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ತಾಲೂಕುಗಳನ್ನು ಘೋಷಣೆ ಮಾಡುವುದು ದೊಡ್ಡದಲ್ಲ. ಈ ತಾಲೂಕುಗಳಿಗೆ ಆರ್ಥಿಕ ನೆರವು, ವಿವಿಧ ಸೌಲಭ್ಯ ಒದಗಿಸಬೇಕಾಗುತ್ತದೆ. ಇದ್ಯಾವುದನ್ನೂ ನೋಡದೆಯೇ ಹಿಂದಿನ ಸರ್ಕಾರ 34 ತಾಲೂಕುಗಳನ್ನು ಘೋಷಿಸಿದೆ ಎಂದರು.
ಲಭ್ಯ ಮಾಹಿತಿ ಪ್ರಕಾರ ಒಂದು ಜಿಲ್ಲೆ ರಚನೆಗೆ ಸುಮಾರು 15 ರಿಂದ 20 ಕೋಟಿ ಖರ್ಚಾಗುತ್ತದೆ. ತಾಲೂಕುಗಳ ರಚನೆಗೂ ಕೋಟಿಗಟ್ಟಲೆ ಹಣ ರಾಜ್ಯ ಬೊಕ್ಕಸದಿಂದ ವ್ಯಯ ಮಾಡಬೇಕಾಗುತ್ತದೆ.