ಬಿಬಿಎಂಪಿ ಖಡಕ್ ಆಯುಕ್ತ ಸಿದ್ದಯ್ಯ ನಿವೃತ್ತಿ,
ಮೊದಲು ಬಿಬಿಎಂಪಿ ಆಯುಕ್ತರಾಗಿದ್ದ ಸಿದ್ದಯ್ಯ ಅವರ ಜಾಗಕ್ಕೆ ಸರ್ಕಾರ ರಜನೀಶ್ ಗೋಯಲ್ ಅವರನ್ನು ತಂದು ಕೂರಿಸಿತ್ತು. ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಗಂಭೀರ ಸ್ವರೂಪ ಪಡೆದಾಗ ರಜನೀಶ್ ಗೋಯಲ್ ಅವರನ್ನು ವರ್ಗಾವಣೆ ಮಾಡಿ ಸಿದ್ದಯ್ಯ ಅವರನ್ನು ಪುನಃ ಆಯುಕ್ತರಾಗಿ ನೇಮಿಸಲಾಯಿತು.
ಖಡಕ್ ಅಧಿಕಾರಿಯಾಗಿರುವ ಸಿದ್ದಯ್ಯ ಅಧಿಕಾರ ವಹಿಸಿಕೊಂಡ ಕೆಲವು ದಿನಗಳಿಗೆ ಕಸದ ಸಮಸ್ಯೆ ಸ್ಪಲ್ಪ ಮಟ್ಟಿಗೆ ಸುಧಾರಣೆ ಕಂಡಿತು. ಭವಿಷ್ಯದಲ್ಲೂ ಕಸದ ಸಮಸ್ಯೆ ಉಂಟಾಗದಂತೆ ಮಾಡಲು ಸಿದ್ದಯ್ಯ ಯೋಜನೆ ರೂಪಿಸಿ, ಅವುಗಳನ್ನು ಅನುಷ್ಟಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತಿದ್ದಾರೆ.
ಇಂತಹ ಸಮಯದಲ್ಲೇ ಅವರ ಸೇವಾ ಅವಧಿ ಪೂರ್ಣಗೊಂಡಿದ್ದು ತಿಂಗಳ ಅಂತ್ಯಕ್ಕೆ ಅವರು ನಿವೃತ್ತಿ ಹೊಂದಲಿದ್ದಾರೆ. ಸಿದ್ದಯ್ಯ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಯಾರನ್ನು ನೇಮಿಸುವುದು ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೂತನ ಸರ್ಕಾರಕ್ಕೆ ಸವಾಲಾಗಿದೆ.
ಸರ್ಕಾರದ ಮೂಲಗಳ ಪ್ರಕಾರ ನೂತನ ಆಯುಕ್ತರನ್ನು ನೇಮಿಸಲು ಸರ್ಕಾರ ಹುಟುಕಾಟ ಪ್ರಾರಂಭಿಸಿದೆ. ಆಯುಕ್ತರಾಗಲು ಕೆಲವು ಅಧಿಕಾರಿಗಳು ಲಾಬಿ ನಡೆಸುತ್ತಿದ್ದಾರೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಎಂ ಸಿದ್ದರಾಮಯ್ಯ ಅವರ ಬಳಿ ಇದ್ದು, ಅವರಿಗೆ ಆಪ್ತರಾದವರನ್ನು ನೇಮಿಸಬಹುದು ಎಂದು ತಿಳಿದು ಬಂದಿದೆ.
ಹಂಗಾಮಿ ಮೇಯರ್ : ಮೇಯರ್ ಮತ್ತು ಉಪಮೇಯರ್ ಅವರ ಅಧಿಕಾರ ಅವಧಿಯು ಪೂರ್ಣಗೊಂಡಿದ್ದು, ನೂತನ ಮೇಯರ್ ಮತ್ತ ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆದಿಲ್ಲ. ಮೇಯರ್ ಡಿ.ವೆಂಕಟೇಶ್ ಮೂರ್ತಿ ಹಂಗಾಮಿ ಮೇಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. (ಬಿಬಿಎಂಪಿ ಮೇಯರ್ ಸ್ಥಾನ ಕಾಂಗ್ರೆಸ್ ಪಾಲು?)
ಸಿದ್ದಯ್ಯ ಅವರ ನಿವೃತ್ತಿಯಿಂದಾಗಿ ಆಯುಕ್ತರ ಹುದ್ದೆಯೂ ಖಾಲಿಯಾದರೆ ಬಿಬಿಎಂಪಿಯ ಆಡಳಿತ ನಿರ್ವಹಣೆ ಮಾಡುವುದು ಕಷ್ಟವಾಗಲಿದೆ. ಆದ್ದರಿಂದ ತಕ್ಷಣ ಆಯುಕ್ತರನ್ನು ನೇಮಿಸುವ ಒತ್ತಡ ಸರ್ಕಾರಕ್ಕಿದೆ. ಸಿದ್ದಯ್ಯ ಅವರನ್ನು ಆರು ತಿಂಗಳ ಕಾಲ ಮುಂದುವರೆಸುವ ಆಲೋಚನೆಯೂ ಸರ್ಕಾರದ ಮುಂದಿದೆ ಎಂದು ತಿಳಿದು ಬಂದಿದೆ.
ಖಡಕ್ ಅಧಿಕಾರಿ : ಬಿಡಿಎ, ಬಿಬಿಎಂಪಿ ಆಯುಕ್ತರಾಗಿ ಸೇವೆ ಸಲ್ಲಿಸಿರುವ ಸಿದ್ದಯ್ಯ ಖಡಕ್ ಅಧಿಕಾರಿ ಎಂಬ ಹೆಸರು ಪಡೆದಿದ್ದಾರೆ. ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿರುವ ಸಿದ್ದಯ್ಯ, ಸರ್ಕಾರದ ಮಟ್ಟದಲ್ಲೂ ಅತ್ಯಂತ ಪ್ರಭಾವಶಾಲಿ ಅಧಿಕಾರಿಯಾಗಿದ್ದರು.