ಕೆಜೆಪಿ ಪಕ್ಷದ ಚಿಹ್ನೆ ಬದಲಾವಣೆ ಮಾಡಲು ಚಿಂತನೆ
ಹಾವೇರಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಉದಾಸಿ, ಚುನಾವಣೆಯಲ್ಲಿ ಕರ್ನಾಟಕ ಜನತಾ ಪಕ್ಷದ ಚಿಹ್ನೆ ಗುರುತಿಸಲು ಮತದಾರರು ವಿಫಲರಾದರು. ಆದ್ದರಿಂದ ಪಕ್ಷ ಸೋಲು ಅನುಭವಿಸಬೇಕಾಯಿತು. ಈ ಹಿನ್ನೆಲೆಯಲ್ಲಿ ಪಕ್ಷದ ಚಿಹ್ನೆ ಬದಲಿಸಲು ಚಿಂತನೆ ನಡೆದಿದೆ ಎಂದು ಹೇಳಿದರು.
ಪಕ್ಷ ಪ್ರಾರಂಭವಾದ ಅಲ್ಪ ಅವಧಿಯಲ್ಲೇ ಜನರ ಗಮನ ಸೆಳೆಯುವಂತಹ ಚಿಹ್ನೆ ಪಡೆಯಲು ನಾವು ವಿಫಲವಾದೆವು. ಸಮಯಾವಕಾಶದ ಕೊತರೆ ಇತ್ತು. ತಕ್ಷಣ ಚುನಾವಣೆ ಎದುರಾಗಿದ್ದರಿಂದ ಕೇಂದ್ರ ಚುನಾವಣಾ ಆಯೋಗ ನೀಡಿದ ಚಿಹ್ನೆಯ ಮೂಲಕವೇ ಚುನಾವಣೆ ಎದುರಿಸಿದೆವು. (ಕೆಜೆಪಿ ತೆಂಗಿನಕಾಯಿ ಚಿಹ್ನೆ ಕಾಯಂ)
ಪಕ್ಷದ ತೆಂಗಿನಕಾಯಿ ಚಿಹ್ನೆಯನ್ನು ಜನರು ಸರಿಯಾಗಿ ಗುರುತಿಸಿಲ್ಲ. ಆದ್ದರಿಂದ ವಿಧಾನಸಭೆ ಚುಣಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು. ಸದ್ಯ ಪಕ್ಷದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಪಕ್ಷದ ಚಿಹ್ನೆ ಬದಲಾವಣೆ ಮಾಡಲು ಚಿಂತನೆ ನಡೆಸಿದ್ದಾರೆ ಎಂದು ಅವರು ಹೇಳಿದರು.
ಶೀಘ್ರದಲ್ಲೇ ಕೆಜೆಪಿ ಕಾರ್ಯಕಾರಿ ಸಮಿತಿ ಸಭೆ ನಡೆಸಿ ಪಕ್ಷ ಚಿಹ್ನೆ ಬದಲಾವಣೆ ಮಾಡುವ ಕುರಿತು ಅಂತಿಮ ನಿರ್ಣಯ ಕೈಗೊಳ್ಳಲಾಗುವುದು. ನಂತರ ಕೇಂದ್ರ ಚುನಾವಣಾ ಆಯೋಗಕ್ಕೆ ಪ್ರತ ಬರೆದು ಪಕ್ಷದ ಚಿಹ್ನೆ ಬದಲಾವಣೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಮೊದಲೇ ಇತ್ತು : ಕೆಜೆಪಿ ಪಕ್ಷ ಮೊಲದೇ ಸೈಕಲ್ ಅಥವ ನೇಗಿಲಯೋಗಿ ಚಿಹ್ನೆ ನೀಡುವಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಆದರೆ, ಇವೆರೆಡೂ ಚಿಹ್ನೆಯನ್ನು ಬೇರೆ ಪಕ್ಷಗಳಿಗೆ ಹಂಚಿಕೆ ಮಾಡಿದ್ದರಿಂದ ಆಯೋಗ, ತೆಂಗಿನ ಕಾಯಿ ಚಿಹ್ನೆ ನೀಡಿತ್ತು.
ಚುನಾವಣೆ ಹೊಸ್ತಿಲಲ್ಲಿ ಇದ್ದ ಕಾರಣ ಒಲ್ಲದ ಮನಸ್ಸಿನಿಂದಲೇ ಯಡಿಯೂರಪ್ಪ ತೆಂಗಿನಕಾಯಿ ಚಿಹ್ನೆ ಒಪ್ಪಿಕೊಂಡಿದ್ದರು. ವಿಧಾನಸಭೆ ಚುನಾವಣೆಗೂ ಪಕ್ಷದ ಅಭ್ಯರ್ಥಿಗಳನ್ನು ಅದೇ ಚಿಹ್ನೆಯ ಮೂಲಕ ಕಣಕ್ಕೆ ಇಳಿಸಿದ್ದರು. ಚುನಾವಣೆ ಮುಗಿದಿದ್ದು, ಪಕ್ಷ ಕೇಲವ 6 ಸ್ಥಾನಗಳನ್ನು ಪಡೆದಿದೆ.
ಸದ್ಯ ಮುಂದಿನ ಚುನಾವಣೆಗೆ ಹೆಚ್ಚಿನ ಕಾಲಾವಕಾಶ ಲಭ್ಯವಾಗಿದ್ದು, ಪಕ್ಷದ ಚಿಹ್ನೆ ಬದಲಾವಣೆ ಮಾಡಿ, ಜನರನ್ನು ಸೆಳೆಯುವ ಚಿಹ್ನೆ ಪಡೆಯಲು ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಸದ್ಯದಲ್ಲೇ ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಿದ್ದಾರೆ. ನಂತರ ಆಯೋಗ ಯಾವ ಚಿಹ್ನೆ ನೀಡಲಿದೆ ಎಂದು ತಿಳಿಯಲಿದೆ.(ಹಾವೇರಿ ಜಿಲ್ಲೆ : ಗೆದ್ದವರು, ಸೋತವರು)