ಅರ್ಹತೆಯಿಲ್ಲದ ಶಿಕ್ಷಕರ ನೇಮಕ ಬೇಡ : ಸುಪ್ರೀಂ
ಸೋಮವಾರ ಗುಜರಾತ್ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ 'ಸಹಾಯಕ ಶಿಕ್ಷಕ'ರ ನೇಮಕಾತಿ ಕುರಿತ ಪ್ರಕರಣವೊಂದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ಬಿ.ಎಸ್.ಚೌಹಾಣ್ ಮತ್ತು ದೀಪಕ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ಮಾನದಂಡವಿಲ್ಲದೇ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವುದು ಆಘಾತಕಾರಿ ಎಂದು ಅಭಿಪ್ರಾಯಪಟ್ಟಿತು.
ಶಿಕ್ಷಕರಿಗೆ ಶೈಕ್ಷಣಿಕ ಅರ್ಹತೆಯಿರಬೇಕು. ಅವರು ಮಾಡುವ ಬೋಧನೆ ಭವಿಷ್ಯದ ದೇಶದ ಪ್ರಜೆಗಳ ಮೇಲೆ ಪರಿಣಾಮ ಬೀರಬೇಕು. ಆದರೆ, ಅರ್ಹತೆ ಇಲ್ಲದವರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ವಿದ್ಯಾರ್ಥಿಗಳ ಭವಿಷ್ಯದ ಜೊತೆ ರಾಜ್ಯ ಸರ್ಕಾರಗಳು ಚೆಲ್ಲಾಟವಾಡುತ್ತಿದೆ ಎಂದು ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿತು.
ಶಿಕ್ಷಣ ಹಕ್ಕು ಕಾಯ್ದೆ (ಆರ್ ಟಿಇ)ಯನ್ನು ಎಲ್ಲಾ ರಾಜ್ಯಗಳು ಕಡ್ಡಾಯವಾಗಿ ಜಾರಿಗೆ ತಂದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕುವಂತೆ ನೋಡಿಕೊಳ್ಳಬೇಕು. ಖಾಸಗಿಯಾಗಿ ಅನರ್ಹತೆ ಹೊಂದಿರದ ಶಿಕ್ಷಕರನ್ನು ನೇಮಿಸಿಕೊಳ್ಳಬಾರದು ಎಂದು ಕೋರ್ಟ್ ನಿರ್ದೇಶನ ನೀಡಿದೆ.
ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಅರ್ಹತೆ ಇಲ್ಲದ ಶಿಕ್ಷಕನ್ನು ನೇಮಿಸಿಕೊಂಡು ಮಕ್ಕಳಿಗೆ ಬೋಧನೆ ಮಾಡಿಸುತ್ತಿವೆ. ನಂತರ ಈ ಶಿಕ್ಷಕರಿಗೆ ಸರಿಯಾಗಿ ವೇತನ ಪಾವತಿಸುತ್ತಿಲ್ಲ ಎಂದು ರಾಜ್ಯ ಸರ್ಕಾರಗಳ ಕ್ರಮಕ್ಕೆ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ಅನರ್ಹ ಶಿಕ್ಷಕರ ನೇಮಕ ಹಾಗೂ ಅರ್ಹತೆಗೆ ಸಂಬಂಧಿಸಿದ ಪೂರ್ಣ ವಿವರಗಳನ್ನು ಒಪ್ಪಿಸುವಂತೆ ಕೋರ್ಟ್ ಗುಜರಾತ್ ಸರ್ಕಾರಕ್ಕೆ ಆದೇಶ ನೀಡಿದೆ. ಸಾಮಾನ್ಯ ಶಿಕ್ಷಕರಿಗಿಂತ ಕಾಲು ಭಾಗದಷ್ಟು ವೇತನ ಪಡೆಯುವ ಈ 'ಸಹಾಯಕ ಶಿಕ್ಷಕರನ್ನು' ಹಲವು ರಾಜ್ಯಗಳಲ್ಲಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ.
ಸರ್ಕಾರಗಳ ಈ ಕ್ರಮದಿಂದ ಶಿಕ್ಷಣ ವ್ಯವಸ್ಥೆಯ ಮೌಲ್ಯ ಕುಸಿಯುತ್ತಿದೆ ಎಂದಿರುವ ನ್ಯಾಯಾಲಯ, ಸಹಾಯಕ ಶಿಕ್ಷಕರನ್ನು ನೇಮಿಸಿಕೊಳ್ಳುವ ಮೊದಲು ಅವರಿಗೆ ಮಕ್ಕಳಿಗೆ ಬೋಧಿಸುವ ಸಾಮರ್ಥ್ಯವಿದೆಯೇ ಎಂದು ಪರೀಕ್ಷಿಸಿ ನೇಮಿಸಿಕೊಳ್ಳಬೇಕು ಎಂದು ಎಲ್ಲಾ ರಾಜ್ಯಗಳಿಗೆ ಆದೇಶ ನೀಡಿದೆ.