ಸಚಿವ ಸ್ಥಾನ : ದೆಹಲಿ ತಲುಪಿದ ಪರಿಷತ್ ಸದಸ್ಯರು
ವಿಧಾನಪರಿಷತ್ ಸದಸ್ಯರಾದ ಮೋಟಮ್ಮ, ವೀರಣ್ಣ ಮತ್ತಿಕಟ್ಟಿ, ಕೆ.ಬಿ.ಕೋಳಿವಾಡ ಮುಂತಾದವರು ಈಗಾಗಲೇ ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದು, ಹೈ ಕಮಾಂಡ್ ನಾಯಕರ ಭೇಟಿಗಾಗಿ ಕಾದು ಕುಳಿತಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರೀ ಹೊರ ರಾಜ್ಯಗಳ ಪ್ರವಾಸದಲ್ಲಿದ್ದು, ಇಂದು ಸಂಜೆ ಆಗಮಿಸುವ ಸಾಧ್ಯತೆ ಇದೆ.
ಉಭಯ ನಾಯಕರು ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕೆ.ಬಿ.ಕೋಳಿವಾಡ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವಂತೆ ನಾವು ಹೈ ಕಮಾಂಡ್ ನಾಯಕರಿಗೆ ಮನವಿ ಮಾಡಲಿದ್ದೇವೆ ಎಂದು ಹೇಳಿದರು.
ಹೈ ಕಮಾಂಡ್ ನಾಯಕರನ್ನು ಭೇಟಿಯಾಗುವ ಮೊದಲು ಈ ನಾಯಕರು ಮಧುಸೂದನ್ ಮಿಸ್ತ್ರೀ ಅವರನ್ನು ಭೇಟಿಯಾಗಬೇಕು. ಆದರೆ, ಗುಜರಾತ್ ಪ್ರವಾಸದಲ್ಲಿರುವ ಮಿಸ್ತ್ರೀ ಇಂದು ಸಂಜೆ ದೆಹಲಿಗೆ ಆಗಮಿಸುವ ನಿರೀಕ್ಷೆ ಇದೆ. ನಂತರ ನಾಯಕರು ಅವರೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ.
ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ಹೈಕಮಾಂಡ್ ನಾಯಕರು ಸ್ಪಷ್ಟಪಡಿಸಿದ್ದರು. ಇದರಿಂದ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ಮೋಟಮ್ಮ, ವೀರಣ್ಣ ಮತ್ತೀಕಟ್ಟಿ ಮುಂತಾದವರಿಗೆ ನಿರಾಸೆ ಉಂಟಾಗಿತ್ತು. (ತಪ್ಪಿದ ಸಚಿವ ಸ್ಥಾನ, ಪರಿಷತ್ ಸದಸ್ಯರು ಗರಂ)
ರಾಜಭವನದಲ್ಲಿ ನಡೆದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗುವ ಮೂಲಕ ಇವರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದರು. ಸಂಪುಟ ರಚನೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳು ನಿರ್ಧಾರವರನ್ನು ಸಿಎಂ ಸಿದ್ದರಾಮಯ್ಯ ಹೆಗಲಿಗೆ ರಾಷ್ಟ್ರೀಯ ನಾಯಕರು ಒಪ್ಪಿಸಿದ್ದಾರೆ.
ಆದ್ದರಿಂದ ಪರಿಷತ್ ಸದಸ್ಯರ ದೆಹಲಿ ಭೇಟಿ ಅಷ್ಟು ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂದು ವಿಶ್ಲೇಷಿಸಲಾಗುತ್ತಿದೆ. ನಾಯಕರು ಹೈಕಮಾಂಡ್ ನಾಯಕರನ್ನು ಭೇಟಿಯಾದರೂ, ಕೇವಲ ಮನವಿ ಸಲ್ಲಿಸಿ ಮರಳಬಹುದಷ್ಟೇ. ಮುಂದೆ ಅವಕಾಶ ನೀಡುತ್ತೇವೆ ಎಂಬ ಭರವಸೆ ನಾಯಕರಿಂದ ದೊರೆಯಬಹುದು.(ನೂತನ ಸಚಿವರ ಪಟ್ಟಿ)
ಪ್ರಸ್ತುತ 28 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡು ಖಾತೆ ಹಂಚಿಕೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಸದ್ಯಕ್ಕೆ ಸಂಪುಟ ವಿಸ್ತರಣೆ ಕೆಲಸಕ್ಕೆ ಕೈ ಹಾಕುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಪರಿಷತ್ ಸದಸ್ಯರು ಮುಂದಿನ ಸಂಪುಟ ವಿಸ್ತರಣೆವರೆಗೆ ಕಾಯಬೇಕಾಗಿರುವುದು ಅನಿವಾರ್ಯ.