ಜಗನ್ ರೆಡ್ಡಿ ಅಕ್ರಮ: ಕೊನೆಗೂ ಸಚಿವರಿಬ್ಬರ ರಾಜೀನಾಮೆ
ಜೂನ್ 7ರಂದು ಸಿಬಿಐ ಕೋರ್ಟಿಗೆ ಹಾಜರಾಗುವಂತೆ ಸಚಿವರಿಬ್ಬರಿಗೂ ಸಿಬಿಐ ಆಮಂತ್ರಣ ನೀಡಿದೆ. ಶಾಸಕ ಸ್ಥಾನಗಳಿಗೂ ಇವರಿಬ್ಬರೂ ರಾಜೀನಾಮೆ ನೀಡಿದ್ದಾರೆ.
ಕಡಪ ಸಂಸದ ವೈಎಸ್ ಜಗನ್ ಮೋಹನ್ ರೆಡ್ಡಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಗೃಹ ಸಚಿವೆ ಸಬಿತಾ ರೆಡ್ಡಿ ಹಾಗೂ ಸಾರಿಗೆ ಸಚಿವ ಧರ್ಮನ್ನ ಪ್ರಸಾದ್ ರಾವ್ ಭಾಗಿಯಾಗಿದ್ದಾರೆ ಎಂದು ಸಿಬಿಐ ಆರೋಪಿಸಿದೆ. ಆದ್ದರಿಂದ ಸಬಿತಾ ರೆಡ್ಡಿ ಹಾಗೂ ಧರ್ಮನ್ನ ಅವರು ಭಾನುವಾರ ತಡ ರಾತ್ರಿ ಮುಖ್ಯಮಂತ್ರಿ ಎನ್ ಕಿರಣ್ ಕುಮಾರ್ ರೆಡ್ಡಿ ಅವರಿಗೆ ತಡವಾಗಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಈ ಇಬ್ಬರು ಕಳಂಕಿತ ಸಚಿವರಿಗೆ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿತ್ತು. ಹಾಗಾಗಿ, ರಾತ್ರೋರಾತ್ರಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿದ ಇಬ್ಬರೂ ಸಚಿವರು ರಾಜಿನಾಮೆ ಸಲ್ಲಿಸಿ, ಖಾಸಗಿ ವಾಹನಗಳಲ್ಲಿ ವಾಪಸಾಗಿದ್ದಾರೆ.
ಜಗನ್ ರೆಡ್ಡಿ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಬಿಐ ತಮ್ಮ ಹೆಸರನ್ನೂ ನಮೂದಿಸುತ್ತಿದ್ದಂತೆ ಸಚಿವ ಧರ್ಮನ್ನ ಪ್ರಸಾದ್ ರಾವ್ ಅವರು ಕಳೆದ ವರ್ಷ ಆಗಸ್ಟಿನಲ್ಲೇ ಸಿಎಂ ಕಿರಣ್ ರೆಡ್ಡಿಗೆ ಕೈಗೆ ರಾಜೀನಾಮೆ ಪತ್ರ ನೀಡಿದ್ದರು. ಆದರೆ ಅವರು ಅದನ್ನು ಅಂಗೀಕರಿಸಿರಲಿಲ್ಲ. ಆದರೆ ಕಳೆದ ವಾರ ಹೈಕಮಾಂಡಿನಿಂದ ಸೂಚನೆ ಬರುತ್ತಿದ್ದಂತೆ ಧರ್ಮನ್ನ ಪ್ರಸಾದ್ ರಾವ್ ಅಂದು ಸಿದ್ಧಪಡಿಸಿಟ್ಟುಕೊಂಡಿದ್ದ ರಾಜೀನಾಮೆ ಪತ್ರವನ್ನೇ ಸಿಎಂ ಕೈಗಿತ್ತು ಸಂಪುಟದಿಂದ ಹೊರನಡೆದರು.