ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆತ್ಮಹತ್ಯೆ
ಭೋಪಾಲ್ ಮೂಲದ ವಾಸ್ತವ್ ರಾಜಾರಾಂ (50) ಅವರು ಜೆಪಿ ನಗರದಲ್ಲಿರುವ ಬ್ರಿಗೇಡ್ ಪಾಮ್ ಅಪಾರ್ಟ್ಮೆಂಟಿನ ತಮ್ಮ ಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರ ಹೆಂಡತಿ ಮಕ್ಕಳು ಬೇಸಿಗೆ ರಜೆಗೆಂದು ಭೋಪಾಲಿಗೆ ತೆರಳಿದ್ದ ಸಮಯದಲ್ಲಿ ವಾಸ್ತವ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೋಮವಾರ ಬೆಳಿಗ್ಗೆ ರಾಜಾರಾಂ ಅವರ ಕಾರಿನ ಡ್ರೈವರ್ ಅವರನ್ನು ಪಿಕಪ್ ಮಾಡಲೆಂದು ಮನೆಗೆ ಬಂದಾಗ ಈ ಘಟನೆ ನಡೆದಿರುವುದು ತಿಳಿದುಬಂದಿದೆ. ಡ್ರೈವರ್ ಕೂಡಲೆ ಪೊಲೀಸರಿಗೆ ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಾಜಾರಾಂ ಅವರು ಯಾವುದೇ ಮರಣಪತ್ರ ಬರೆದಿಟ್ಟಿಲ್ಲ.
ರಾಜಾರಾಂ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ರಾಜಾರಾಂ ಅವರು ವಿಪರೀತವಾಗಿ ಸಾಲ ಮೈಮೇಲೆ ಎಳೆದುಕೊಂಡಿದ್ದರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ವಿಷಯ ತಿಳಿದ ರಾಜಾರಾಂ ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿಗೆ ಮರಳುತ್ತಿದ್ದಾರೆ. ಅವರು ಬಂದ ನಂತರವಷ್ಟೆ ನಿಜಾಂಶ ತಿಳಿದುಬರಲಿದೆ.
ಅಪ್ರಾಪ್ತೆ ಅತ್ಯಾಚಾರ, ದುರುಳನ ಬಂಧನ : ಬೇಸಿಗೆ ರಜೆಗೆಂದು ಅಜ್ಜಿಯ ಮನೆಗೆ ಬಂದಿದ್ದ 17 ವರ್ಷದ ಯುವತಿಯನ್ನು ಅಪಹರಿಸಿ ಅತ್ಯಾಚಾರವೆಸಗಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಬೆಳಗಾವಿ ಜಿಲ್ಲೆಯ ರಾಯಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.
ಮಹಾರಾಷ್ಟ್ರ ಮೂಲದ 17 ವರ್ಷದ ಯುವತಿಯನ್ನು ಪುಸಲಾಯಿಸಿ ಶೇರ್ವಾ ಗ್ರಾಮದ ಆಕೋರಿ ಬಾಬುಕಾಳೆ ಮೇ 13ರಂದು ಅಪಹರಿಸಿದ್ದ. ನಂತರ ಅನೇಕ ಪ್ರದೇಶಗಳಲ್ಲಿ ಸುತ್ತಾಡಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆತನಿಂದ ತಪ್ಪಿಸಿಕೊಂಡು ಬಂದಿದ್ದ ಯುವತಿ ದೂರು ನೀಡಿದ್ದಳು. ಆತನನ್ನು ಭಾನುವಾರ ರಾಯಭಾಗದ ಹಾರೋಗೇರಿ ಗ್ರಾಮದಲ್ಲಿ ಪೊಲೀಸರು ಬಂಧಿಸಿದ್ದಾರೆ. ತಾನು ಆಕೆಯನ್ನು ಅಪಹರಿಸಿಲ್ಲ, ಆಕೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೆ ನೀಡಿದ್ದಾನೆ. ಯುವತಿ ಈ ಸಂಗತಿಯನ್ನು ಅಲ್ಲಗಳೆದಿದ್ದಾಳೆ.