ಪೀಣ್ಯ : ಶೀಲ ಶಂಕಿಸಿ ಪತ್ನಿಯನ್ನು ಕೊಂದ ಪತಿ
ಸುವರ್ಣ ನಗರದ ನಿವಾಸಿಯಾಗಿದ್ದ ಲತಾ (29) ಕೊಲೆಯಾದವರು. ಈಕೆಯ ಪತಿ ತಿಮ್ಮರಾಜು ಸೀರೆಯಿಂದ ಲತಾ ಅವರು ಕುತ್ತಿಗೆಗೆ ಬಿಗಿದು ಆಕೆಯನ್ನು ಹತ್ಯೆ ಮಾಡಿದ್ದಾನೆ. ರಾತ್ರಿ ಪತ್ನಿಯನ್ನು ಕೊಲೆ ಮಾಡಿದ ಆರೋಪಿ, ಬೆಳಗಾಗುವವರೆಗೆ ಹೆಣದ ಜೊತೆಯೇ ಮನೆಯಲ್ಲೇ ಇದ್ದಾನೆ.
ಲತಾಗೆ ಅವರಿಗೆ ಹಿಂದೆ ರಮೇಶ್ ಎಂಬುವವರೊಂದಿಗೆ ವಿವಾಹವಾಗಿತ್ತು. ಆದರೆ, ಅವರು ಮೃತಪಟ್ಟ ಕಾರಣ, ತಿಮ್ಮರಾಜು ಜೊತೆ ಎಂಟು ವರ್ಷದ ಹಿಂದೆ ವಿವಾಹವಾಗಿದ್ದರು. ತಿಮ್ಮರಾಜು ಆಟೋಚಾಲಕನಾಗಿ ಕೆಲಸ ಮಾಡುತ್ತಿದ್ದರು. ಲತಾ ಗಾರ್ಮೆಂಟ್ಸ್ವೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು.
ಲತಾ ಇತ್ತೀಚೆಗೆ ಸ್ಥಳೀಯ ಕಾಂಗ್ರೆಸ್ ಮುಖಂಡರ ಜತೆ ಚುನಾವಣಾ ಪ್ರಚಾರಕ್ಕೆ ಹೋಗಿದ್ದಳು. ಈ ಕುರಿತು ದಂಪತಿಗಳ ನಡುವೆ ಜಗಳ ನಡೆದಿತ್ತು. ಶನಿವಾರ ರಾತ್ರಿಯೂ ಮದ್ಯ ಸೇವಿಸಿ ಬಂದ ತಿಮ್ಮರಾಜು ಲತಾ ಜೊತೆ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ಹೋದಾಗ ಸೀರೆಯಿಂದ ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.
ಬೆಳಗ್ಗೆವರೆಗೆ ಮೃತದೇಹದ ಜತೆಯೇ ಇದ್ದ ಆರೋಪಿ, ನಂತರ ಸಮೀಪದಲ್ಲಿದ್ದ ಲತಾ ಅವರ ತಂದೆಯ ಮನೆಗೆ ಹೋಗಿ ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ನಿಮ್ಮ ಪುತ್ರಿ ಬೇರೊಬ್ಬರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಹಾಗಾಗಿ ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ.
ಅಳಿಯನ ಮಾತು ಕೇಳಿ ಗಾಬರಿಗೊಂಡ ಲತಾ ಕುಟುಂಬದವರು, ತಿಮ್ಮರಾಜುನನ್ನು ಹಿಡಿದುಕೊಂಡು ಮನೆ ಬಳಿ ಹೋಗಿ ನೋಡಿದಾಗ, ಲತಾಳನ್ನು ಕೊಲೆಯಾಗಿರುವುದು ತಿಳಿದು ಬಂದಿದೆ. ನಂತರ ಪೀಣ್ಯ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.