ಭಾರತ-ಚೀನಾ ನಡುವೆ ಎಂಟು ಒಪ್ಪಂದಕ್ಕೆ ಸಹಿ
ಭಾರತದ ಪ್ರಧಾನಿ ಡಾ. ಮನಮೋಹನ ಸಿಂಗ್ ಮತ್ತು ಪ್ರಧಾನಿಯಾದ ನಂತರ ಭಾರತಕ್ಕೆ ಮೊದಲ ಬಾರಿ ಆಗಮಿಸಿರುವ ಲೀ ಕೇಕಿಯಾಂಗ್ ಅವರು ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಗಡಿ ವಿವಾದಕ್ಕೆ ಶೀಘ್ರದಲ್ಲೇ ತೆರೆ ಎಳೆಯುವುದಾಗಿ ಪ್ರಮಾಣ ಮಾಡಿದರು. ಏಷ್ಯಾದ ಎರಡೂ ದೈತ್ಯ ರಾಷ್ಟ್ರಗಳ ನಡುವಿನ ಸಾಮರಸ್ಯ ಜಗತ್ತಿನ ಶಾಂತಿಗೆ ಪ್ರೇರಕವಾಗಲಿದೆ ಎಂದಿದ್ದಾರೆ. ಸದ್ಯದಲ್ಲೇ ಸಿಂಗ್ ಅವರು ಚೀನಾ ಪ್ರವಾಸ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಕೆಲ ದಿನಗಳಿಂದ ಚೀನಾದ ಸೇನೆ ಭಾರತದ ಗಡಿಯಲ್ಲಿ ನುಸುಳುತ್ತಿದ್ದುದು ಎರಡೂ ರಾಷ್ಟ್ರಗಳ ನಡುವಿನ ತ್ವೇಷಮಯ ಪರಿಸ್ಥಿತಿಗೆ ಕಾರಣವಾಗಿತ್ತು. ಎರಡೂ ರಾಷ್ಟ್ರಗಳು ಸಾಮರಸ್ಯಕ್ಕೆ ಬದ್ಧವಾಗಿದ್ದು, ಗಡಿ ವಿವಾದ, ಬ್ರಹ್ಮಪುತ್ರಾ ನದಿ ನೀರು ಹಂಚಿಕೆ ಮುಂತಾದ ವಿಷಯ ಕುರಿತಂತೆ ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆ ಮುಂದುವರಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೃಷಿ, ಪ್ರವಾಸೋದ್ಯಮ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಎರಡೂ ರಾಷ್ಟ್ರಗಳು ಒಪ್ಪಂದ ಮಾಡಿಕೊಂಡಿವೆ. ಆದರೆ, ಹಿಮಾಲಯದಲ್ಲಿ ಚೀನಾ ಸೇನೆಯ ನುಸುಳುವಿಕೆ, ಎರಡೂ ರಾಷ್ಟ್ರಗಳ ನಡುವಿನ ಗಡಿ ತಂಟೆ, ಬ್ರಹ್ಮಪುತ್ರಾ ನದಿ ಸಮಸ್ಯೆ ಮುಂತಾದ ಗಹನವಾದ ಸಮಸ್ಯೆಗಳಿದೆ ಸಂಬಂಧಿಸಿದಂತೆ ಯಾವುದೇ ಒಪ್ಪಂದಗಳನ್ನು ಮಾಡಿಕೊಂಡಿಲ್ಲ.
1962ರಲ್ಲಿ ಭಾರತ ಮತ್ತು ಚೀನಾದ ನಡುವೆ ಯುದ್ಧ ನಡೆದ ನಂತರ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಅನೇಕ ಮಾತುಕತೆ, ಒಪ್ಪಂದಗಳು ನಡೆದಿದ್ದರೂ, ಗಡಿಯನ್ನು ಸರಿಯಾಗಿ ಗುರುತು ಹಾಕಲಾಗಿಲ್ಲ. ಕಳೆದ ತಿಂಗಳು ಸುಮಾರು 20 ಕಿ.ಮೀ. ವರೆಗೆ ಚೀನಾದ ಸೈನಿಕರು ಭಾರತದ ಗಡಿಯೊಳಗೆ ನುಸುಳಿದ್ದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು.
ಎರಡೂ ರಾಷ್ಟ್ರಗಳ ವಿಶೇಷ ಪ್ರತಿನಿಧಿಗಳು ಶೀಘ್ರದಲ್ಲಿಯೇ ಮತ್ತೆ ಭೇಟಿಯಾಗಲಿದ್ದು, ಎರಡೂ ದೇಶಗಳು ಪರಸ್ಪರವಾಗಿ ಒಪ್ಪುವಂತಹ ಒಪ್ಪಂದಕ್ಕೆ ಬರಲಾಗುವುದು. ಎರಡೂ ರಾಷ್ಟ್ರಗಳ ನಡುವೆ ಸಾಮರಸ್ಯ ಮತ್ತು ಶಾಂತಿ ಕಾಪಾಡಲಾಗುವುದು ಎಂದು ಮನಮೋಹನ ಸಿಂಗ್ ಅವರು ನುಡಿದರು. ಈ ಮಾತಿಗೆ ಚೀನಾದ ಪ್ರಧಾನಿ ಸಹಮತ ವ್ಯಕ್ತಪಡಿಸಿದರು. ಎರಡೂ ದೇಶಗಳ ನಡುವಿನ ಉತ್ತಮ ಸಂಬಂಧ ಏಷ್ಯಾ ಮತ್ತು ಜಗತ್ತಿಗೆ ಒಳ್ಳೆಯದಾಗಲಿದೆ ಎಂದು ಲೀ ನುಡಿದರು.
ಲೀ ಅವರ ಭೇಟಿಯನ್ನು ವಿರೋಧಿಸಿ ಕೆಲ ಟಿಬೇಟಿಯನ್ನರು ಲೀ ಅವರು ತಂಗಿರುವ ತಾಜ್ ಪ್ಯಾಲೇಸ್ ಹೋಟೆಲ್ ಬಳಿ ಪ್ರತಿಭಟನೆ ನಡೆಸಿದರು. ಕೆಲ ಟಿಬೇಟಿಯನ್ನರು ಕಟ್ಟಡದ ಮೇಲೆ ಹತ್ತಿ ಲೀ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಲೀ ಅವರ ಭೇಟಿಯಿಂದಾಗಿ ಉದ್ಭವಿಸಬಹುದಾದ ಪರಿಸ್ಥಿತಿಯನ್ನು ಮನಗಂಡು ದೆಹಲಿ ಮೆಟ್ರೋವನ್ನು ಇಂದು ಬಂದ್ ಮಾಡಲಾಗಿದೆ. ಭಾರತ ಪ್ರವಾಸದ ನಂತರ ಲೀ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ.