ತಪ್ಪಿದ ಸಚಿವ ಸ್ಥಾನ, ಪರಿಷತ್ ಸದಸ್ಯರು ಗರಂ
ರಾಜಭವನದಲ್ಲಿ ನಡೆದ ಸಚಿವರ ಪ್ರಮಾಣ ವಚನ ಸಮಾರಂಭಕ್ಕೆ ವಿಧಾನಪರಿಷತ್ ಸದಸ್ಯರು ಗೈರು ಹಾಜರಾಗುವ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಸಚಿವಸ್ಥಾನ ಕೈ ತಪ್ಪಿದ ಪರಿಷತ್ ಸದಸ್ಯರು ನಾಳೆ ದೆಹಲಿಗೆ ಹೋಗುವ ನಿರ್ಧಾರ ಕೈಗೊಂಡಿದ್ದಾರೆ.(ನೂತನ ಸಚಿವರ ಪಟ್ಟಿ)
ವಿಧಾನಪರಿಷತ್ ಸದಸ್ಯರಾದ ವೀರಣ್ಣ ಮತ್ತೀಕಟ್ಟಿ ಮತ್ತು ಮೋಟಮ್ಮ ಅವರ ಹೆಸರುಗಳು ಸಚಿವರ ಪಟ್ಟಿಯಲ್ಲಿ ಮೊದಲು ಕಾಣಿಸಿಕೊಂಡಿತ್ತು. ಆದರೆ, ಹೈ ಕಮಾಂಡ್ ನಾಯಕರು ಅಂತಿಮಗೊಳಿಸಿರುವ ಪಟ್ಟಿಯಲ್ಲಿ ಪರಿಷತ್ ಸದಸ್ಯರ ಹೆಸರುಗಳನ್ನು ಕೈ ಬಿಡಲಾಗಿದೆ. (ಹತ್ತು ಜಿಲ್ಲೆಗಳಿಗೆ ಸಚಿವ ಸ್ಥಾನವಿಲ್ಲ)
ಇದರಿಂದ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ದೂರವುಳಿದರು. ಹೈ ಮಾಂಡ್ ನಾಯಕರ ಜೊತೆ ಚರ್ಚಿಸಲು ಈ ನಾಯಕರು ನಾಳೆ ದೆಹಲಿಗೆ ತೆರೆಳುವುದಾಗಿಯೂ ಹೇಳಿದ್ದಾರೆ. ರಾಜ್ಯ ನಾಯಕರು ಇವರನ್ನು ಸಮಾಧಾನ ಪಡಿಸುತ್ತಾರೆಯೇ ಅಥವ ಇವರು ದೆಹಲಿಗೆ ತೆರಳುತ್ತಾರೆಯೇ ಎಂಬ ಪ್ರಶ್ನೆಗೆ ನಾಳೆ ಉತ್ತರ ದೊರೆಯಲಿದೆ.
ಶಾಸಕರು ಗೈರು : ಪಕ್ಷದ ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ್ ದೆಹಲಿಯಲ್ಲೇ ಉಳಿದಿದ್ದು ಅವರು ಪ್ರಮಾಣ ವಚನ ಸಮಾರಂಭದಿಂದ ದೂರವುಳಿದರು. ಬಳ್ಳಾರಿ ನಗರ ಶಾಸಕ ಅನಿಲ್ ಲಾಡ್ ಮತ್ತು ಸಾಗರ ಕ್ಷೇತ್ರದ ಶಾಸಕ ಕಾಗೋಡು ತಿಮ್ಮಪ್ಪ ಸಹ ಸಚಿವ ಸ್ಥಾನ ಕೈ ತಪ್ಪಿದ್ದರಿಂದ ರಾಜಭವನಕ್ಕೆ ಆಗಮಿಸಲಿಲ್ಲ.