ಇತ್ತ ನೀರಿಗೆ ಹಾಹಾಕಾರ:ಅತ್ತ ಜಯಾ ಮತ್ತದೇ ರಾಗ
ಚೆನ್ನೈ, ಮೇ 18: ಕಾವೇರಿ ನದಿ ನೀರನ್ನೇ ನಂಬಿಕೊಂಡಿರುವ ನಾಲ್ಕು ಜಿಲ್ಲೆಗಳಾದ ಬೆಂಗಳೂರು, ಮಂಡ್ಯ, ಮೈಸೂರು ಮತ್ತು ಹಾಸನದಲ್ಲಿ ನೀರಿಗೆ ಅಕ್ಷರಸ: ಹಾಹಾಕಾರ ಉಂಟಾಗಿದ್ದರೆ ಅತ್ತ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಮತ್ತೆ ಕ್ಯಾತೆ ತೆಗೆದಿದ್ದಾರೆ.
KRS ಮತ್ತು ಹೇಮಾವತಿ ಜಲಾಶಯ ಖಾಲಿ ಖಾಲಿಯಾಗಿದ್ದರೆ ಅತ್ತ ಜಯಲಲಿತಾ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿ ರಚಿಸುವಂತೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ.
ತಮಿಳುನಾಡು ರೈತರಿಗೆ ಕರ್ನಾಟಕದಿಂದ ದಶಕಗಳಿಂದ ಅನ್ಯಾಯವಾಗುತ್ತಲೇ ಇದೆ. ದೀರ್ಘಕಾಲಿಕ ನ್ಯಾಯಕ್ಕಾಗಿ ತಮಿಳುನಾಡಿನ ಲಕ್ಷಾಂತರ ರೈತರು ಇನ್ನಷ್ಟು ಕಾಯಲು ಸಿದ್ದರಿಲ್ಲ.
ಕಾವೇರಿ ಪ್ರದೇಶದ ನಮ್ಮ ರೈತರನ್ನು ರಕ್ಷಿಸಬೇಕೆಂದರೆ ಅದಕ್ಕೆ ಇರುವ ಪರಿಹಾರವೆಂದರೆ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪಿಸುವುದು.
ಈ ಕೂಡಲೇ ಕೇಂದ್ರ ಸರಕಾರ ಮಂಡಳಿ ಸ್ಥಾಪಿಸಿ ನಮ್ಮ ರೈತರಿಗೆ ನ್ಯಾಯ ಕೊಡಿಸಿ ಎಂದು ಜಯಲಲಿತಾ ಪ್ರಧಾನಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಈ ಮಧ್ಯೆ ಕಾವೇರಿ ನಿರ್ವಹಣಾ ಮಂಡಳಿ ಸ್ಥಾಪನೆ ಪರಿಗಣನೆಯಲ್ಲಿದೆ ಎಂದು ಕೇಂದ್ರ ಸರಕಾರ ಮೇ ಹತ್ತರಂದು ಸುಪ್ರೀಂಕೋರ್ಟಿಗೆ ಅಫಿಡವಿಟ್ ಸಲ್ಲಿಸಿದೆ.
ಜಲಮಂಡಳಿ ತುರ್ತು ಸಭೆ: ನೀರಿನ ಸಮಸ್ಯೆ ಉಲ್ಭಣಿಸುತ್ತಿದ್ದಂತೆಯೇ ಜಲಸಂಪನ್ಮೂಲ ಇಲಾಖೆ ಮತ್ತು ಬೆಂಗಳೂರು ಜಲಮಂಡಳಿಯ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಲಾಗಿದೆ.
ಸಿಎಂ ಸಿದ್ದರಾಮಯ್ಯ ಮುಖಂಡತ್ವದಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಲಭ್ಯವಿರುವ ನೀರಿನಲ್ಲಿ 'ಸಂಕಷ್ಟ ಸೂತ್ರ'ದಡಿಯಲಿ ಪರಿಸ್ಥಿತಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ಸಿಎಂ ಆದೇಶ ನೀಡಿದ್ದಾರೆ.
ಸಂಕಷ್ಟ ಸೂತ್ರ ಅಂದರೇನು? ಲಭ್ಯವಿರುವ ನೀರಿನ ಆಧಾರದ ಮೇಲೆ ಬೆಂಗಳೂರು, ಮಂಡ್ಯ, ಮೈಸೂರು ಮತ್ತು ಹಾಸನದಲ್ಲಿ ಸೀಮಿತ ಅವಧಿಯಲ್ಲಿ ಮಾತ್ರ ನೀರು ಪೂರೈಕೆ ಮಾಡುವುದು.
ಎರಡು ದಿನಕ್ಕೊಮ್ಮೆ ನೀರಿನ ಬದಲು 3-4 ದಿನಕ್ಕೊಮ್ಮೆಯಂತೆ ನೀರು ಪೂರೈಸುವುದು. ಜಲಮಂಡಳಿ ಪೂರೈಸುವ ನೀರನ್ನು ಕುಡಿಯಲು ಮಾತ್ರ ಬಳಸುವುದು.
ಬಟ್ಟೆ ಒಗೆಯಲು, ವಾಹನ ತೊಳೆಯಲು ಮತ್ತು ಇತರ ಕೆಲಸಗಳಿಗೆ ಬಳಸದಂತೆ ಸಾರ್ವಜನಿಕರಿಗೆ ಸೂಚನೆ ನೀಡಿ ಜಾಗೃತಿ ಮೂಡಿಸುವುದು.