ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಥಾನ ವಂಚಿತರಿಂದ ಆಕ್ರೋಶ, ಭುಗಿಲೆದ್ದ ಅತೃಪ್ತಿ

By Prasad
|
Google Oneindia Kannada News

Dissatisfaction explodes in Congress
ಬೆಂಗಳೂರು, ಮೇ. 18 : ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆಯಾದ ಮರುಘಳಿಗೆಯಿಂದಲೇ ಕಾಂಗ್ರೆಸ್ಸಿನಲ್ಲಿ ಅಸಮಾಧಾನ ಭುಗಿಲೆದ್ದಿದೆ. ಡಿಕೆ ಶಿವಕುಮಾರ್ ಪ್ರತಿನಿಧಿಸುತ್ತಿರುವ ಕನಕಪುರ ಸೇರಿದಂತೆ 10 ಜಿಲ್ಲೆಗಳಿಗೆ ಸಂಪುಟದಲ್ಲಿ ಪ್ರಾತಿನಿಧ್ಯ ದೊರಕದ ಕಾರಣ, ಸಚಿವ ಸ್ಥಾನ ವಂಚಿತರ ಬೆಂಬಲಿಗರು ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.

ಕೊಡಗು, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಹಾವೇರಿ, ಬೆಂಗಳೂರು ಗ್ರಾಮಾಂತರ, ಬೀದರ, ರಾಮನಗರ, ರಾಯಚೂರು ಜಿಲ್ಲೆಗಳಿಗೆ ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ. ಜಿಲ್ಲಾವಾರು, ಜಾತಿವಾರು ಲೆಕ್ಕಾಚಾರದಲ್ಲಿ ಪ್ರಾತಿನಿಧ್ಯ ಕೊಡಿಸಲಾಗುವುದು ಎಂಬ ಮಾತನ್ನು ಸಿದ್ದರಾಮಯ್ಯ ಉಳಿಸಿಕೊಂಡಿಲ್ಲ ಎಂದು ಆಯಾ ಜಿಲ್ಲೆಯ ಶಾಸಕರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವಾರು ಕೇಸುಗಳನ್ನು ಎದುರಿಸುತ್ತಿರುವ ಕನಕಪುರ ಶಾಸಕ ಡಿಕೆ ಶಿವಕುಮಾರ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರಕದ ಕಾರಣ ಅವರ ಬೆಂಬಲಿಗರು ಕನಕಪುರ ಮತ್ತು ರಾಮನಗರ ರಸ್ತೆಗಳಲ್ಲಿ ಟೈರುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ತಡೆ ನಡೆಸಿದ ಕಾರಣ ಸಂಚಾರ ಅಸ್ತವ್ಯಸ್ತವಾಗಿತ್ತು. ಸಚಿವ ಸ್ಥಾನಕ್ಕಾಗಿ ತಾವು ಕಾಯುವುದಾಗಿ ಡಿಕೆಶಿ ಹೇಳಿಕೆ ನೀಡಿದ್ದಾರಾದರೂ ಅವರ ಬೆಂಬಲಿಗರು ಕೇಳುವ ಸ್ಥಿತಿಯಲ್ಲಿಲ್ಲ.

ಇನ್ನು ಮೈಸೂರಿನಲ್ಲಿ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೆಂದು ಅವರ ಬೆಂಬಲಿಗ ಫೈರೋಜ್ ಖಾನ್ ಎಂಬುವವರು ಮೈಗೆ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದರು. ಇನ್ನೇನು ಬೆಂಕಿಕಡ್ಡಿ ಗೀರುವುದು ಬಾಕಿಯಿರುವಾಗ ಅಕ್ಕಪಕ್ಕದವರು ಬಲವಂತವಾಗಿ ಖಾನ್ ಅವರನ್ನು ದೂರ ಕರೆದುಕೊಂಡು ಹೋಗಿ ಅನಾಹುತ ತಪ್ಪಿಸಿದರು. ಆರಂಭದ ಪಟ್ಟಿಯಲ್ಲಿ ಮಾಜಿ ಕಾಂಗ್ರೆಸ್ಸಿಗ ಅಜೀಜ್ ಸೇಠ್ ಅವರ ಮಗ ತನ್ವೀರ್ ಸೇಠ್ ಅವರ ಹೆಸರಿತ್ತು.

ಚಿಕ್ಕಬಳ್ಳಾಪುರದಲ್ಲಿಯೂ ಗೌರಿಬಿದನೂರು ಶಾಸಕ ಎನ್.ಎಚ್. ಶಿವಶಂಕರ ರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಅವರ ಬೆಂಬಲಿಗರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ, ರಸ್ತೆಯಲ್ಲಿ ಟೈರುಗಳನ್ನು ಸುಟ್ಟು ರಸ್ತೆ ತಡೆ ನಡೆಸಿದರು. ಯಾದಗಿರಿಯಲ್ಲಿ ಕೂಡ 5 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯಾದಗಿರಿ ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಅವರ ಬೆಂಬಲಿಗರು ಕೂಡ ಕಾಂಗ್ರೆಸ್ ಕಚೇರಿಯನ್ನು ಧ್ವಂಸ ಮಾಡಿದ್ದಾರೆ. ಟ್ಯೂಬ್ ಲೈಟ್, ಬಲ್ಬು, ಪೀಠೋಪಕರಣಗಳನ್ನು ಒಡೆದುಹಾಕಿದ್ದಾರೆ. ಕಿಟಕಿಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾರೆ.

ಒಟ್ಟಿನಲ್ಲಿ ಅನೇಕ ಜಿಲ್ಲೆಗಳಲ್ಲಿ ಅಸಮಾಧಾನದ ಹೊಗೆ ಆವರಿಸಿಕೊಂಡಿದೆ. ಶಾಸಕರ ಭವನದ ಹೊರಗಿನಿಂದಲೇ ಆರಂಭವಾದ ಪ್ರತಿಭಟನೆಗಳು ಪ್ರಾತಿನಿಧ್ಯ ಸಿಗದ ಜಿಲ್ಲೆಗಳಲ್ಲಿ ಹಬ್ಬಿದೆ. ಸಿದ್ದು ಸಂಪುಟದಲ್ಲಿ ವಿಧಾನಪರಿಷತ್ ಸದಸ್ಯರಿಗೆ ಕೂಡ ಸ್ಥಾನ ನೀಡಲಾಗಿಲ್ಲದ ಕಾರಣ ಮೋಟಮ್ಮ ಮುಂತಾದವರು ಸಿಡಿಮಿಡಿಗೊಂಡಿದ್ದು, ದೆಹಲಿಗೆ ಪಯಣ ಬೆಳೆಸಿ ಸೋನಿಯಾ ಗಾಂಧಿಗೆ ತಮ್ಮ ಅಹವಾಲು ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಮಧ್ಯಾಹ್ನ 12.30ಕ್ಕೆ ಸಂಪುಟ ಸಭೆ ನಡೆಯಲಿದೆ.

English summary
Original Congressmen denied berth in Siddaramaaih Cabinet ignite flame war in Karnataka. Okkaliga leader DK Shivakumar, MLCs, Dalits to meet Sonia Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X