ಬಿಜೆಪಿಯಿಂದ ಎಂಎಲ್ ಸಿ ಲೆಹರ್ ಸಿಂಗ್ ಉಚ್ಚಾಟನೆ
ರಾಜ್ಯ ಬಿಜೆಪಿ ಖಜಾಂಚಿಯೂ ಆಗಿರುವ ವಿಧಾನಪರಿಷತ್ ಸದಸ್ಯ ಲೆಹರ್ ಸಿಂಗ್ ಅಡ್ವಾಣಿ ನಡವಳಿಕೆ ಹಾಗೂ ಮನೋಭಾವವನ್ನೇ ಪ್ರಶ್ನಿಸಿದ್ದರು. ಈ ಹಿಂದೆ ಕೂಡಾ ಮೋದಿ ಹಾಗೂ ಬಿಎಸ್ ಯಡಿಯೂರಪ್ಪ ಪರ ಮಾತುಗಳನ್ನಾಡಿ, ಬಿಜೆಪಿ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದ್ದರು. ಬಿಎಸ್ ಯಡಿಯೂರಪ್ಪ, ನರೇಂದ್ರ ಮೋದಿ, ಕಲ್ಯಾಣ್ ಸಿಂಗ್, ವಸುಂಧರಾ ರಾಜೆ ಅವರಂಥ ಜನಪ್ರಿಯ ನಾಯಕರನ್ನು ಹೈಕಮಾಂಡ್ ನಿರ್ಲಕ್ಷಿಸಿ ಕಾಟ ಕೊಡುತ್ತಿರುತ್ತದೆ ಎಂದು ಲೆಹರ್ ಸಿಂಗ್ ಹೇಳಿದ್ದರು.
ಅಡ್ವಾಣಿಗೆ ಸವಾಲು: ರಾಜ್ಯದಲ್ಲಿ ಪಕ್ಷದ ಹಿನ್ನಡೆಗೆ ನಿಮ್ಮ ಕೊಡುಗೆಯೂ ಇದೆ. ರಾಜಿಯಾಗದ ನಿಮ್ಮ ಈಗಿನ ಮನೋಭಾವ ಮೊದಲೇ ಇದ್ದಿದ್ದರೆ ರಾಜ್ಯದಲ್ಲಿ ಪಕ್ಷ ಇವತ್ತು ಈ ದಯನೀಯ ಸ್ಥಿತಿಗೆ ತಲುಪುತ್ತಿರಲಿಲ್ಲ. ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಬಹುಮತ ಗಳಿಸುವುದಕ್ಕಾಗಿ ಆಪರೇಷನ್ ಕಮಲ ನಡೆಸಲಾಯಿತು. ಆಗ ನೀವು ಯಡಿಯೂರಪ್ಪ ಅವರನ್ನು ಪ್ರಶ್ನಿಸದೆ ಮೌನವಾಗಿದ್ದಿರಿ. ನಿಮ್ಮ ಯಾತ್ರೆಗಳಿಗೆ ಹಣ ಎಲ್ಲಿಂದ ಹರಿದು ಬಂತು ಎಂಬುದನ್ನು ಕೇಳಿದ್ದೀರಾ ಎಂದು ಲೆಹರ್ ಸಿಂಗ್ ಖಾರವಾಗಿ ಪ್ರಶ್ನಿಸಿದ್ದರು.
ಅಡ್ವಾಣಿಗೆ ಬರೆದಿರುವ ಗುಪ್ತ ಪತ್ರದಲ್ಲಿ ಒಟ್ಟು 13 ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಈ ಬಗ್ಗೆ ಸ್ಪಷ್ಟೀಕರಣ ನೀಡುವಂತೆಯೂ ಆಗ್ರಹಿಸಿದ್ದರು.ಕರ್ನಾಟಕದ ಭ್ರಷ್ಟಾಚಾರವನ್ನು ಪದೇ ಪದೇ ಪ್ರಸ್ತಾಪಿಸುವ ನೀವು ಜಾರ್ಖಂಡ್ ರಾಜ್ಯದಲ್ಲಿ ಶಿಬು ಸೊರೇನ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದರ ಬಗ್ಗೆ ಚಕಾರ ಎತ್ತಲಿಲ್ಲ ಏಕೆ? ಮೈನಿಂಗ್ ಮಾಫಿಯಾ ಜತೆ ಸುಷ್ಮಾ ಸ್ವರಾಜ್ ಸಂಬಂಧ ಹೊಂದಿರುವ ಬಗ್ಗೆ ಪ್ರಶ್ನಿಸಿದ್ದಿರಾ? ನಿತಿನ್ ಗಡ್ಕರಿ ಭ್ರಷ್ಟಾಚಾರದ ಬಗ್ಗೆ ನಿಮ್ಮ ನಿಲುವೇನು? ಪ್ರಧಾನಿಯಾಗುವ ನಿಮ್ಮ ಕನಸಿಗೆ ಹಣ ಸುರಿದವರು ಯಾರು? ಹೀಗೆ ಅಡ್ವಾಣಿ ಅವರಿಗೆ ನೇರ ಪ್ರಶ್ನೆಗಳನ್ನು ಹಾಕಿದ್ದಲ್ಲದೆ ಸ್ಪಷ್ಟೀಕರಣ ನೀಡುವ ಸಮಯ ಸ್ಥಳ ಹೇಳಿದರೆ ನಾವು ಬಂದು ನಿಮ್ಮನ್ನು ಭೇಟಿ ಮಾಡುತ್ತೇವೆ ಎಂದು ಮನವಿ ಸಲ್ಲಿಸಿದ್ದರು.
ಲೆಹರ್ ಸಿಂಗ್ ವರ್ತನೆ ಉದ್ದಟತನದಿಂದ ಕೂಡಿದ್ದು ಎಂದು ಪರಿಗಣಿಸಿರುವ ಬಿಜೆಪಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದೆ. ಲೆಹರ್ ಸಿಂಗ್ ಅವರು ಯಡಿಯೂರಪ್ಪ ಅವರ ಆಪ್ತರಾಗಿದ್ದರು ಕರ್ನಾಟಕ ಜನತಾ ಪಕ್ಷದಿಂದ ದೂರವೇ ಉಳಿದಿದ್ದರು. ಸದಾನಂದ ಗೌಡರ ಸಂಪುಟ ವಿಸ್ತರಣೆ ವೇಳೆ ಅಲ್ಪಸಂಖ್ಯಾತರನ್ನು ಬಿಟ್ಟು ಲೆಹರ್ ಸಿಂಗ್ ಗೆ ಮಣೆ ಹಾಕುವಂತೆ ಯಡಿಯೂರಪ್ಪ ಒತ್ತಾಯಿಸಿದ್ದರು ಎಂಬ ಮಾತಿದೆ. ಈಗ ಯಡಿಯೂರಪ್ಪ ಅವರ ಬೆನ್ನ ಹಿಂದೆ ಲೆಹರ್ ಸಿಂಗ್ ನಿಲ್ಲುತ್ತಾರಾ? ಕಾದು ನೋಡಬೇಕಿದೆ.