ಸಚಿವರ ಪಟ್ಟಿ ರೆಡಿ, ನಾಳೆ ಪ್ರಮಾಣವಚನ
ಮೊದಲ ಹಂತದಲ್ಲಿ 20 ರಿಂದ 25 ಮಂದಿ ಶಾಸಕರು ಸಚಿವ ಸಂಪುಟ ಸೇರಲಿದ್ದಾರೆ. ಶನಿವಾರ ಬೆಳಗ್ಗೆ 10.30ಕ್ಕೆ ರಾಜಭವನದಲ್ಲಿ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ನವದೆಹಲಿಯಲ್ಲಿ ಗುರುವಾರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಸಿದ್ದರಾಮಯ್ಯ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರೀ ಸಮಾಲೋಚನೆ ನಡೆಸಿದರು. ನಂತರ ಸಂಭಾವ್ಯ ಸಚಿವರ 27 ಹೆಸರುಗಳ ಪಟ್ಟಿಯನ್ನು ಎ.ಕೆ.ಆಂಟನಿ ಮತ್ತು ಅಂಬಿಕಾ ಸೋನಿ ಅವರನ್ನು ಒಳಗೊಂಡ ಉಸ್ತುವಾರಿ ಸಮಿತಿಗೆ ಸಲ್ಲಿಸಿದರು.
ಸಮಿತಿಯ ಪರಿಶೀಲನೆಯ ನಂತರ ಪಟ್ಟಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಅಂಕಿತ ಬೀಳಲಿದೆ. ಎರಡು ಮಂದಿ ಶಾಸಕರ ಹೆಸರನ್ನು ಆಂಟನಿ ಕೈಬಿಟ್ಟಿದ್ದು, ಇದರಿಂದ 25 ಸಚಿವರು ಸಂಪುಟ ಸೇರುವ ಸಾಧ್ಯತೆ ಇದೆ.
ಕಳಂಕಿತರು ಎಂದರೆ ಯಾರು : ಕಳಂಕಿತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬಾರದು ಎನ್ನುವುದು ನಿಯಮ. ಆದರೆ, ಕಳಂಕಿತರು ಯಾರು ಎಂದು ನಿರ್ಧರಿಸುವ ಮಾನದಂಡ ಯಾವುದು ಎಂಬ ಬಗ್ಗಯೇ ಹಲವಾರು ಗೊಂದಲಗಳಿವೆ. ಆದ್ದರಿಂದ ಯಾರು ಕಳಂಕಿತರು ಎಂದು ನಿರ್ಧರಿಸಲು ನಾಯಕರು ವಿಫಲರಾಗಿದ್ದಾರೆ.
ಕಳಂಕಿತರನ್ನು ಆರಿಸಿ ಪಟ್ಟಿಯಿಂದ ಹೊರಗಿಡುವ ಜವಾಬ್ದಾರಿಯನ್ನು ರಾಜ್ಯ ನಾಯಕರು ಹೈಕಮಾಂಡ್ ಹೆಗಲಿಗೆ ವಹಿಸಿದ್ದಾರೆ. ಎ.ಕೆ.ಆಂಟನಿ ನೇತೃತ್ವದ ಸಮಿತಿ ಈ ಪಟ್ಟಿಯನ್ನು ಇಂದು ಅಂತಿಮಗೊಳಿಸುವ ಸಾಧ್ಯತೆ ಇದ್ದು, ಇಂದು ರಾತ್ರಿ ಸಚಿವರ ಪಟ್ಟಿ ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ.
ಸ್ಪೀಕರ್ ಆಗಲು ತಯಾರಿಲ್ಲ : ಎಲ್ಲಾ ಶಾಸರು ಸಚಿವರಾಗುವ ಬಗ್ಗೆ ಒಲವು ಹೊಂದಿದ್ದಾರೆ. ಆದರೆ, ವಿಧಾನಸಭೆಯ ಸ್ಪೀಕರ್ ಸ್ಥಾನವನ್ನು ಅಲಂಕರಿಸಲು ಹಿರಿಯ ಮತ್ತು ಅನುಭವಿ ಶಾಸಕರು ಒಪ್ಪುತ್ತಿಲ್ಲ. ಸ್ಪೀಕರ್ ಸ್ಥಾನ ಅಲಂಕರಿಸುವಂತೆ ಎಚ್.ಕೆ.ಪಾಟೀಲ್, ಟಿ.ಬಿ.ಜಯಚಂದ್ರ, ಆರ್.ವಿ.ದೇಶಪಾಂಡೆ ಅವರೊಂದಿಗೆ ಪರಮೇಶ್ವರ್ ನಡೆಸಿದ ಮಾತುಕತೆ ವಿಫಲವಾಗಿದೆ.
ಆದ್ದರಿಂದ ರಮೇಶ್ ಕುಮಾರ್, ಶ್ರೀನಿವಾಸ್ ಪ್ರಸಾದ್ ಮತ್ತು ಕಾಗೋಡು ತಿಮ್ಮಪ್ಪ ಅವರ ಹೆಸರುಗಳನ್ನು ಪರಿಗಣಿಸಲಾಗಿದ್ದು, ಇಂದು ಈ ನಾಯಕರೊಂದಿಗೆ ಮಧುಸೂದನ್ ಮಿಸ್ತ್ರೀ ಮಾತುಕತೆ ನಡೆಸಲಿದ್ದಾರೆ ನಂತರ ಸ್ಪೀಕರ್ ಯಾರು? ಎಂಬ ಪ್ರಶ್ನೆ ಬಗೆಹರಿಯಲಿದೆ.
ಇಂದು ರಾಹುಲ್ ಭೇಟಿ : ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಇನ್ನೂ ಭೇಟಿಯಾಗಿಲ್ಲ. ಹೊರರಾಜ್ಯಗಳ ಪ್ರವಾಸದಲ್ಲಿರುವ ರಾಹುಲ್ ಇಂದು ಬೆಳಗ್ಗೆ ದೆಹಲಿಗೆ ಆಗಮಿಸಲಿದ್ದಾರೆ. ನಂತರ ಅವರನ್ನು ಭೇಟಿ ಮಾಡಲಿರುವ ಸಿದ್ದರಾಮಯ್ಯ ಇಂದು ಮಧ್ಯಾಹ್ನ 1 ಗಂಟೆಯ ವಿಮಾನದಲ್ಲಿ ಬೆಂಗಳೂರಿಗೆ ತೆರಳಲಿದ್ದಾರೆ.