ಚೆನ್ನೈ ನಲ್ಲಿ ಬಲೆಗೆ ಬಿದ್ದ 6 ಮಂದಿ ಬುಕ್ಕಿಗಳು
ಚೆನ್ನೈನ ಸೌಕಾರ್ ಪೇತ್, ತ್ರಿಪ್ಲಿಕೆನ್, ಪುರುಷ್ ವಾಲ್ಕಂ ಸೇರಿದಂತೆ ನಾಲ್ಕು ವಿವಿಧ ಪ್ರದೇಶಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಬೆಟ್ಟಿಂಗ್ ಜಾಲದ ಪ್ರಮುಖ ಆರೋಪಿ ಎಸ್.ವಿರುಧಾಚಲಂ ಅಲಿಯಾಸ್ ವೇಧಾಚಲಂ, ಹೆಸರೂ ಸೇರಿದೆ. ಉಳಿದ ಮೂವರು ಬುಕ್ಕಿಗಳು ಕಣ್ಮರೆಯಾಗಿದ್ದು ಅವರಲ್ಲೊಬ್ಬ ದಕ್ಷಿಣ ಆಪ್ರಿಕಾಕ್ಕೆ ಸೇರಿದವನು ಎಂದು ತಿಳಿದುಬಂದಿದೆ.
ಕಳೆದೊಂದು ದಶಕಗಳಿಂದ ಲೀಲಾಜಾಲವಾಗಿ ನಡೆಯುತ್ತಿದ್ದ ಈ ಬೆಟ್ಟಿಂಗ್ ಮಾಫಿಯಾ ಸಂಬಂಧ ರಾಜಸ್ತಾನ ರಾಯಲ್ಸ್ ತಂಡದ ಶ್ರೀಶಾಂತ್, ಅಂಕೀತ್ ಚವ್ಹಾಣ್ ಮತ್ತು ಅಜಿತ್ ಚಂಡಿಲ ಜತೆಗೆ 14 ಮಂದಿ ಬುಕ್ಕಿಗಳನ್ನು ದೆಹಲಿ ಪೊಲೀಸರು ಬಂಧಿಸಿದ ಬೆನ್ನಲ್ಲೇ ತಮಿಳುನಾಡು ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಯಾವೊಬ್ಬ ತಮಿಳುನಾಡು ಆಟಗಾರರ ಮೇಲೂ ಅನುಮಾನ ವ್ಯಕ್ತವಾಗಿಲ್ಲ ಎಂದು Crime Branch-Crime Investigation Department (CBCID) ಅಧಿಕಾರಿಗಳು ಹೇಳಿದ್ದಾರೆ.
ಹಣ ಪಾವತಿಯ ದಾಖಲೆಗಳು, ಐದು ಲ್ಯಾಪ್ ಟಾಪ್ ಮತ್ತು ಎರಡು ಡೆಸ್ಕ್ ಟಾಪ್ ಕಂಪ್ಯೂಟರುಗಳು, ಆರು ಲ್ಯಾಂಡ್ ಲೈನ್ ಫೋನು, ಆರು ವೈರ್ ಲೆಸ್ ಫಿಕ್ಸೆಡ್ ಲ್ಯಾಂಡ್ ಫೋನ್ ಗಳನ್ನು ಹಾಗೂ 14.3 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಬುಕ್ಕಿಗಳಿಗೂ, ದೆಹಲಿ, ಮುಂಬಯಿ ಮತ್ತು ಅಹಮದಾಬಾದಿನಲ್ಲಿರುವ ಬುಕ್ಕಿಗಳಿಗೂ ನಿಕಟ ಸಂಪರ್ಕವಿರುವ ಮಾಹಿತಿ ಈಗಾಗಲೇ ಲಭ್ಯವಾಗಿದೆ. ಆದರೆ ಇದೀಗ ಚೆನ್ನೈನಲ್ಲಿ ಬಂಧಿಯಾಗಿರುವ ಯಾವುದೇ ಆರೋಪಿಗಳಿಗೂ ಸ್ಪಾಟ್ ಫಿಕ್ಸಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್ ಜಾಲದಲ್ಲಿ ಸಿಲುಕಿರುವ ಕ್ರಿಕೆಟ್ ಆಟಗಾರರಿಗೂ ಯಾವುದೇ ರೀತಿಯ ಸಂಪರ್ಕವಿರುವುದು ಕಂಡುಬಂದಿಲ್ಲ.
ದೆಹಲಿಯಲ್ಲಿ ವಿಚಾರಣೆ: ಈ ನಡುವೆ ನಿನ್ನೆ ಬಂಧಿತರಾದ ಮೂವರು ಆಟಗಾರ ಪೈಕಿ ಅಂಕಿತ್ ಚೌವ್ಹಾಣ್ ತನ್ನ ತಪ್ಪು ಒಫ್ಪಿಕೊಂಡಿದ್ದಾನೆ. ಐಪಿಎಲ್ ನ ಆರನೆ ಆವೃತ್ತಿಯಲ್ಲಿ ನಡೆದಿರುವ 15 ಪಂದ್ಯಗಳ ಬಗ್ಗೆ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಈ ಬಾರಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಭೂಗತ ಪಾತಕಿಗಳ ನಂಟು ಹೊಂದಿರುವುದು ಕಂಡುಬಂದಿದೆ.
ನವದೆಹಲಿ, ಮುಂಬೈ, ಅಹಮದಾಬಾದ್, ಕೊಚ್ಚಿ, ಕರಾಚಿ, ದುಬೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬುಕ್ಕಿಗಳು ಅಲ್ಲಿಂದಲೇ ಕುಳಿತು ಸ್ಪಾಟ್ ಫಿಕ್ಸಿಂಗ್ ನಡೆಸಿದ್ದಾರೆ. ಮುಂಬೈ ಇಂಡಿಯನ್ಸ್, ಕಿಂಗ್ಸ್ ಪಂಜಾಬ್, ಪುಣೆ ವಾರಿಯರ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್ ಡೇವಿಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಸೇರಿದಂತೆ ಪ್ರಮುಖ ಪಂದ್ಯಗಳು ನಡೆಯುವಾಗ ರಾಜಸ್ಥಾನ್ ರಾಯಲ್ಸ್ ನ ಈ ಆಟಗಾರರು ಬುಕ್ಕಿಗಳ ಜತೆ ಸಂಪರ್ಕ ಹೊಂದಿರುವ ಶಂಕೆ ವ್ಯಕ್ತವಾಗಿದೆ. ತನಿಖೆ ಮುಂದುವರೆದಿದೆ.