ಸಂಪುಟ ರಚನೆಗೆ ಅಸ್ತು ಎಂದ ಸೋನಿಯಾ ಗಾಂಧಿ
ಬುಧವಾರ ರಾತ್ರಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುಮಾರು ಮೂವತ್ತು ನಿಮಿಷಗಳ ಕಾಲ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸಿದರು. ಸಚಿವ ಸ್ಥಾನದ ಆಕಾಂಕ್ಷಿಗಳ ಮೊದಲ ಪಟ್ಟಿಯನ್ನು ಸೋನಿಯಾಗೆ ಸಲ್ಲಿಸಿ ಅಂತಿಮ ಒಪ್ಪಿಗೆ ಪಡೆದರು.
ಕಳಂಕಿತರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಡಿ ಎಂದು ಸೋನಿಯಾಗಾಂಧಿ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕ ರಾಜ್ಯ ಉಸ್ತುವಾರಿ ಮಧುಸೂದನ್ ಮಿಸ್ರೀ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸಿದ್ದರಾಮಯ್ಯ ಅವರ ಜೊತೆ ಸೋನಿಯಾ ನಿವಾಸಕ್ಕೆ ತೆರಳಿದ್ದರು.
ಬದಲಾವಣೆಯಿಲ್ಲ : ಸಿಎಂ ಸಿದ್ದರಾಮಯ್ಯ ಸಲ್ಲಿಸಿದ್ದ ಮೊದಲ ಇಪ್ಪತ್ತು ಮಂದಿ ಸಚಿವರ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಸೋನಿಯಾ ಒಪ್ಪಿಗೆ ನೀಡಿದ್ದಾರೆ. ಸಂಪುಟ ಸೇರ್ಪಡೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸಿದ್ದರಾಮಯ್ಯ ಅವರಿಗೆ ಸಂಪೂರ್ಣ ಸ್ವತಂತ್ರ್ಯ ನೀಡಲಾಗಿದೆ ಎಂದು ತಿಳಿದು ಬಂದಿದೆ.
ರಾಜ್ಯದ ಆಡಳಿತ ನಿರ್ವಹಣೆ ಬಗ್ಗೆ ಸೋನಿಯಾ ಗಾಂಧಿ ಕೆಲವು ಸೂಚನೆಗಳನ್ನು ನೀಡಿದ್ದು, ಪಕ್ಷ ಸಂಘಟನೆ ಜೊತೆಗೆ ಭ್ರಷ್ಟಾಚಾರ ಮುಕ್ತ ಪಾರದರ್ಶಕ ಆಡಳಿತ ನಡೆಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ರಾಜ್ಯದ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಅಗತ್ಯ ಬೆಂಬಲ ನೀಡುವುದಾಗಿಯೂ ಸೋನಿಯಾ ಭರವಸೆ ನೀಡಿದ್ದಾರೆ.
ದೆಹಲಿಯಲ್ಲೇ ಸಿಎಂ ವಾಸ್ತವ್ಯ : ಬುಧವಾರ ಸೋನಿಯಾ ಗಾಂಧಿ, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೇರಿದಂತೆ ಹಿರಿಯ ನಾಯಕರನ್ನು ಭೇಟಿಮಾಡಿ ಸಿದ್ದರಾಮಯ್ಯ ದೆಹಲಿಯಲ್ಲೇ ವಾಸ್ತವ್ಯ ಹೂಡಿದ್ದಾರೆ. ಗುರುವಾರ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಆಹಾರ ಸಚಿವ ಥಾಮಸ್ ಅವರನ್ನು ಭೇಟಿ ಬೆಂಗಳೂರಿಗೆ ಮರಳಲಿದ್ದಾರೆ.
ಮತ್ತೇ ಕಂಠೀರವ ಕ್ರೀಡಾಂಗಣ : ನೂತನವಾಗಿ ಸಂಪುಟ ಸೇರುವ ಇಪ್ಪತ್ತು ಶಾಸಕರು ಶುಕ್ರವಾರ ಕಂಠೀರವ ಕ್ರೀಡಾಂರಣದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಇಪ್ಪತ್ತು ಸಚಿವರ ಬೆಂಬಲಿಗರು ಸೇರಿದಂತೆ ಸಾವಿರಾರು ಜನರು ಆಗಮಿಸುವುದರಿಂದ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸಮಾರಂಭ ನಡೆಸಲು ಉದ್ದೇಶಿಸಲಾಗಿದೆ.
ಕಳಂಕಿತರಿಗೆ ಕಿಕ್ : ಸಚಿವ ಸಂಪುಟಕ್ಕೆ 20 ಮಂದಿಯನ್ನು ಆಯ್ಕೆ ಮಾಡುವಾಗ ಕಳಂಕಿತ ಆರೋಪ ಹೊತ್ತವರನ್ನು ದೂರವಿರಿಸಲಾಗಿದೆ. ಇಬ್ಬರು ಹಿರಿಯ ನಾಯಕರ ವಿಚಾರದಲ್ಲಿ ಈ ತಂತ್ರ ಅನುಸರಿಸಲಾಗಿಲ್ಲ ಉಳಿದಂತೆ ಕಳಂಕಿತರಿಗೆ ಕೋಕ್ ನೀಡಲಾಗಿದೆ.
ಅನಮಾಧಾನ ನಿಮ್ಮ ಹೆಗಲಿಗೆ : ಸಂಪುಟ ವಿಸ್ತರಣೆಯಲ್ಲಿ ಸ್ಥಾನ ವಂಚಿತರಾದ ಶಾಸಕರು ಅಸಮಾಧಾನದ ಕಿಡಿ ಹೊತ್ತಿಸಿದರೆ, ಅದನ್ನು ಶಮನಗೊಳಿಸುವ ಜವಾಬ್ದಾರಿಯನ್ನು ಹೈಕಮಾಂಡ್ ನಾಯಕರು ಸಿಎಂ ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಿದ್ದಾರೆ. ಅಸಮಾಧಾನದ ದೂರು ಹೊತ್ತು ಯಾವ ಶಾಸಕರು ದೆಹಲಿಗೆ ಬರಬಾರದು ಎಂದು ಕಟ್ಟಪ್ಪಣೆ ಮಾಡಲಾಗಿದೆ.