ಸಿಎಂ ಸಿದ್ದು ಸಂಪುಟದಿಂದ ಪರಮೇಶ್ವರ್ ಹೊರಗೆ
ಕರ್ನಾಟಕದ ಕಾಂಗ್ರೆಸ್ ಪಕ್ಷದ ಚಟುವಟಿಕೆಗಳು ದೆಹಲಿಗೆ ಶಿಫ್ಟ್ ಆಗಿ ವಾರಗಳು ಕಳೆದಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸುಮಾರು 100ಕ್ಕೂ ಅಧಿಕ ಶಾಸಕರು ದೆಹಲಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಸಂಪುಟ ವಿಸ್ತರಣೆ ಕಸರತ್ತು ಮುಗಿದಿದ್ದು, ಶುಕ್ರವಾರ ಬೆಂಗಳೂರಿನಲ್ಲಿ 20 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಆದರೆ, ಸೋನಿಯಾ ಗಾಂಧಿ ಅನುಮತಿ ಪಡೆದು ಪಕ್ಷ ಸಿದ್ದಪಡಿಸಿರುವ 20 ಸಚಿವರ ಪಟ್ಟಿಯಲ್ಲಿ ಡಾ.ಜಿ.ಪರಮೇಶ್ವರ್ ಅವರ ಹೆಸರು ಸೇರಿಸಲಾಗಿಲ್ಲ. ಆದ್ದರಿಂದ ಪರಮೇಶ್ವರ್ ಸಿದ್ದರಾಮಯ್ಯ ಸಂಪುಟ ಸೇರುವುದಿಲ್ಲ ಎಂದು ತಿಳಿದುಬಂದಿದೆ.(ಸಂಪುಟ ರಚನೆಗೆ ಸೋನಿಯಾ ಅಸ್ತು)
ಕಾಂಗ್ರೆಸ್ ಪಕ್ಷದ ಮೂಲಗಳ ಪ್ರಕಾರ ಪರಮೇಶ್ವರ್ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ, ಹೈಕಮಾಂಡ್ ನಾಯಕರೂ ಯಾವುದೇ ಕಾರಣಕ್ಕೂ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಠಿಸುವುದಿಲ್ಲ. ಪ್ರಭಾವಿ ಖಾತೆಯನ್ನು ನೀಡುತ್ತೇವೆ ಎಂದು ಪರಮೇಶ್ವರ್ ಅವರಿಗೆ ಸ್ಪಷ್ಟಪಡಿಸಿದ್ದಾರೆ.
ಉಪ ಮುಖ್ಯಮಂತ್ರಿ ಸ್ಥಾನ ನೀಡಿ, ಯಾವುದೇ ಸಚಿವ ಸ್ಥಾನ ಬೇಡ ಎಂದು ಪರಮೇಶ್ವರ್ ಮನವಿ ಮಾಡಿದ್ದಾರೆ. ಆದರೆ, ಹೈಕಮಾಂಡ್ ನಾಯಕರು ಇದನ್ನು ತಿರಸ್ಕರಿಸಿದಾಗ, ಸಚಿವ ಸ್ಥಾನ ಬೇಡ ನಾನು ಕಾಂಗ್ರೆಸ್ ಅಧ್ಯಕ್ಷನಾಗಿಯೇ ಮುಂದುವರೆಯುತ್ತೇನೆ ಎಂದು ಪರಮೇಶ್ವರ್ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಪರಮೇಶ್ವರ್ ಸಮಾಧಾನ ಪಡಿಸಲು ಯತ್ನಿಸಿರುವ ಹೈ ಕಮಾಂಡ್ ನಾಯಕರು, ಬಳ್ಳಾರಿ ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿರುವ ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ಅವರಿಂದ ತೆರವಾಗುವ ಸ್ಥಾನಕ್ಕೆ ಪರಮೇಶ್ವರ್ ಅವರನ್ನು ನೇಮಕ ಮಾಡಲು ನಿರ್ಧರಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.(ಬಳ್ಳಾರಿ ಜಿಲ್ಲೆ ಸೋತು ಗೆದ್ದವರು)
ಕಾಂಗ್ರೆಸ್ ಸಂಪುಟ ರಚನೆ ಸರ್ಕಸ್ ನ ಮೊದಲನೇ ಹಂತ ಪೂರ್ಣಗೊಂಡಿದೆ. 20 ಶಾಸಕರು ನಾಳೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಂಠೀರವ ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮ ಕೊನೆಯ ಹಂತದಲ್ಲಿ ರಾಜಭವನಕ್ಕೆ ವರ್ಗಾವಣೆಗೊಂಡಿದೆ.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತಂದು ತಾವು ಸೋಲುಂಡ ಡಾ.ಪರಮೇಶ್ವರ್ ಗೆ ಪಕ್ಷ ಅಧಿಕಾರ ಪಡೆದರೂ ಸಚಿವರಾಗುವ ಅವಕಾಶ ತಪ್ಪಿ ಹೋಗಿದೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರೆ, ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಆಗಿದ್ದ ಅವರಿಗೆ ರಾಜ್ಯ ಸಭಾಸದಸ್ಯತ್ವವಾದರೂ ಸಿಗಲಿ.