ಸಂಪುಟ ವಿಸ್ತರಣೆ : ದೆಹಲಿಯಲ್ಲಿ ಕಸರತ್ತು ಪ್ರಾರಂಭ
ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ನಂತರ ಮೊದಲ ಬಾರಿಗೆ ಸಿದ್ದರಾಮಯ್ಯ ನವದೆಹಲಿಗೆ ಆಗಮಿಸಿದ್ದು, ಇಂದು ಸಂಜೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸೋನಿಯಾ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಅವರನ್ನು ಭೇಟಿ ಮಾಡಲಿದ್ದಾರೆ.
ನಂತರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರೀ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಜೊತೆ ಸಭೆ ನಡೆಸಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ. ಸಂಪುಟ ವಿಸ್ತರಣೆ ಕುರಿತ ಅಂತಿಮ ನಿರ್ಧಾರವನ್ನು ಸಿಎಂ ಸಿದ್ದರಾಮಯ್ಯ ಅವರ ಹೆಗಲಿಗೆ ವಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಂಬರುವ ಲೋಕಸಣಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಛ ಮಂತ್ರಿಮಂಡಲ ರಚಿಸುವಂತೆ ವರಿಷ್ಠರು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದು, ಕಳಂಕಿತರನ್ನು ದೂರವಿಡುವಂತೆ ನಿರ್ದೇಶನ ನೀಡಿದ್ದಾರೆ. ಆದ್ದರಿಂದ ಸಚಿವರ ಪಟ್ಟಿ ಅಂತಿಮಗೊಳಿಸಲು ಸಮಯಾವಕಾಶ ತೆಗೆದುಕೊಳ್ಳಲಾಗುತ್ತಿದೆ.
ನಾಳೆ ಅಂತಿಮ ಪಟ್ಟಿ : ಗುರುವಾರ ಸಂಜೆಯೊಳಗೆ ನೂತನ ಸಂಪುಟ ಸೇರುವ ಸಚಿವರ ಪಟ್ಟಿ ಸಿದ್ಧವಾಗಲಿದ್ದು, ಇನ್ನು 2-3 ದಿನದಲ್ಲಿ ಸಚಿವ ಸಂಪುಟ ರಚನೆಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ದೆಹಲಿಗೆ ಆಗಮಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳಂಕ ರಹಿತರಿಗೆ ಸಚಿವಸ್ಥಾನ ನೀಡಲಾಗುವುದು ಎಂದು ತಿಳಿಸಿದರು.
ಡಿಸಿಎಂ ಹುದ್ದೆ ಸೃಷ್ಠಿ : ಕರ್ನಾಟಕದಲ್ಲಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಠಿಸಬೇಕು ಎಂಬ ಒತ್ತಡ ಹೆಚ್ಚಾಗುತ್ತಿದೆ. ಸ್ವತಃ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಡಿಸಿಎಂ ಹುದ್ದೆ ಸೃಷ್ಠಿಸಬೇಕು ಎಂದು ಹೇಳಿರುವುದು ಹಲವಾರು ಅಚ್ಚರಿಗಳಿಗೆ ಕಾರಣವಾಗಿದೆ. ಆದರೆ, ಹೈಕಮಾಂಡ್ ನಾಯಕರು ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಠಿಸುವ ಬಗ್ಗೆ ಯಾವುದೇ ನಿರ್ಣಯ ಕೈಗೊಂಡಿಲ್ಲ.
ಕರ್ನಾಟಕ ಭವನ ಫುಲ್ : ಕಾಂಗ್ರೆಸ್ ಪಕ್ಷದ 80ಕ್ಕೂ ಹೆಚ್ಚು ಶಾಸಕರು ನವದೆಹಲಿಯ ಕರ್ನಾಟಕ ಭವನದಲ್ಲಿ ಬೀಡು ಬಿಟ್ಟಿದ್ದು, ಶಾಸಕರಿಂದಾಗಿ ಕರ್ನಾಟಕ ಭವನ ಫುಲ್ ಆಗಿದೆ. ಹೊಸದಾಗಿ ಆಗಮಿಸುತ್ತಿರುವ ಯಾರಿಗೂ ಕರ್ನಾಟಕ ಭವನದಲ್ಲಿ ಕೋಣೆಗಳು ಲಭ್ಯವಾಗುತ್ತಿಲ್ಲ. ಸಚಿವರ ಪಟ್ಟಿ ಬಿಡುಗಡೆ ಆಗುವವರೆಗೆ ಶಾಸಕರು ದೆಹಲಿಯಲ್ಲಿ ವಾಸ್ತವ್ಯ ಹೂಡುವ ಸಾಧ್ಯತೆ ಇದೆ.