ಶಿರಡಿ, ತಿರುಪತಿ- ಆದಾಯದಲ್ಲಿ ಯಾವುದು ಮುಂದು?
ಮುಂಬೈ, ಮೇ 14: ಭಕ್ತರ ಮನದಲ್ಲಿ ಭದ್ರವಾಗಿ ಪ್ರತಿಷ್ಠಾಪನೆಗೊಂಡಿರುವ ಶಿರಡಿ ಸಾಯಿಬಾಬಾ ಮತ್ತು ತಿರುಪತಿ ತಿಮ್ಮಪ್ಪ ಪೈಕಿ ಯಾರು ಹೆಚ್ಚು ಆದಾಯ ತರುವವರು? ಎಂಬ ಪ್ರಶ್ನೆಗೆ ಮಹಾರಾಷ್ಟ್ರ ಕಾನೂನು ಮತ್ತು ನ್ಯಾಯಾಂಗ ಇಲಾಖೆಯ ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ ಉತ್ತರ ಹೀಗಿದೆ.
ಹಾಗಾಗಿ ತಿರುಪತಿ ತಿಮ್ಮಪ್ಪನೇ ದೇಶದ ಆಗರ್ಭ ಶ್ರೀಮಂತ ದೇವ. ನಂತರದ ಸ್ಥಾನದಲ್ಲಿ ದರುಶನ ನೀಡುವುದು ಶಿರಡಿಯ ಸಾಯಿಬಾಬಾ. ಇನ್ನು, ವೈಷ್ಣೋದೇವಿ ಮಂದಿರದ ವಾರ್ಷಿಕ ಆದಾಯ 2011ನೇ ಸಾಲಿನಲ್ಲಿ 500 ಕೋಟಿ ರೂ. ಆಗಿದೆ.
ಅಂದಹಾಗೆ, ಶಿರಡಿಯ ಸಾಯಿಬಾಬಾ ದೇಗುಲದ ಕಾಣಿಕೆ ಹುಂಡಿಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 1,009 ಕೋಟಿ ರೂ. ನಗದು ರೂಪದ ಕಾಣಿಕೆ ಸಂಗ್ರಹವಾಗಿದೆ. ಮಹಾರಾಷ್ಟ್ರದ ಇನ್ನೊಂದು ಶ್ರೀಮಂತ ದೇಗುಲವಾಗಿರುವ ಸಿದ್ಧಿವಿನಾಯಕ ಮಂದಿರದಲ್ಲಿ ಇದೇ ಅವಧಿಯಲ್ಲಿ ಸಂಗ್ರಹವಾಗಿರುವುದು 206 ಕೋಟಿ ರೂ. ಈ ಎರಡು ದೇಗುಲಗಳ ಟ್ರಸ್ಟ್ ಗಳು ಇದೇ ಅವಧಿಯಲ್ಲಿ ಕ್ರಮವಾಗಿ ಶೇ. 50 ಮತ್ತು ಶೇ. 13 ಗಳಿಕೆಯನ್ನು ಸಮಾಜಸೇವೆಗಾಗಿ ಬಳಸಿಕೊಂಡಿವೆ.
ಶಿರಡಿ ಸಾಯಿಬಾಬಾ ದೇಗುಲದ ಆಡಳಿತ ನಿರ್ವಹಿತ್ತಿರುವ ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ 540.49 ಕೋಟಿ ರೂ. ಮತ್ತು ಸಿದ್ಧಿವಿನಾಯಕ ಟ್ರಸ್ಟ್ 27.02 ಕೋಟಿ ರೂ. ಸಮಾಜಸೇವೆಗಾಗಿ ಖರ್ಚು ಮಾಡಿವೆ. ಶಿರಡಿ ದೇಗುಲದ ಸರಾಸರಿ ವಾರ್ಷಿಕ ಆದಾಯ 252 ಕೋಟಿ ರೂ. ಮುಂಬಯಿಯ ಪ್ರಭಾದೇವಿಯಲ್ಲಿರುವ ಸಿದ್ಧಿವಿನಾಯಕ ಮಂದಿರದ ಸರಾಸರಿ ಆದಾಯ 51.53 ಕೋಟಿ ರೂ. ಹೆಚ್ಚಿನೆಲ್ಲ ದೇವಸ್ಥಾನಗಳು ಆದಾಯದಲ್ಲಿ ಒಂದಷ್ಟು ಮೊತ್ತವನ್ನು ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಇಡುತ್ತವೆ.
ದಾರಿ ಯಾವುದಯ್ಯಾ ಶಿರಡಿಗೆ?: ಆದರೆ ಶಿರಡಿ ಸಾಯಿಬಾಬಾ ದೇಗುಲದ ಆಡಳಿತ ಮಂಡಳಿಯು ವಿಮಾನ ನಿಲ್ದಾಣ ನಿರ್ಮಾಣದಂತಹ ದುಬಾರಿ ಯೋಜನೆಗಳಿಗೆ ಭಕ್ತರ ಹಣ ಖರ್ಚು ಮಾಡದೆ ಜನಪರ ಕೆಲಸಗಳಲ್ಲಿ ವಿನಿಯೋಗಿಸಬೇಕು ಎಂಬುದು ಭಕ್ತರ ಒಕ್ಕೊರಲ ಕೂಗಾಗಿದೆ.
ದೇವಸ್ಥಾನಕ್ಕೆ ಹೋಗುವ ದಾರಿಯು ದುರ್ಗಮವಾಗಿದ್ದು, ಘೋಟಿ-ಶಿರಡಿ ಹೆದ್ದಾರಿಯನ್ನು ಷಟ್ಪತ ರಸ್ತೆಯನ್ನಾಗಿ ಮಾಡಿದರೆ ಅಪಗಾತಗಳು ತಪ್ಪಿ, ಜನ ಸುಗಮವಾಗಿ ದೇವಸ್ಥಾನ ತಲುಪಿಕೊಳ್ಳುವುದಕ್ಕೆ ಅನುವಾಗುತ್ತದೆ ಎಂಬುದು ಭಕ್ತರ ಅನಿಸಿಕೆ.