ಫೇಸ್ಬುಕ್ನಲ್ಲಿ ನಿಂದನೆ, ವಕೀಲೆ ಬಿಡುಗಡೆ ಇಲ್ಲ
ತನ್ನ ಫೇಸ್ಬುಕ್ನಲ್ಲಿ ಹಿರಿಯ ವಕೀಲೆ ಜಯಾ ವಿಂಧ್ಯಾಲ್ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಆಗಿದ್ದ ಕೆ.ರೋಸಯ್ಯ ಮತ್ತು ಕಾಂಗ್ರೆಸ್ ಶಾಸಕ ಅಮಂಚಿ ಕೃಷ್ಣ ಮೋಹನ್ ಅವರನ್ನು ನಿಂಧಿಸುವ ಹೇಳಿಕೆಗಳನ್ನು ಪ್ರಕಟಿಸಿದ್ದರು. ಈ ಕುರಿತು ದೂರು ಸಹ ದಾಖಲಾಗಿತ್ತು.
ದೂರಿನ ಅನ್ವಯ ಜಯಾ ವಿಂಧ್ಯಾಲ್ರನ್ನು ಪೊಲೀಸರು ಭಾನುವಾರ ಬಂಧಿಸಿದ್ದರು. ಪ್ರಕಾಶಂ ಜಿಲ್ಲಾ ಮ್ಯಾಜಿಸ್ಟ್ರೇಟ್ ಮುಂದೆ ವಿಂಧ್ಯಾಲ್ ಅವರನ್ನು ಹಾಜರುಪಡಿಸಲಾಯಿತು. ವಿಂಧ್ಯಾಲ್ ಅವರನ್ನು 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಂತೆ ಆದೇಶಿಸಿ ಮ್ಯಾಜಿಸ್ಟ್ರೇಟ್ ಆದೇಶ ನೀಡಿದರು.
ಆದರೆ, ವಕೀಲೆಯಾಗಿರುವ ವಿಂಧ್ಯಾಲ್ ಕೈರಾಲಾ ನ್ಯಾಯಾಲಯಕ್ಕೆ ಸೋಮವಾರ ಜಾಮೀನು ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜಾಮೀನು ನೀಡಿತು. ಆದರೆ, ನ್ಯಾಯಾಲಯದ ಷರತ್ತಿನನ್ವಯ ತಲಾ 5000 ರೂ.ಗಳ ಇಬ್ಬರ ಶ್ಯೂರಿಟಿ ಒದಗಿಸುವಲ್ಲಿ ಜಯಾ ವಿಫಲರಾಗಿದ್ದಾರೆ. ಆದ್ದರಿಂದ, ನ್ಯಾಯಾಲಯ ಜಾಮೀನು ನೀಡಿದರೂ ಅವರು ಇನ್ನೂ ಜೈಲಿನಲ್ಲೇ ಇದ್ದಾರೆ.
ವಿವಾದವೇನು : ಆಂಧ್ರ ಪ್ರದೇಶದ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ರೋಸಯ್ಯ ಭೂ ಅಕ್ರಮ ನಡೆಸಿದ್ದಾರೆ. ಇದಕ್ಕೆ ಕೈರಾಲಾ ಶಾಸಕ ಅಮಂಚಿ ಕೃಷ್ಣ ಮೋಹನ್ ಅವರು ರೋಸಯ್ಯ ಅವರಿಗೆ ಸಹಾಯ ಮಾಡಿದ್ದಾರೆ. ಇವರಿಬ್ಬರು 'ಮತಿವಿಕಲ'ರೆಂದು ಜಯಾ ಫೇಸ್ಬುಕ್ನಲ್ಲಿ ಬರೆದಿದ್ದರು.
ಈ ಬಗ್ಗೆ ಏ.18ರಂದು ದೂರು ದಾಖಲಾಗಿತ್ತು. ನಿಂದನಾ ಸಂದೇಶ ದೃಢಪಟ್ಟಿರುವ ಕಾರಣ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66ಎ ಅನ್ವಯ ಅವರನ್ನು ವಕೀಲೆ ಜಯಾ ಅವರನ್ನು ಬಂಧಿಸಲಾಗಿತ್ತು. ಅಲ್ಲದೇ ರೋಸಯ್ಯ ಮತ್ತು ಕೃಷ್ಣ ಮೋಹನ್ ಅವರನ್ನು ನಿಂದಿಸುವ ಕರಪತ್ರಗಳನ್ನು ಜಯಾ ಹಂಚಿದ್ದರು ಎನ್ನುವ ಆರೋಪವೂ ಕೇಳಿಬಂದಿದೆ.
ಫೇಸ್ಬುಕ್ನಲ್ಲಿ ಹಲವಾರು ವಿಷಯಗಳ ಬಗ್ಗೆ ಮುಕ್ತವಾದ ಚರ್ಚೆಗಳು ಸಾಗುತ್ತಿರುತ್ತವೆ. ಯಾರನ್ನಾದರೂ ನಿಂದಿಸುವ ಸಂದೇಶವನ್ನು ಪ್ರಕಟಿಸುವ ಮುನ್ನ ಸ್ಪಲ್ಪ ಯೋಚಿಸಿ.