ವರುಣಾರಾಯನ ಆಶೀರ್ವಾದಕ್ಕೆ ಮಳೆರಾಯ ಸಜ್ಜು
ಬೆಂಗಳೂರು, ಮೇ 13 : ಕರ್ನಾಟಕದ ನೂತನ ಅಧಿಪತಿಯಾಗಿ ಇಂದು ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಮಾಣ ವಚನ ಸ್ವೀಕರಿಸುವ ನಗರದ ಕಂಠೀರವ ಕ್ರೀಡಾಂಗಣದ ಸುತ್ತ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.
ವರುಣಾದ ವರಪುತ್ರ ಸಿದ್ದು ಮುಖ್ಯಮಂತ್ರಿಯಾಗುವ ಸಂದರ್ಭದಲ್ಲಿ ಮೇಲಿಂದ ತಥಾಸ್ತು ಅನ್ನಲು ವರುಣರಾಯ ಬೆಳಗ್ಗೆಯಿಂದ ಬೆಂಗಳೂರಿನ ಮೇಲೆ ಹಾರಾಡುತ್ತಿದ್ದಾನೆ. ನಗರದಲ್ಲಿ ದಟ್ಟ ಮೋಡಗಳು ಆವರಿಸಿದ್ದು, ಯಾವುದೇ ಕ್ಷಣದಲ್ಲಿ ಮಳೆಯ ಹನಿ ಜಾರಿ ಬೀಳುವ ಸನ್ನಿವೇಶ ಎದುರಾಗಿದೆ. ನಾಡಿನ ವಾತಾವರಣ, ನಾಡಜನರ ಮೈಮನಗಳೂ ಆಹ್ಲಾದತೆಯಿಂದ ತುಂಬಿವೆ.
ಕರ್ನಾಟಕ ತೀವ್ರ ಬರಗಾಲದಿಂದ ತತ್ತರಿಸಿ ಹೋಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಗಾದಿ ಏರುವ ಹೊತ್ತಿನಲ್ಲೂ ಬರಗಾಗಲವಿದೆ. ಅಕ್ಷತ ತೃತೀಯದ ದಿನವಾದ ಇಂದಿನಿಂದ ಬರಗಾಲ ಕಳಚಿ, ರಾಜ್ಯ ಸುಭಿಕ್ಷವಾಗಲಿ. ಮಳೆ-ಬೆಳೆ ಚೆನ್ನಾಗಿ ಆಗಲಿ ಎಂದು ನಾಡಿನ ಜನತೆ ಆಶಿಸುತ್ತಿದ್ದಾರೆ.
ಜ್ಯೋತಿಷಿಗಳ ಮೂಹೂರ್ತವೇ : ಸಿದ್ದರಾಮಯ್ಯ ಪ್ರಮಾಣ ವಚನ ಸಮಾರಂಭಕ್ಕೆ ಜ್ಯೋತಿಷಿಗಳ ಸಲಹೆ ಪಡೆದರೋ ಅಥವಾ ಅವರ ಬೆಂಬಲಿಗರು 11.40ರ ಮುಹೂರ್ತವಿಟ್ಟರೋ ತಿಳಿಯದು. ಆದರೆ ಜ್ಯೋತಿಷಿಗಳ ಪ್ರಕಾರ ಸಿದ್ದರಾಮಯ್ಯ ಅವರ ಶಪಥ ಮೂಹೂರ್ತ ಉತ್ತಮವಾದುದಾಗಿದೆ.
11.40ಕ್ಕೆ ಪ್ರಮಾಣವಚನ ಕಾರ್ಯಕ್ರಮ ನಿಗದಿಯಾಗಿದೆ. 11.45 ರಿಂದ 12.15 ರ ಅವಧಿಯಲ್ಲಿ ಕರ್ಕ ಲಗ್ನದ ಅಭಿಜಿನ್ ಮುಹೂರ್ತವಿದೆ. ಜೊತಗೆ ಇಂದು ಅಕ್ಷಯ ತದಿಗೆ. ಅಕ್ಷಯ ತದಿಗೆಯಂದು ಸ್ಥಿರ ಫಲ ಇರುತ್ತದೆ. ಇಂಥ ದಿನ, ಮುಹೂರ್ತದಲ್ಲಿ ಮಾಡಿದ ಸಂಕಲ್ಪದಂತೆ ನಡೆದುಕೊಂಡರೆ ಫಲ ಪ್ರಾಪ್ತಿಯಾಗುತ್ತದೆ ಎಂಬುದು ಜನರ ನಂಬಿಕೆ.
ಸಿದ್ದರಾಮಯ್ಯ ಅವರ ಜಾತಕ ಫಲವನ್ನು ನೋಡಿದಾಗ, ತುಲಾ ರಾಶಿಗೂ ಕರ್ಕ ಲಗ್ನಕ್ಕೂ ಜಾತಕಾನುಸಾರ ಅಷ್ಟಮ ಭಾವ ಮತ್ತು ಬಾಧಾ ಭಾವವು ಶುಕ್ರನಿಂದ ಬರುವುದರಿಂದ, ಅಭಿಜನ್ ಮುಹೂರ್ತದಲ್ಲಿ ಪ್ರಮಾಣವಚನ ಸ್ವೀಕರಿಸಿದರೆ ಉತ್ತಮ ಎಂದು ನಗರದ ಪ್ರಸಿದ್ದ ಜ್ಯೋತಿಷಿಗಳು ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪಾಸ್ ಇದ್ದೋನೆ ಬಾಸು: ಭದ್ರತಾ ದೃಷ್ಟಿಯಿಂದ ಸಾರ್ವಜನಿಕರು ಕೈ ಚೀಲಗಳು, ಕ್ಯಾಮೆರಾ, ತಿಂಡಿ ತಿನಿಸು, ನೀರು, ತಂಪು ಪಾನೀಯ ಬಾಟಲಿಗಳು, ಮನರಂಜನಾ ಪರಿಕರಗಳನ್ನು ಕ್ರೀಡಾಂಗಣದೊಳಗೆ ಒಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಎಲ್ಲಾ ಸಾರ್ವಜನಿಕರನ್ನು ಸಹ ಭದ್ರತಾ ತಪಾಸಣೆಗೊಳಪಟ್ಟ ನಂತರವೇ ಕ್ರೀಡಾಂಗಣ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಬೆಳಗ್ಗೆ 11.30ಕ್ಕೆ ಪ್ರಮಾಣ ವಚನ ಸ್ವೀಕಾರ ಇರುವುದರಿಂದ 10.30 ರ ನಂತರ ಬರುವ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಗುವುದಿಲ್ಲ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಡಾ. ಸಲೀಂ ತಿಳಿಸಿದ್ದಾರೆ
ಗಣ್ಯರು, ಕಾರ್ಯಕರ್ತರು, ಅಧಿಕಾರಿಗಳು ಪ್ರಮಾಣ ವಚನ ಸ್ಪೀಕಾರ ಸಮಾರಂಭಕ್ಕೆ ಆಗಮಿಸುವುದರಿಂದ ಕಂಠೀರವ ಕ್ರೀಡಾಂಗಣದ ಸುತ್ತಾ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಆ ಮಾರ್ಗದಲ್ಲಿ ಸಂಚರಿಸುವುದನ್ನು ಇಂದಿನ ಮಟ್ಟಿಗೆ ಕಡಿಮೆ ಮಾಡಿದರೆ ಉತ್ತಮ.