ಸಿದ್ದು ಪ್ರಮಾಣವಚನಕ್ಕೆ ಸಾಹಿತಿಗಳ ದಂಡು
ಕುಮಾರಕೃಪಾದ ತಮ್ಮ ನಿವಾಸದಿಂದ ಜಯನಗರ ಟಿ ಬ್ಲಾಕ್ ನಲ್ಲಿರುವ ಹೆಚ್.ಎಸ್.ದೊರೆಸ್ವಾಮಿ ಅವರ ನಿವಾಸಕ್ಕೆ ಆಗಮಿಸಿದ ಸಿದ್ದರಾಮಯ್ಯ, ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಬರುವಂತೆ ಅಧೀಕೃತ ಆಹ್ವಾನ ನೀಡಿದರು.
ಸುಮಾರು ಇಪ್ಪತ್ತು ನಿಮಿಷಗಳ ಕಾಲ ದೊರೆಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ ಸಿದ್ದರಾಮಯ್ಯ, ಅವರ ಸಲಹೆ ಮತ್ತು ಮಾರ್ಗದಶರ್ನಗಳನ್ನು ಪಡೆದರು. ಶನಿವಾರದಿಂದಲೂ ಸಿದ್ದರಾಮಯ್ಯ ವಿವಿಧ ಸಾಹಿತಿಗಳ ಮನೆಗೆ ಭೇಟಿ ನೀಡುತ್ತಿದ್ದಾರೆ. ಭಾನುವಾರವೂ ಅವರು ಸಾಹಿತಿ ದೇವನೂರು ಮಹಾದೇವ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.
ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೊರೆಸ್ವಾಮಿ, ಭ್ರಷ್ಟಾಚಾರ ರಹಿತವಾದ ಉತ್ತಮ ಆಡಳಿತ ನಡೆಸಿ, ಸರ್ವ ಜನರ ಹಿತ ಕಾಪಾಡುವಂತೆ ಸಲಹೆ ನೀಡಿದ್ದೇನೆ ಎಂದು ಹೇಳಿದರು.
ಮುಖ್ಯಮಂತ್ರಿಗಳಾಗಿ ನಿಯೋಜಿತರಾದವರು ಮಠ ಮಾನ್ಯಗಳಿಗೆ ಭೇಟಿ ನೀಡಿವುದು ವಾಡಿಕೆ, ಆದರೆ, ಸಿದ್ದರಾಮಯ್ಯ ಅಂತಹ ಸಂಪ್ರದಾಯದಿಂದ ದೂರ ಉಳಿದಿದ್ದಾರೆ. ಸಾಹಿತಿಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು, ಹಲವಾರು ಸಾಹಿತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಸಾಹಿತಿಗಳ ದಂಡು : ಸಿದ್ದರಾಮಯ್ಯ ಪ್ರಮಾಣ ವಚನ ಸಮಾರಂಭಕ್ಕೆ ಅನೇಕ ಸಾಹಿತಿಗಳು ಆಗಮಿಸಲಿದ್ದಾರೆ. ಡಾ. ಸಿಪಿಕೆ, ಡಾ. ಅರವಿಂದ ಮಾಲಗತ್ತಿ, ಡಾ. ಮಳಲಿ ವಸಂತಕುಮಾರ್, ಪ್ರೊ. ಕೆ.ಎಸ್ ಭಗವಾನ್, ಪ್ರೊ. ಹಿ.ಶಿ. ರಾಮಚಂದ್ರೇಗೌಡ, ಡಾ.ಜೆ. ಲಕ್ಕಪ್ಪಗೌಡ, ಪ್ರೊ. ಕಾಳೇಗೌಡ ನಾಗವಾರ, ಪ್ರೊ. ಸಯ್ಯದ್ ಅಖಿಲ್ ಅಹಮದ್, ಪ್ರೊ. ಕಿಕ್ಕೇರಿ ನಾರಾಯಣ್, ಪ್ರೊ. ಮುಜಾಫರ್ ಅಸಾದಿ ಮುಂತಾದವರು ಆಗಮಿಸುವ ನಿರೀಕ್ಷೆ ಇದೆ.