ಲಿವಿಂಗ್ ಟುಗೆದರ್: ಮಹಿಳೆ ಹತ್ಯೆಮಾಡಿ ಸತ್ತ ಇನ್ಸ್ಪೆಕ್ಟರ್
ಇನ್ಸ್ಪೆಕ್ಟರ್ ಬದ್ರಿ ದತ್ (45) ಹಾಗೂ ಗೀತಾ ಶರ್ಮಾ (45) ಮೃತಪಟ್ಟವರು. ಈ ಜೋಡಿ ದೇಹಗಳು ಗುರ್ ಗಾಂವ್ ನ ಸುಶಾಂತ್ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಡಿ ನಗರದಲ್ಲಿ ಅಪಾರ್ಟ್ ಮೆಂಟಿನಲ್ಲಿ ಶನಿವಾರ ಪತ್ತೆಯಾಗಿವೆ. ಇನ್ಸ್ಪೆಕ್ಟರ್ ಬದ್ರಿ ದತ್ ಭಯೋತ್ಪಾದಕರ ನಿಗ್ರಹ ದಳದಲ್ಲಿ ಭಾರಿ ಯಶಸ್ಸು ಕಂಡಿದ್ದರು. ಬದ್ರಿ ಎರಡು ಬಾರಿ ಸಾಹಸ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದರು.
ಬದ್ರಿ ದತ್, ಗೀತಾಳನ್ನು ಹತ್ಯೆಗೈದು ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗುರ್ ಗಾಂವ್ ಹೆಚ್ಚುವರಿ ಪೊಲೀಸ್ ಆಯುಕ್ತ ಮಹೇಶ್ವರ್ ದಯಾಳ್ ತಿಳಿಸಿದ್ದಾರೆ. ಆದರೆ ಈ ಹತ್ಯೆಗಳಿಗೆ ನಿಖರ ಕಾರಣ ಏನೆಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಪತ್ನಿ ಮತ್ತು ಇಬ್ಬರು ಮಕ್ಕಳು ಫರಿದಾಬಾದಿನಲ್ಲಿ ವಾಸಿಸುತ್ತಿದ್ದಾರೆ. ಕೌಟುಂಬಿಕ ಕಲಹ ಘಟನೆಗೆ ಕಾರಣವಾಗಿರಬಹುದು ಎನ್ನಲಾಗಿದೆ. ಬದ್ರಿ, ತಮ್ಮ ಪತ್ನಿ ಮಕ್ಕಳನ್ನು ತೊರೆದು ಗೀತಾ ಶರ್ಮಾ ಜತೆ ವಾಸಿಸುತ್ತಿದ್ದರು.
1991ರಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ದಿಲ್ಲಿ ಪೊಲೀಸ್ ಸೇರಿದ್ದ ಬದ್ರಿ, 1999 ರಿಂದ ದೆಹಲಿ ಭಯೋತ್ಪಾದಕ ನಿಗ್ರಹ ದಳದಲ್ಲಿ ವಿಶೇಷಾಧಿಕಾರಿಯಾಗಿ ಸೇವೆಗೆ ನಿಯೋಜನೆಗೊಂಡಿದ್ದರು. ದಳದಲ್ಲಿ ಅತ್ಯಂತ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರು.