ಕೋಲಾರ : ಲಡ್ಡು ಶೆಟ್ಟರು ಕಾಂಗ್ರೆಸ್ ಕೈ ಹಿಡಿದರು
ವಿಧಾನಸಭೆ ಚುನಾವಣೆಗೆ ಮಾಲೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ದೊರೆಯಲಿಲ್ಲ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಸೋಲು ಅನುಭವಿಸಿದ್ದ ಮಾಜಿ ಮುಜರಾಯಿ ಸಚಿವ ಕೃಷ್ಣಯ್ಯ ಶೆಟ್ಟಿ ಕಾಂಗ್ರೆಸ್ ಸೇರಿರುವುದು ತೀವ್ರ ಕುತೂಹಲ ಕೆರಳಿಸಿದೆ.
ತಾವು ಚುನಾವಣೆ ಗೆಲ್ಲಬೇಕೆಂದು ತಮ್ಮ ವಿರುದ್ಧ ಬಿಜೆಪಿ ಅಭ್ಯರ್ಥಿ ಸ್ಪರ್ಧಿಸದಂತೆ ಮಾಡಿ ಬಿಜೆಪಿ ಪಕ್ಷಕ್ಕೆ ಕೃಷ್ಣಯ್ಯ ಶೆಟ್ಟಿ ಮುಜುಗರ ಉಂಟುಮಾಡಿದ್ದರು. ಆದರೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕೆ.ಎಸ್.ಮಂಜುನಾಥ್ ವಿರುದ್ದ 18 ಸಾವಿರಕ್ಕೂ ಅಧಿಕ ಮತಗಳ ಅಂತದಿಂದ ಸೋಲುಂಡು ಶೆಟ್ಟರು ಮುಖಭಂಗ ಅನುಭವಿಸಿದ್ದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದ ನಂತರ ಕೇಂದ್ರ ಸಚಿವ ಮುನಿಯಪ್ಪ ಭೇಟಿ ಮಾಡಿದ ಕೃಷ್ಣಯ್ಯ ಶೆಟ್ಟಿ ಅವರೊಂದಿಗೆ ಮಾತುಕತೆ ನಡೆಸಿ ಕಾಂಗ್ರೆಸ್ ಕೈ ಹಿಡಿದಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಕಾಂಗ್ರೆಸ್ ಸೇರುತ್ತಿರುವುದಾಗಿ ಶೆಟ್ಟಿ ಹೇಳಿದ್ದಾರೆ.
ವರ್ತೂರು ಕೈ ಹಿಡಿತಾರೆ : ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷ ಸೇರುತ್ತೇನೆ ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್ ಹೇಳಿದ್ದರು. ಚುನಾವಣೆಯ ಮುಗಿದು ಅವರು ಜಯಗಳಿಸಿದ್ದಾರೆ. ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸಿರುವುದರಿಂದ ಅವರಿಗೆ ಪಕ್ಷೇತರರ ನೆರವು ಬೇಕಾಗಿಲ್ಲ.
ಆದ್ದರಿಂದ ವರ್ತೂರು ಪ್ರಕಾಶ್ ಅವರಿಗೆ ಸಚಿವ ಸ್ಥಾನವಂತೂ ಸಿಗುವುದಿಲ್ಲ. ಆದರೆ, ಒಂದು ಕಾಲದಲ್ಲಿ ಸಿದ್ದರಾಮಯ್ಯ ಬೆಂಬಲಿಗರಾಗಿದ್ದ ವರ್ತೂರು ಸಿದ್ದು ಮುಖ್ಯಮಂತ್ರಿ ಆಗಬೇಕು ಎಂದು ಹೇಳಿಕೆ ನೀಡಿದ್ದರು. ಅವರ ಹೇಳಿಕೆ ನಿಜವಾಗಿದ್ದು, ಸಿದ್ದರಾಮಯ್ಯ ಸಿಎಂ ಆಗಿದ್ದಾರೆ.
ಆದ್ದರಿಂದ ವರ್ತೂರು ಕಾಂಗ್ರೆಸ್ ಸೇರುವ ಸಾಧ್ಯತೆ ಹೆಚ್ಚಾಗಿದೆ. ಈಗಾಗಲೇ ಚುನಾವಣೆ ಪ್ರಚಾರ ಸಭೆಯಲ್ಲಿಯೇ ಜಿಲ್ಲೆಯ ಅಭಿವೃದ್ಧಿ ಮಾಡುವುದು ನನ್ನ ಪ್ರಮುಖ ಗುರಿ ಆದ್ದರಿಂದ ಮಾಲೂರಿನ ಕೃಷ್ಣಯ್ಯಶೆಟ್ಟಿ, ಮುಳಬಾಗಿಲಿನ ಕೊತ್ತನೂರು ಮಂಜು ಎಲ್ಲರೂ ಒಟ್ಟಿಗೆ ಸೇರಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇವೆ ಎಂದು ಅವರು ಹೇಳಿದ್ದರು.
ಸದ್ಯ ಕೃಷ್ಣಯ್ಯ ಶೆಟ್ಟಿ ಚುನಾವಣೆಯಲ್ಲಿ ಸೋತು ಕಾಂಗ್ರೆಸ್ ಸೇರಿದ್ದಾರೆ. ಕೊತ್ತನೂರು ಮಂಜು ಮತ್ತು ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದಾರೆ. ವರ್ತೂರು ಮತ್ತು ಕೊತ್ತನೂರು ಮಂಜು ಕಾಂಗ್ರೆಸ್ ಸೇರಿ, ಪಕ್ಷದ ಚಿಹ್ನೆಯಿಂದ ಮತ್ತೊಮ್ಮೆ ಚುನಾವಣೆ ಎದುರಿಸಿ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದಾರೆ.
ಆದರೆ, ಸದ್ಯ ಸಚಿವ ಸಂಪುಟ ವಿಸ್ತರಣೆ ಬಗ್ಗೆ ತಲೆಕೆಡಿಸಿಕೊಂಡಿರುವ ಕಾಂಗ್ರೆಸ್ ಪಕ್ಷಾಂತರಿಗಳಿಗೆ ರತ್ನ ಗಂಬಳಿ ಸ್ವಾಗತ ಕೋರುವುದು ಕಷ್ಟಸಾಧ್ಯ. ಆದ್ದರಿಂದ ವರ್ತೂರು ಮತ್ತು ಮಂಜು ಕಾಂಗ್ರೆಸ್ ಸೇರಲು ಕೆಲವು ದಿನ ಕಾಯಬೇಕಾಗಬಹುದು. [ಕೋಲಾರದ ಗೆದ್ದ, ಸೋತ ಅಭ್ಯರ್ಥಿಗಳು]