ಡಿಸಿಎಂ ಇಲ್ಲ; ಡಾ ಜಿ ಪರಮೇಶ್ವರ್ಗೆ ಮಹತ್ವದ ಹುದ್ದೆ
ಬೆಂಗಳೂರು, ಮೇ 11- ತಾನೂ ಮುಖ್ಯಮಂತ್ರಿ ಆಗಬೇಕೆಂದು ಸಿದ್ದರಾಮಯ್ಯ ಅವರು ಕಂಡಿದ್ದ ಅರ್ಹ ಕನಸು ಕೊನೆಗೂ ನೆರವೇರಿದೆ. ಅದರೊಂದಿಗೆ ಕಾಂಗ್ರೆಸ್ ಹೈಕಮಾಂಡ್ ಸಹ ಆರಂಭದಲ್ಲೇ ಕಂಟಕವಾಗಬಹುದಾಗಿದ್ದ ದೊಡ್ಡ ಸಮಸ್ಯೆಯನ್ನು ಮೊಳಕೆಯಲ್ಲೇ ಪರಿಹರಿಸಿಕೊಂಡು ಮುನ್ನಡೆದಿದೆ.
ಹಾಗಂತ, ಮುಖ್ಯಮಂತ್ರಿ ಆಯ್ಕೆ ವಿಷಯದಲ್ಲಿ ಜಾಣ್ಮೆ ತೋರಿದ ಹೈಕಮಾಂಡಿಗೆ ಮುಂದೆ ಯಾವುದೇ ವಿಘ್ನಗಳಿಲ್ಲದೆ ಎಲ್ಲವೂ ಸುಸೂತ್ರವಾಗಿ ನಡೆದುಹೋಗುತ್ತದೆ ಅಂತಲ್ಲ. ತಕ್ಷಣಕ್ಕೆ ಎದುರಾಗುವುದು ಉಪಮುಖ್ಯಮಂತ್ರಿ ನೇಮಕ.
ಕರ್ನಾಟಕ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ತಾನಲ್ಲ ಎಂದು ಹೇಳುತ್ತಲೇ ಅದು ತನಗೇ ದಕ್ಕಬೇಕು ಎಂದು ದಿಲ್ಲಿ ಬಿಟ್ಟು ಬೆಂಗಳೂರಿನಲ್ಲೇ ಠಿಕಾಣಿ ಹೂಡಿಬಿಟ್ಟಿದ ಹಿರಿಯ ನಾಯಕ ಖರ್ಗೆ ಅವರಿಗೆ ಸುಸ್ಥಾನ ಕಲ್ಪಿಸುವುದು ಪಕ್ಷದ ಭವಿಷ್ಯದ ದೃಷ್ಟಿಯಿಂದ ಮುಖ್ಯವಾಗುತ್ತದೆ. ಹಾಗಾಗಿ ಈಗಾಗಲೇ ಕೇಳಿಬಂದಿರುವಂತೆ ಖರ್ಗೆ ಅವರಿಗೆ ರೈಲ್ವೆ ಸಚಿವ ಸ್ಥಾನಮಾನ ನೀಡಿಬಿಟ್ಟರೆ ನಿಜಕ್ಕೂ ಹೈಕಮಾಂಡ್ ಮತ್ತೊಮ್ಮೆ ಅಭಿನಂದನೆಗೆ ಅರ್ಹವಾಗುತ್ತದೆ.
ಇದರಿಂದ ಕರ್ನಾಟಕಕ್ಕೆ favour ಮಾಡಿ ಎಂದು ಹೇಳುವಂತಾಗುವುದಿಲ್ಲ. ಬದಲಿಗೆ ಪಕ್ಷದ ಹಿತದೃಷ್ಟಿಯಿಂದ ಇಂತಹ ನಡೆ ಒಳ್ಳೆಯದಾಗುತ್ತದೆ. ಪಕ್ಷ ಒಮ್ಮೆ ಈ ಬಗ್ಗೆ ಯೋಚಿಸಿ ನೋಡಲಿ.
ಇನ್ನು ಖರ್ಗೆ ಆಗುತ್ತಿದ್ದಂತೆ ಮುಖ್ಯಮಂತ್ರಿ ಪಟ್ಟದ ಕನಸು ಕಂಡವರು ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಅವರು. ಆದರೆ ಪಕ್ಷವನ್ನು ಜಯದತ್ತ ಕೊಂಡೊಯ್ಯುವ ಭರದಲ್ಲಿ/ಭಾರದಲ್ಲಿ ಸ್ವತಃ ಚುನಾವಣೆಯನ್ನು ಗೆಲ್ಲಲಾರದೆ ಹೋದ ಡಾ ಪರಮೇಶ್ವರ್ ಅವರ ಬಗ್ಗೆಯೂ ಪಕ್ಷ ಈಗ ಸಕಾರಾತ್ಮಕವಾಗಿ ಸ್ಪಂದಿಸಬೇಕಿದೆ.
ಏಕೆಂದರೆ ಪರಮೇಶ್ವರ್ ಅವರಿಗೆ ನ್ಯಾಯ ದೊರಕಿಸುವುದರ ಜತೆಜತೆಗೆ ದಲಿತ ವರ್ಗಕ್ಕೆ ನ್ಯಾಯ ದೊರೆಯಬೇಕಾದರೇ ಡಿಸಿಎಂ ಹುದ್ದೆ ಸೃಷ್ಟಿಯಾಗಬೇಕು ಮತ್ತು ಅದಕ್ಕೆ ಪರಮೇಶ್ವರ್ ಅವರನ್ನು ಪರಿಗಣಿಸಬೇಕು ಎಂದು ಒತ್ತಡ ಹಾಕುವ ವಾತಾವರಣ ಈಗಾಗಲೇ ನಿರ್ಮಾಣವಾಗಿದೆ.
ಇದೇ ವೇಳೆ ಡಿಕೆ ಶಿವಕುಮಾರ್ ಅವರ ಹೆಸರೂ ಕಾಣಿಸಿಕೊಂಡಿದೆ. ಡಿಕೆಶಿ ಪರ ಲಾಬಿ ಮಡುತ್ತಿರುವವರು ಒಕ್ಕಲಿಗರಿಗೇ ಡಿಸಿಎಂ ಹುದ್ದೆ ನೀಡಿ ಎನ್ನುತ್ತಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ನಲ್ಲಿ ಈ ಕ್ಷಣದವರೆಗೂ ಇಂತಹದೊಂದು ಚಿಂತನೆ ಮೂಡಿಲ್ಲ. ಏಕೆಂದರೆ, ಪೂರ್ಣ ಬಹುಮತದೊಂದಿಗೆ ಸ್ವಂತ ಶಕ್ತಿ ಮೇಲೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ರಾಜ್ಯಗಳಲ್ಲಿ ಎಲ್ಲಿಯೂ ಡಿಸಿಎಂ ಹುದ್ದೆ ಸೃಷ್ಟಿಸಿಲ್ಲ.
ಹೀಗಾಗಿ ರಾಜ್ಯದಲ್ಲೂ ಡಿಸಿಎಂ ನೇಮಕಾತಿ ನಡೆಯುವುದಿಲ್ಲ ಎಂದು ಒಂದೇ ಏಟಿಗೆ ಖರ್ಗೆ ಅವರನ್ನು ಹೊರತುಪಡಿಸಿ ಪರಮೇಶಿ ಮತ್ತು ಡಿಕೆಶಿ ಅವರನ್ನು ಪಕ್ಷ ನಿಯಂತ್ರಿಸಬಹುದು. ಅಲ್ಲಿಗೆ ಸದ್ಯಕ್ಕೆ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಂತಾಗುತ್ತದೆ. ಆದರೆ ಮುಂದಿದೆ ಸಂಪುಟ ರಚನೆ ಎಂಬ ಬೃಹನ್ನಾಟಕ. ಅಲ್ಲಿ ಹೈಕಮಾಂಡಿನ ದೂರದೃಷ್ಟಿ/ತಾಕತ್ತು/ಜಾಣ್ಮೆ ಎಲ್ಲವೂ ಪ್ರದರ್ಶನವಾಗುತ್ತದೆ. ಅಲ್ಲಿಯವರೆಗೂ ಕಾದುನೋಡೋಣ.