ನಾನ್ಯಾಕ್ರೀ ಸಿಎಂ ಆಗಬಾರದು: ಪರಮೇಶ್ವರ್ ಗುಡುಗು
'ಆಪರೇಶನ್ ಸಕ್ಸಸ್ ಬಟ್ ಪೇಷೆಂಟ್ ಡೈಡ್' ಅಂತಾರೆ. ಆದರೆ ಇಲ್ಲಿ ಪಕ್ಷವನ್ನು ಹಿಮಾಲಯಕ್ಕೇರಿಸಿ ನಮ್ಮ ಡಾಕ್ಟರ್ ಪರಮೇಶ್ವರ್ ಖುದ್ದು ಸೋತಿರುವುದು ಒಂದಷ್ಟು ಇರುಸುಮುರುಸು ತಂದಿದೆ. ಆದರೆ ಅದೇನೂ ತಮಗೆ ವರಿ ಅಲ್ಲ ಎನ್ನುತ್ತಿದ್ದಾರೆ ನಮ್ಮ ಪರಮೇಶ್ವರಿ.
ಕೆಪಿಸಿಸಿ ಅಧ್ಯಕ್ಷರಾಗಿ ಇಂದು CLP ಮೀಟಿಂಗ್ ಆಯೋಜಿಸಿರುವ ಡಾಕ್ಟರ್ ಪರಮೇಶ್ವರ್ ಅವರು ಸುದ್ದಿಗಾರರೊಂದಿಗೆ ಅನೌಪಚಾರಿಕವಾಗಿ ಮಾತನಾಡಿದರು. ಆ ವೇಳೆ ತಮ್ಮ ಸುಖ-ದುಃಖ ಹಂಚಿಕೊಂಡ ಡಾಕ್ಟರ್ ಪರಮೇಶ್ವರ್, ನಾನ್ಯಾಕ್ರೀ ಮುಖ್ಯಮಂತ್ರಿ ಆಗಬಾರದು ಎಂದೇ ನೇರವಾಗಿ ಅರ್ಜಿ ಹಾಕಿದರು.
'ನಾನೂ ಸಹ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಅಧಿಕಾರಕ್ಕೆ ಬರಲು ನನ್ನ ಶ್ರಮವೂ ಸಾಕಷ್ಟಿದೆ. ಹೀಗಾಗಿ ಸಿಎಂ ಸ್ಥಾನ ಕೇಳುತ್ತಿದ್ದೇನೆ. ಅದರಲ್ಲಿ ತಪ್ಪೇನಿದೆ' ಎಂದು ಪುನರುಚ್ಚರಿಸಿದ ಡಾಕ್ಟರ್ ಪರಮೇಶ್ವರ್, ನಾನು ಸುಮ್ಮಸುಮ್ಮನೆ ಆಕಾಂಕ್ಷೆ ಹೊಂದಿಲ್ಲ. ನನ್ನಲ್ಲೂ ಮುಖ್ಯಮಂತ್ರಿ ಕರ್ತವ್ಯವನ್ನು ನಿಭಾಯಿಸುವ ಸತ್ತ್ವ/ಸಾಮರ್ಥ್ಯವಿದೆ. ಮುಖ್ಯಮಂತ್ರಿಯನ್ನಾಗಿಸಿದರೆ ಖಂಡಿತ ಜವಾಬ್ದಾರಿ ಹೊರುತ್ತೇನೆ. ಅದರಲ್ಲಿ ಯಾರಿಗೂ ಅನುಮಾನ ಬೇಡ' ಎಂದು ಅರ್ಜಿ ಜತೆಗೆ ತಮ್ಮ ಶಕ್ತಿ-ಸಾಮರ್ಥ್ಯದ ಒಕ್ಕಣೆಯನ್ನೂ ನೀಡಿದರು.
ಹೌದಲ್ವಾ ಡಾಕ್ಟರ್ ಪರಮೇಶ್ವರ್ ಅವರೂ ಸಿಎಂ ಏಕಾಗಬಾರದು?