ಸಂಜಯ್ ಅರ್ಜಿ ತಿರಸ್ಕೃತ, ಜೈಲು ಶಿಕ್ಷೆ ಕಾಯಂ
ಈ ಹಿನ್ನೆಲೆಯಲ್ಲಿ ಮೇ 15ರಂದು ಸಂಜಯ್ ದತ್ ಅವರು ನ್ಯಾಯಾಲಯಕ್ಕೆ ಶರಣಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಮುಂಬೈನ ಟಾಡಾ ನ್ಯಾಯಾಲಯ ವಿಧಿಸಿದ್ದ 6 ವರ್ಷ ಶಿಕ್ಷೆಯನ್ನು 5 ವರ್ಷಕ್ಕೆ ಇಳಿಸಿ ಮಾರ್ಚ್ 21ರಂದು ಸುಪ್ರೀಂ ಕೋರ್ಟ್ ತೀರ್ಪು ಹೊರಡಿಸಿತ್ತು. ನ್ಯಾಯಾಲಯಕ್ಕೆ ಶರಣಾಗಲು ಎರಡು ತಿಂಗಳ ಕಾಲಾವಕಾಶ ಕೋರಿದ್ದ ದತ್, ನಂತರ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.
ಶಿಕ್ಷೆ ಕಾಯಂಗೊಳಿಸಿದ್ದ ನ್ಯಾಯಮೂರ್ತಿ ಪಿ. ಸತಶಿವಂ ಮತ್ತು ನ್ಯಾ. ಬಿ.ಎಸ್. ಚೌಹಾಣ್ ಅವರ ವಿಭಾಗೀಯ ಪೀಠ ಸಂಜಯ್ ಮತ್ತು ಇನ್ನೂ ಆರು ಅಪರಾಧಿಗಳು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಆಲಿಸಿ ಎಲ್ಲವನ್ನೂ ತಿರಸ್ಕರಿಸಿದೆ. ಸಂಜಯ್ ಜೊತೆ ಯುಸೂಫ್ ಮೊಹಸಿನ್ ನಲವಾಲಾ, ಖಲೀಲ್ ಅಹ್ಮದ್ ಸೈಯದ್, ಅಲಿ ನಾಜಿರ್, ಮೊಹಮ್ಮದ್ ದಾವೂದ್ ಯುಸೂಫ್ ಖಾನ್, ಶೇಖ್ ಅಸಿಫ್ ಯುಸೂಫ್, ಮುಜಮ್ಮಿಲ್ ಉಮರ್ ಖದ್ರಿ ಮತ್ತು ಮೊಹಮ್ಮದ್ ಅಹ್ಮದ್ ಶೇಖ್ ಅರ್ಜಿ ಸಲ್ಲಿಸಿದ್ದರು.
ದುಷ್ಕೃತ್ಯ ಎಸಗಲು ಭಾರತಕ್ಕೆ ತರಲಾಗಿದ್ದ ಶಸ್ತ್ರಾಸ್ತ್ರಗಳಲ್ಲಿನ 9 ಎಂಎಂ ಪಿಸ್ತೂಲು ಮತ್ತು ಎಕೆ 56 ರೈಫಲ್ ಅನ್ನು ಅಕ್ರಮವಾಗಿ ಇಟ್ಟುಕೊಂಡಿದ್ದ ಸಂಜಯ್ ದತ್ ಅವರಿಗೆ ಟಾಟಾ ನ್ಯಾಯಾಲಯ 2006ರಲ್ಲಿ 6 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಒಂದೂವರೆ ವರ್ಷ ಅವರು ಜೈಲಿನಲ್ಲಿ ಕಳೆದಿರುವುದರಿಂದ ಇನ್ನೂ 42 ತಿಂಗಳು ಅವರು ಜೈಲಿನಲ್ಲಿಯೇ ಕಳೆಯಬೇಕಾಗಿದೆ.