ಸಿಎಂ ಆಗದಿದ್ದರೆ ಸಿದ್ದು ಬಂಡಾಯಕ್ಕೆ ಕ್ಷಣಗಣನೆ
ಮೈಸೂರು, ಮೇ 10- ಸಿದ್ದರಾಮಯ್ಯ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗುತ್ತಾರಾ? ಗೊತ್ತಿಲ್ಲ. ಆದರೆ ಅವರು ಸಿಎಂ ಆಗದಿದ್ದರೆ 'ಸಿದ್ದು ಬಂಡಾಯ ಆರಂಭವಾಯ್ತು' ಎಂದು ಘಂಟಾಘೋಷವಾಗಿ ಹೇಳಬಹುದು. ಈ ಬಗ್ಗೆ ಇಂದು ಸ್ಪಷ್ಟ ಸುಳಿವು ಸಿಗಬಹುದು.
ಅದಮ್ಯ ಉತ್ಸಾಹ/ವಿಶ್ವಾಸದಲ್ಲಿರುವ ಸಿದ್ದರಾಮಯ್ಯ ಅವರು ಈ ನಿಟ್ಟಿನಲ್ಲಿ ಇನ್ನೂ ಹೆಜ್ಜೆಯಿಟ್ಟಿಲ್ಲವಾದರೂ ಆ ಬಗ್ಗೆ ಅವರ ಬೆಂಬಲಿಗ ಶಾಸಕರು ಅದಾಗಲೇ ಶುರುಹಚ್ಚಿಕೊಂಡಿದ್ದಾರೆ. ಆದರೆ ಸಿದ್ರಾಮಣ್ಣನೇ ಸಿಎಂ ಆಗಬೇಕು ಎಂಬುದು ಆ ನೂತನ ಶಾಸಕರ ವರಾತ.
ಅಸಲಿಗೆ ಸಿದ್ದರಾಮಯ್ಯ ಸಿಎಂ ಆಗೋದ್ ಬೇಡ ಎನ್ನುವವರ ಸಂಖ್ಯೆಯೂ ಕಾಂಗ್ರೆಸ್ಸಿನಲ್ಲಿ ಬಹಳಷ್ಟಿದೆ. ಆದರೆ ಹಾಗಂತ ಸಿದ್ದು ಬೇಡ ಎನ್ನವುದಾದರೆ ಕಾಂಗ್ರೆಸ್ಸಿಗೆ ಭಾರಿ ಡ್ಯಾಮೇಜ್ ಮಾಡಲು ಸಿದ್ದು ಪಡೆ ಸಿದ್ಧವಾಗಿದೆ.
ಅದಕ್ಕೂ ಮುನ್ನ, ಅನಾಯಾಸವಾಗಿ ದೊರೆತಿರುವ ಅವಕಾಶವನ್ನು ಹಾಳುಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಸಿದ್ಧವಿಲ್ಲ. ಆದರೆ ಸಿಎಂ ಆಯ್ಕೆ ಸಮಸ್ಯೆಯಾಗಿ ಕಾಡುತ್ತಿರುವುದಂತೂ ದಿಟ. ಸಮಸ್ಯೆಯನ್ನು ನಾಜೂಕಾಗಿ ಪರಿಹರಿಸುವಲ್ಲಿ ಹೈಕಮಾಂಡ್ ಸೋತರೆ ಏಳು ವರ್ಷಗಳಿಂದ ವನವಾಸದಲ್ಲಿರುವ ಕಾಂಗ್ರೆಸ್ ಅಂಧಃಪತನ ಕಾಣುವುದಂತೂ ಖಚಿತ.
ಹಾಗೆ ನೋಡಿದರೆ ಚುನಾವಣೆ ಘೋಷಣೆಗೂ ಮುನ್ನವೇ ಕರ್ನಾಟಕದ ಮತದಾರ ಈ ಬಾರಿ ಕಾಂಗ್ರೆಸ್ಸಿಗೇ ಮತ ಹಾಕಬೇಕು ಎಂದು ನಿರ್ಧರಿಸಿಯಾಗಿತ್ತು. ಅಂತಹುದರಲ್ಲಿ ಮತ್ತದೇ ಒಳಜಗಳಗಳು, ದುರಾಡಳಿತ ಶುರುವಿಟ್ಟುಕೊಂಡರೆ ಕಾಂಗ್ರೆಸ್ಸನ್ನು ಆ ದೇವರೇ ಕಾಪಾಡಬೇಕಾಗುತ್ತದೆ.
ಒಂದು ಮೂಲದ ಪ್ರಕಾರ, ಸಿದ್ದರಾಮಯ್ಯ ಬೆಂಬಲಕ್ಕೆ 40-45 ಶಾಸಕರು ನಿಂತಿದ್ದಾರೆ. ಒಂದು ವೇಳೆ ಹೈಕಮಾಂಡ್ ಕ್ಯಾತೆ ತೆಗೆದು ಸಿದ್ದುಗೆ ಸಿಎಂ ಗದ್ದುಗೆ ನೀಡಲಿದ್ದವೆಂದರೆ ಆ 40-45 ಶಾಸಕರೊಂದಿಗೆ ಸಿದ್ದರಾಮಯ್ಯ ಬಂಡಾಯವೇಳಲು ಸಜ್ಜಾಗಿದ್ದಾರೆ ಎನ್ನಲಾಗಿದೆ. ಹಾಗಾದಲ್ಲಿ 'ಕೈ'ಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗುತ್ತದೆ ರಾಜ್ಯ ಕಾಂಗ್ರೆಸ್ ಪರಿಸ್ಥಿತಿ. ಯಾವುದಕ್ಕೂ, ಇಂದು ಸಂಜೆಯ ವೇಳೆಗೆ ಸ್ಪಷ್ಟ ಸುಳಿವು ಸಿಗುವ ಲಕ್ಷಣಗಳಿವೆ.