ವಿರೋಧಪಕ್ಷವೇ ಇಲ್ಲದಂತೆ ಮಾಡಿರುವ ಜನಾದೇಶ!
ಸದ್ಯಕ್ಕಂತೂ ಪ್ರತಿಪಕ್ಷದ ಅಸ್ತಿತ್ವದ ಬಗ್ಗೆ ಗೊಂದಲ ಮೂಡಿದೆ. ಸಂಪ್ರದಾಯದ ಪ್ರಕಾರ ಯಾವುದು ಹೆಚ್ಚು ಸ್ಥಾನ ಗಳಿಸಿ, ಎರಡನೆಯ ಸ್ಥಾನದಲ್ಲಿರುತ್ತದೋ ಅದು ಪ್ರತಿಪಕ್ಷವಾಗುತ್ತದೆ.
ಇನ್ನೇನು ಕೆಲವೇ ಕ್ಷಣಗಳಲ್ಲಿ ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರ ಅಧಿಕಾರ ತ್ಯಜಿಸಲಿದೆ. ಆದರೆ ಆಡಳಿತಾರೂಢ ಪಕ್ಷ ವಿರೋಧ ಪಕ್ಷವಾಗಿಯಾದರೂ ಅಸ್ತಿತ್ವ ಉಳಿಸಿಕೊಳ್ಳಲಿದೆಯಾ ಅಂದರೆ ಸದ್ಯಕ್ಕೆ ನೋ ಛಾನ್ಸ್ ಎಂಬ ಉತ್ತರ ದಕ್ಕಿದೆ. ಇನ್ನು ಕಳೆದ ಬಾರಿಗಿಂತ 12 ಸ್ಥಾನ ಹೆಚ್ಚಿಗೆ ಗಳಿಸಿರುವ ಜೆಡಿಎಸ್ ಪಕ್ಷವು 14ನೇ ವಿಧಾನಸಭೆಯಲ್ಲಿ ಪ್ರಮುಖ ಪ್ರತಿಪಕ್ಷವಾಗುತ್ತದಾ ಅಂದರೆ ಅದಕ್ಕೂ ಆ ಅವಕಾಶವಿಲ್ಲ.
ಏಕೆಂದರೆ ಮತದಾರ ಪ್ರಭು ಆ ಎರಡೂ ಪಕ್ಷಗಳಿಗೆ ಸಮ-ಸಮ (40-40) ಸ್ಥಾನಗಳನ್ನು ದಯಪಾಲಿಸಿದ್ದಾನೆ. ಸೋ, ವಿಧಾನಸಭೆಯಲ್ಲಿ ಪ್ರಧಾನ ಪ್ರತಿಪಕ್ಷ ಯಾವುದು?
ಇದಕ್ಕೆ ಮತ್ತೊಂದು ಅವಕಾಶವೂ ಇದೆ. ಏನಪ್ಪಾ ಅಂದರೆ ಮೇ 25ರಂದು ಪಿರಿಯಾಪಟ್ಟಣದಲ್ಲಿ ಚುನಾವಣೆ ನಡೆಯಲಿದೆ. ಅಲ್ಲೇನಾದರೂ ತನ್ನ ಅಭ್ಯರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಅನುಕಂಪದ ಆಧಾರದಲ್ಲಿ ಬಿಜೆಪಿ ಗೆದ್ದರೆ ಅದರ ಟ್ಯಾಲಿ 41ಕ್ಕೇರುತ್ತದೆ.
ಆಗ ಸಂಖ್ಯಾಬಲದ ಮೇಲೆ ಎರಡನೆಯ ದೊಡ್ಡ ಪಕ್ಷವಾಗುವುದರ ಜತೆಗೆ ಪ್ರಮುಖ ಪ್ರತಿಪಕ್ಷ ಸ್ಥಾನವೂ ಲಭಿಸುತ್ತದೆ. ಆದರೆ ಇಡೀ ರಾಜ್ಯದ ಮತದಾರರು ಬಿಜೆಪಿಯನ್ನು ತಿರಸ್ಕರಿಸಿರುವಾಗ ಪಿರಿಯಾಪಟ್ಟಣದವರಿಗೇನು ತಲೆಕೆಟ್ಟಿದೆಯೇ ಬಿಜೆಪಿಯನ್ನು (ಒ)ಅಪ್ಪಿಕೊಳ್ಳಲು?
ಅಥವಾ ಪಿರಿಯಾಪಟ್ಟಣದ ಮತದಾರ ಪ್ರಭು ಗೆದ್ದೆತ್ತಿನ ಬಾಲ ಹಿಡಿಯುವಂತೆ ಕಾಂಗ್ರೆಸ್ಸಿಗೆ ಶರಣಾದರೆ ಅದರ ಟ್ಯಾಲಿ 122ಕ್ಕೆ ತಲುಪುತ್ತದೆ, ಅಷ್ಟೇ. ಪ್ರಮುಖ ಪ್ರತಿಪಕ್ಷ ಯಾವುದು ಎಂಬ ಗೊಂದಲ ಹಾಗೇ ಮುಂದುವರಿಯುತ್ತದೆ.
ಅಥವಾ ಮತದಾರ ಪ್ರಭು ತನ್ನನ್ನು ತಿರಸ್ಕರಿಸಿದ್ದಾನೆ ಎಂದು ಬಿಜೆಪಿ ತನಗಾದ ಸೋಲನ್ನು ಒಪ್ಪಿಕೊಂಡು ಜೆಡಿಎಸ್ ಗೇ ಆ ಸ್ಥಾನ ಬಿಟ್ಟುಕೊಡುತ್ತದಾ? ಕಾದುನೋಡಬೇಕು.
ಅಥವಾ ಕೊನೆಗೆ ಕ್ರಿಕೆಟ್ಟಿನಲ್ಲಿರುವಂತೆ ಟಾಸ್ ಅಥವಾ Duckworth Lewis Method ಜಾರಿಯಾಗುತ್ತದಾ? ಏನೋ ನನಗಂತೂ ಇದರ ಬಗ್ಗೆ ಹೆಚ್ಚು ತಿಳಿವಳಿಕೆಯಿಲ್ಲ, ಸಂವಿಧಾನ ತಜ್ಞರು ಇದರ ಬಗ್ಗೆ ಬೆಳಕು ಚೆಲ್ಲಬೇಕು.