ಚಂದ್ರಶೇಖರ ಸ್ವಾಮಿಗೆ ದುಬೈ ಮಹಿಳೆಯ ನಂಟು
ಆದಾಯ ತೆರಿಗೆ ಅಧಿಕಾರಿಗಳು ಚಂದ್ರಶೇಖರ ಸ್ವಾಮೀಜಿ ಮನೆಯಲ್ಲಿ ಹಬ್ಬ ಆಚರಿಸಿದ್ದು ಯಾವಗಪ್ಪಾ ಅಂದರೆ ಈ ನಿಧಿಗಳಿಂದ ಅಮೂಲ್ಯವಾದ ದಾಖಲಾತಿಗಳ ನಿಧಿ ಸಿಕ್ಕಿದಾಗ. ಹೌದು ಈ ದಾಖಲಾತಿಗಳು ಅಧಿಕಾರಿಗಳನ್ನು ಸ್ವಾಮೀಜಿ ಸಮೇತ ನೇರವಾಗಿ ವಿದೇಶಗಳಿಗೆ ಕೊಂಡೊಯ್ದಿದೆ. ತನ್ಮೂಲಕ ಚಂದ್ರಶೇಖರ ಸ್ವಾಮೀಜಿ ಮುಖವಾಡ ಸಂಪೂರ್ಣವಾಗಿ ಕಳಚಿ ಬಿದ್ದಿದೆ.
ದುಬೈ - ರೋಹಿಣಿ ನಂಟು: ಚಂದ್ರಶೇಖರ ಸ್ವಾಮೀಜಿ ದುಬೈನಲ್ಲೂ ಭಾರಿ ವ್ಯವಹಾರಗಳನ್ನು ನಡೆಸುತ್ತಿರುವುದು ದಾಖಲಾತಿಗಳ ಮೂಲಕ ಅಧಿಕಾರಿಗಳಿಗೆ ಮನದಟ್ಟಾಗಿದೆ. ಇದಕ್ಕೆ ನೆರವಾಗಿರುವುದು ಒಬ್ಬ ಮಹಿಳೆ ಎಂಬುದು ಅಧಿಕಾರಿಗಳ ಅಂಬೋಣ. ಆ ಮಹಿಳೆ ದೂರದ ದುಬೈನವಳಲ್ಲ, ಬದಲಿಗೆ ಇಲ್ಲೇ ಆರ್ ಟಿ ನಗರದ ಪಕ್ಕದಲ್ಲೇ ಇರುವ ಸದಾಶಿವ ನಗರದ ಪ್ರಭಾವಿ ಮಹಿಳೆ (ರೋಹಿಣಿ) ಎಂದು ತಿಳಿದುಬಂದಿದೆ.
ಪ್ರಭಾವಿ ರಾಜಕಾರಣಿಗಳು, ಪ್ರತಿಷ್ಠಿತ ಚಿತ್ರ ತಾರೆಯರು, ಉದ್ಯಮಿಗಳ ಪರವಾಗಿ ಆರ್ ಟಿ ನಗರದ ಸಾಮೀಜಿ ಹಣಕಾಸು ಲೇವಾದೇವಿ ನಡೆಸುತ್ತಿದ್ದ ಎಂಬುದು ಬೆಳಕಿಗೆ ಬಂದಿದೆ. ಸ್ವಾಮೀಜಿ ಮನೆಯ ಮೇಲೆ ಶನಿವಾರ-ಭಾನುವಾರ ಸಾವಕಾಶವಾಗಿ ದಾಳಿ ನಡೆಸಿದ್ದ ಅಧಿಕಾರಿಗಳು ಆ ನಂತರ ಸ್ವಾಮೀಜಿಯ ಆಪ್ತರ ಮನೆಗಳ ಮೇಲೂ ದಾಳಿಯಿಟ್ಟಾಗ ಈ ನಗ್ನ ಸತ್ಯಗಳು ಹೊರಬಿದ್ದಿವೆ.
ಹಣಕಾಸು ಲೇವಾದೇವಿ ಜತೆಗೆ, ಸ್ವಾಮೀಜಿ ರಿಯಲ್ ಎಸ್ಟೇಟ್ ವಹಿವಾಟನ್ನೂ ನಡೆಸುತ್ತಿದ್ದ ಎಂಬ ಮಾಹಿತಿಯೂ ಸಿಕ್ಕಿದೆ. ಅದರ ಹೊರತಾಗಿ, ಸರಿ ಆ ಪಾಟಿ ಚಿನ್ನ (15 ಕೆಜಿ), ಬೆಳ್ಳಿ (ಅರ್ಧ ಟನ್), ವಜ್ರ ಯಾಕಪ್ಪಾ ಮನೆಯಲ್ಲಿ ಇಟ್ಟುಕೊಂಡಿದ್ದೆ ಎಂದು ಅಧಿಕಾರಿಗಳು ಕೇಳಿದ್ದಕ್ಕೆ 'ಅವೆಲ್ಲಾ ನನ್ನ ಭಕ್ತರು ನೀಡಿರುವ ಕಾಣಿಕೆಗಳು' ಎಂದು ಸ್ವಾಮೀಜಿ ಹೇಳಿಕೊಂಡಿದ್ದಾನೆ. ಹಾಗಾದ್ರೆ ಕೋಟ್ಯಂತರ ದುಡ್ಡು ಎಲ್ಲಿಂದ ಬಂತು ಅಂದಿದ್ದಕ್ಕೆ ಮುಲ್ಕಿಯ ವಿಶ್ವ ಪ್ರಸಿದ್ಧ ಜ್ಯೋತಿಷಿ ಚಂದ್ರಶೇಖರ ಸ್ವಾಮೀಜಿ ಬೆಬ್ಬೆಬ್ಬೆ ಅಂದಿದ್ದಾನೆ .
500 ಕೋಟಿಗೂ ಹೆಚ್ಚು ಆಸ್ತಿ: ಚಂದ್ರಶೇಖರ ಸ್ವಾಮೀಜಿ ತನ್ನ ಆದಾಯಕ್ಕೆ ಕಾನೂನು ಪ್ರಕಾರವಾಗಿ 6 ರಿಂದ 8 ಲಕ್ಷ ರೂ. ವರೆಗೆ ವಾರ್ಷಿಕ ಆದಾಯ ತೆರಿಗೆ ಪಾವತಿಸಿದ್ದಾನೆ. ಆದರೆ ಸ್ವಾಮೀಜಿ ತಾವು ಘೋಷಿಸಿಕೊಂಡ ಆಸ್ತಿಗಿಂತ ಎರಡು ಪಟ್ಟು ಅಧಿಕ ಅಂದರೆ ಸುಮಾರು 500 ಕೋಟಿ ರೂ. ಗೂ ಹೆಚ್ಚಿನ ಆಸ್ತಿ ಸಂಪಾದಿಸಿದ್ದಾರೆ ಎನ್ನಲಾಗಿದೆ.